i
ಸರ್ಕಾರಕ್ಕೆ ಮಾನ ಮರ್ಯಾದೆ ಶಾಸಕ ತಿಪ್ಪಾರೆಡ್ಡಿ ಅವರ ಭ್ರಷ್ಟಾಚಾರ ತನಿಖೆ ಆಗಲಿ;ಬಾಲಕೃಷ್ಣಸ್ವಾಮಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಅವರು ಬೆಂಗಳೂರು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಫಾರೆಡ್ಡಿ ಅವರ ಮೇಲೆ ಕಮೀಷನ್ ಹಾಗೂ ಭ್ರಷ್ಟಾಚಾರ ಆರೋಪ ಮಾಡಿರುವ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಕೂಡಲೇ ಸಮಗ್ರ ತನಿಖೆಗೆ ಒಳಪಡಿಸಬೇಕೆಂದು ಕೆಪಿಸಿಸಿ ಸಂಯೋಜಕ ಹಾಗೂ ರಾಜ್ಯ ಮಾಧ್ಯಮ ವಕ್ತಾರ ಜಿ.ಬಿ.ಬಾಲಕೃಷ್ಣಸ್ವಾಮಿ ಯಾದವ್ ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಗುತ್ತಿಗೆದಾರರಿಗೆ ಶಾಸಕರು ಕಮೀಷನ್ ಹಣ ಕೊಡುವಂತೆ ಅಧಿಕಾರಿಗಳ ಮೂಲಕ ಧಮಿಕಿ ಹಾಕಿಸುತ್ತಿರುವ ಬಗ್ಗೆಯೂ ಆರೋಪ ಕೇಳಿ ಬರುತ್ತಿದೆ. ಗುತ್ತಿಗೆದಾರರು ಶಾಸಕರ ಕಿರುಕುಳದಿಂದ ಬೇಸತ್ತಿದ್ದು ಯಾವ ಮಟ್ಟಿಗೆ ಶಾಸಕರು ಭ್ರಷ್ಟಾಚಾರ ಮಾಡಿರಬಹುದು ಎಂದು ಊಹಿಸಬಹುದಾಗಿದೆ. ಆ ಕಾರಣ ಬಿಜೆಪಿ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಬಿಜೆಪಿ ಪಕ್ಷದ ಹಿರಿಯ ಶಾಸಕ ಜಿ.ಹೆಚ್.ತಿಪ್ಫಾರೆಡ್ಡಿಯವರೇ ಈ ರೀತಿಯ ಕಮೀಷನ್ ದಂಧೆ ಮಾಡಿದರೆ ಹೇಗೆ ಕಾಮಗಾರಿ ಗುತ್ತಿಗೆ ನೀಡಿ ಹಣ ಪಡೆಯುವ ದಂಧೆ ನಡೆಸುತ್ತಿದ್ದಾರೆಂದರೇ ಇತರೆ ಬಿಜೆಪಿ ಶಾಸಕರ ಸ್ಥಿತಿ ಏನು ಎಂಬುದು ಯೋಚಿಸಬೇಕಾಗಿದೆ. ರಾಜ್ಯದಲ್ಲಿ ಈ ರೀತಿಯ ಬಿಜೆಪಿ ಶಾಸಕರು ಭ್ರಷ್ಟಾಚಾರದಲ್ಲಿ ತೊಡಗಿರುವುದು ಪ್ರಜಾಪ್ರಭುತ್ವಕ್ಕೆ ಮಸಿ ಬಳಿದಂತೆ ಆಗುತ್ತಿದೆ. ಈ ಹಿಂದೆ ಶೇ.40 ಪರ್ಸೆಂಟ್ ಸರ್ಕಾರ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರು ಆಪಾದಿಸಿರುವುದು ಸತ್ಯಕ್ಕೆ ಸಮೀಪವಾದಂತಾಗಿದೆ ಎಂದು ಯಾದವ್ ಆರೋಪಿಸಿದ್ದಾರೆ.
ಬಿಜೆಪಿ ನೇತೃತ್ವದ ಸರ್ಕಾರ ಹಾಗೂ ಬಿಜೆಪಿ ಶಾಸಕರ ಪರ್ಸೇಂಟೇಜ್ ದಂಧೆಯಿಂದ ಈಗಾಗಲೇ ಗುತ್ತಿಗೆದಾರರು ಸರಣಿ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯ ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ. ಸರ್ಕಾರಕ್ಕೆ ನಿಜವಾದ ಮಾನ ಮರ್ಯಾದೆ ಇದ್ದರೇ ಈ ಕೂಡಲೇ ಶಾಸಕ ಜಿ.ಹೆಚ್.ತಿಪ್ಫಾರೆಡ್ಡಿ ಅವರ ಭ್ರಷ್ಟಾಚಾರದ ಆರೋಪವನ್ನು ಕೂಡಲೇ ತನಿಖೆಗೆ ಒಳಪಡಿಸಬೇಕೆಂದು ಜಿ.ಬಿ.ಬಾಲಕೃಷ್ಣ ಸ್ವಾಮಿ ಯಾದವ್ ಒತ್ತಾಯಿಸಿದ್ದಾರೆ.