i
ಕೊಳಚೆ ನೀರು ರಸ್ತೆಗೆ, ದುರ್ನಾತ ಹರಡಿ ಸಾರ್ವಜನಿಕರು ಸುಸ್ತು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಬೆಂಗಳೂರು ರಸ್ತೆಯ ಗಾಂಧಿ ನಗರದ ಮುಂಭಾಗದಲ್ಲಿರುವ ಒಳಚರಂಡಿ ಮ್ಯಾನ್ಹೋಲ್ ಕಟ್ಟಿಕೊಂಡ ಪರಿಣಾಮ ತುಂಬಿದ ಕೊಳಚೆ ನೀರು ರಸ್ತೆಯುದ್ದಕ್ಕೂ ಹರಿಯುತ್ತಿದ್ದು ಸುತ್ತಲೂ ದುರ್ನಾತ ಹರಡಿ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಸಾಕಷ್ಟು ಬಡ ಕುಟುಂಬಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಸಾಕಷ್ಟು ಶೋಷಿತ ಸಮುದಾಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಗಾಂಧಿ ನಗರ ನಿವಾಸಿಗಳ ನೋವು ಹೇಳ ತೀರಿದಾಗಿದೆ.
ನಗರದ ಐಯುಡಿಪಿ ಬಡಾವಣೆ ಸೇರಿದಂತೆ ಪ್ರಮುಖ ಬಡಾವಣೆಗಳಿಗೆ ತೆರಳುವ ಮುಖ್ಯ ರಸ್ತೆಯೂ ಆಗಿರುವ ಈ ರಸ್ತೆಯಲ್ಲೇ ವಿದ್ಯಾರ್ಥಿಗಳು ಓಡಾಡುತ್ತಾರೆ. ಮ್ಯಾನ್ಹೋಲ್ ಪಕ್ಕದಲ್ಲಿರುವ ಕಾಲೋನಿಯ ಸಾವಿರಾರು ಜನರೂ ಇದೇ ಮಾರ್ಗವಾಗಿದ್ದು ವಾಹನ ಸವಾರರೂ ಕಿರಿಕಿರಿ ಅನುಭವಿಸುವಂತಾಗಿದೆ.
ಅಸಮರ್ಪಕ ಒಳಚರಂಡಿ ನಿರ್ವಹಣೆಯಿಂದಾಗಿ ಈ ರೀತಿ ಮ್ಯಾನ್ಹೋಲ್ ಕಟ್ಟಿಕೊಂಡು ಕೊಳಚೆ ನೀರು ರಸ್ತೆಗೆ ಹರಿಯಲು ಪ್ರಮುಖ ಕಾರಣವಾಗಿದೆ. ಒಳಚರಂಡಿ ವಿಚಾರದಲ್ಲಿ ಈ ರೀತಿಯ ಅವ್ಯವಸ್ಥೆ ಇದೇ ಮೊದಲೇನಲ್ಲ. ನಗರದ ಕೆಲವು ವಾರ್ಡ್ಗಳಲ್ಲಿ ಇದೇ ರೀತಿ ಮ್ಯಾನ್ಹೋಲ್ ಕಟ್ಟಿಕೊಂಡು ಅನೇಕ ಬಾರಿ ಸಾರ್ವಜನಿಕರಿಗೆ ಕಿರಿಕಿರಿಯಾಗಿರುವುದು ತಪ್ಪಿಲ್ಲ. ನಗರಸಭೆಯವರಾಗಲೀ ಅಥವಾ ಒಳಚರಂಡಿ ನಿರ್ವಹಣೆ ಜವಾಬ್ದಾರಿ ಹೊತ್ತವರಾಗಲೀ ಸೂಕ್ತ ಸಮಯದಲ್ಲಿ ಸಮಸ್ಯೆ ಬಗೆಹರಿಸುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಲೇ ಇರುತ್ತಾರೆ.
ಜನರಿಗಾಗುವ ತೊಂದರೆ ತಪ್ಪಿಸಬೇಕಾದ ಸಂಬಂಧಪಟ್ಟವರಿಗೆ ಎಷ್ಟೇ ದೂರುಗಳನ್ನು ನೀಡಿ ಕರೆ ಮಾಡಿದರೂ ಪ್ರಯೋಜನವಾಗುವುದಿಲ್ಲ ಎನ್ನುವ ಸಾರ್ವಜನಿಕರು, ನಗರಸಭೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ. ಅದು ಬೇಜವಾಬ್ದಾರಿತನ ಪ್ರದರ್ಶಿಸುತ್ತದೆ ಎಂಬುದು ನಾಗರಿಕರ ಆರೋಪ. ನಗರದಲ್ಲಿ ಮ್ಯಾನ್ಹೋಲ್ಗಳು ಆಗಾಗ್ಗೆ ಈ ರೀತಿ ಕಟ್ಟಿಕೊಂಡು ಸಮಸ್ಯೆಯಾಗಲು ಒಳಚರಂಡಿ ಕಾಮಗಾರಿ ಸಮರ್ಪಕವಾಗಿ ಇರದಿರುವುದು ಪ್ರಮುಖ ಕಾರಣವಾಗಿದೆ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.