i
ರೈತರ ಅಕ್ರಮ ಬಂಧನ, ರೈತರನ್ನ ಬೆದರಿಸಲು ಲಾಠಿ ಎತ್ತಿದ ಪೊಲೀಸರು, ಸದನದಲ್ಲಿ ಶಾಸಕಿ ಧ್ವನಿ ಎತ್ತಲಿ ರೈತರ ಆಗ್ರಹ…
ಆತಂಕದಲ್ಲಿ ರೈತ ಕುಟುಂಬ, ಪೊಲೀಸ್ ರಕ್ಷಣೆಯೊಂದಿಗೆ ಕಾಮಗಾರಿ ಆರಂಭ….
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪೊಲೀಸರ ರಕ್ಷಣೆಯೊಂದಿಗೆ ಹರಿಯಬ್ಬೆ-ಹಿರಿಯೂರು ವಿದ್ಯುತ್ ಲೈನ್ ಎಳೆಯಲು ಮುಂದಾಗಿದ್ದು ಸೂಕ್ತ ಪರಿಹಾರ ನೀಡಿ ವಿದ್ಯುತ್ ಲೈನ್ ಎಳೆಯುವಂತೆ ಪಟ್ಟು ಹಿಡಿದಿದ್ದ 13 ಮಂದಿ ರೈತರನ್ನು ಪೊಲೀಸರು ಹೆದರಿಸಿ ಬೆದರಿಸಿ ಅಕ್ರಮವಾಗಿ ಬಂಧನದಟ್ಟಿದ್ದು ರೈತ ಕುಟುಂಬಗಳು ಭಯ ಭೀತಿಯಿಂದ ಆತಂಕ ಎದುರಿಸುವಂತಾಗಿದೆ.
ಹಿರಿಯೂರು ತಾಲೂಕಿನ ಶಿಡ್ಲಯ್ಯನಕೋಟೆ ಸಮೀಪದಲ್ಲಿ ಜಿಲ್ಲಾಡಳಿತ, ಕೆಪಿಟಿಸಿಎಲ್ ಪೊಲೀಸ್ ಅಧಿಕಾರಿಗಳು ಹೈಕೋರ್ಟ್ ಆದೇಶವಿದೆ ಕಾನೂನು ರೀತಿಯಲ್ಲಿ ಲೈನ್ ಎಳೆಯಲು ಅನುವು ಮಾಡಿಕೊಡಬೇಕು, ನಿಮಗೆ ಹೆಚ್ಚಿನ ಪರಿಹಾರ ಬೇಕಿದ್ದರೆ ನ್ಯಾಯಾಲಯಕ್ಕೆ ಹೋಗಿ, ನೀವು ಲೈನ್ ಎಳೆಯಲು ಸಹಕಾರ ನೀಡಿದ್ದರೆ ಕಾನೂನು ಮಾತನಾಡಲಿದೆ ಎಂದು ಪೊಲೀಸರು ರೈತರನ್ನ ಹೆದರಿಸುವ ಕಾರ್ಯವನ್ನೂ ಮಾಡಿದರು.
ಪೊಲೀಸರ ಕೋರಿಕೆಗೆ ಸೊಪ್ಪು ಹಾಕದಿದ್ದಾಗ ಪೊಲೀಸರು ರೈತರನ್ನ ಬೆದರಿಸಿ ಚದುರಿಸಲು ಲಾಠಿಯನ್ನು ಎತ್ತಬೇಕಾಯಿತು. ಹಿರಿಯೂರು ತಾಲೂಕಿನ ಹರಿಯಬ್ಬೆ ಮುಂಗಸವಳ್ಳಿ ಗೂಳ್ಯ ಶಿಡ್ಲಯ್ಯನಕೋಟೆ ಸೇರಿದಂತೆ ಮತ್ತಿತರರ ಗ್ರಾಮಗಳ ಯಾವುದೇ ರೈತರು ವಿದ್ಯುತ್ ಲೈನ್ ಎಳೆಯಲು ಅಡ್ಡಿ ಮಾಡುವುದಿಲ್ಲ, ಆದರೆ ಈ ಹಿಂದೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕ್ಷೇತ್ರದ ಶಾಸಕರ ಕಚೇರಿಯಲ್ಲಿ ನಡೆದ ಸಂಧಾನ ಸಭೆಯಂತೆ ಪರಿಹಾರ ಕೊಡುವುದಾಗಿ ಒಪ್ಪಿ, 2 ತಿಂಗಳಿಂದ ನಾಪತ್ತೆ ಆಗಿ ಈಗ ಏಕಾಏಕಿ ಪೊಲೀಸ್ ರಕ್ಷಣೆಯೊಂದಿಗೆ ರೈತರನ್ನ ಹೆದರಿಸಿ ಬೆದರಿಸಿ ವಿದ್ಯುತ್ ಲೈನ್ ಎಳೆಯುತ್ತಿರುವುದು ಎಷ್ಟು ಸಮಂಜಸ, ರೈತರು ನ್ಯಾಯ ಕೇಳುವುದೇ ತಪ್ಪಾ ಎಂದು ರೈತರು ಪೊಲೀಸರನ್ನು ಪ್ರಶ್ನಿಸಿದರು.
ಮಾರುಕಟ್ಟೆ ಬೆಲೆಗೆ ಸಮನಾಗಿ ಭೂ ಪರಿಹಾರ, ಮೈಸೂರು ಜಿಲ್ಲಾಧಿಕಾರಿಗಳ ಆದೇಶದಂತೆ ಪ್ರತಿ ಎಕರೆಗೆ 25 ಲಕ್ಷ ರೂ.ಗಳ ಪರಿಹಾರ, ಕಾರಿಡಾರ್ ಪರಿಹಾರ, ತೋಟಗಾರಿಕೆ ಬೆಳೆಗಳ ಪರಿಹಾರ ನೀಡಿ ಯಾವುದೇ ಸಂದರ್ಭದಲ್ಲಿ ಲೈನ್ ಎಳೆಯಲು ರೈತರು ಅಡ್ಡಿ ಮಾಡುವುದಿಲ್ಲ, ಪರಿಹಾರ ನೀಡದೇ ಲೈನ್ ಎಳೆಯಲು ಮುಂದಾದರೆ ರೈತರ ಹೆಣಗಳ ಮೇಲೆ ವಿದ್ಯುತ್ ಲೈನ್ ಎಳೆಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾಡಳಿತವಾಗಲಿ, ಪೊಲೀಸರಾಗಲಿ ಹೈಕೋರ್ಟ್ ಆದೇಶವನ್ನು ಇಂದಿಗೂ ರೈತರಿಗೆ ನೀಡಿಲ್ಲ, ನ್ಯಾಯಾಲಯವು ರೈತರಿಗೆ ಪರಿಹಾರ ಕೊಡದೇ ಲೈನ್ ಎಳೆಯಲಿ ಎಂದು ಹೇಳುವ ಸಾಧ್ಯತೆಯೇ ಇಲ್ಲ, ಮೊದಲು ಹೈಕೋರ್ಟ್ ಏನು ಹೇಳಿದೆ ಎನ್ನುವ ಆದೇಶವನ್ನು ರೈತರಿಗೆ ನೀಡಬೇಕು ಎಂದು ಪಟ್ಟು ಹಿಡಿದರು.
ರೈತರ ಯಾವುದೇ ಮಾತುಗಳನ್ನು ಕೇಳಿಸಿಕೊಳ್ಳದ ಪೊಲೀಸರು ವ್ಯಾನಿಗೆ ತಳ್ಳಿ ಬಂಧಿಸುತ್ತಿದ್ದಂತೆ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿದರು. ರೈತರ ಯಾವುದೇ ರೀತಿಯ ಮನವಿಗೂ ಅಸ್ಪಾದಕೊಡದ ಪೊಲೀಸರು ಶುಕ್ರವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ 13 ಮಂದಿ ರೈತರನ್ನು ನಿರ್ದಾಕ್ಷ್ಯಣವಾಗಿ ಬಂಧಿಸಿ ಸಂಜೆ 5 ಗಂಟೆ ತನಕ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಕೂಡಿ ಹಾಕಿ ಸಂಜೆ 5 ಗಂಟೆಗೆ ಬಿಡುಗಡೆ ಮಾಡಿದ್ದಾರೆ.
ರೈತರನ್ನು ಸಂಜೆ ತನಕ ಅಕ್ರಮ ಬಂಧನದಲ್ಲಿಟ್ಟು ನಂತರ ಬಿಡುಗಡೆ ಮಾಡಿದ್ದು ಎಷ್ಟು ಸರಿಯಾಗಿದೆ, ಕ್ಷೇತ್ರದ ಶಾಸಕಿ ಪೂರ್ಣಿಮಾ ಅವರು ಸದನದಲ್ಲಿ ಪೊಲೀಸರು, ಕೆಪಿಟಿಸಿಎಲ್ ಮತ್ತು ಜಿಲ್ಲಾಡಳಿತದ ವಿರುದ್ಧ ಧ್ವನಿ ಎತ್ತಬೇಕು ಎಂದು ಆಗ್ರಹ ಮಾಡಿದರು.
28 ಕಿಲೋ ಮೀಟರ್ ದೂರದ ಹರಿಯಬ್ಬೆ-ಹಿರಿಯೂರು ವಿದ್ಯುತ್ ಲೈನ್ ಮಾರ್ಗದಲ್ಲಿ ಬರುವ ಎಲ್ಲ ರೈತರಿಗೂ ಮೈಸೂರು ಜಿಲ್ಲಾಧಿಕಾರಿಗಳು ಅಲ್ಲಿನ ರೈತರಿಗೆ ಮಾಡಿರುವ ಆದೇಶದಂತೆ ಹಿರಿಯೂರು ತಾಲೂಕಿನ ರೈತರಿಗೂ ಪರಿಹಾರ ನೀಡಬೇಕು. ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಹಲವು ಸಭೆಗಳನ್ನು ಮಾಡಲಾಗಿದೆ. ಆದರೂ ಕೆಪಿಟಿಸಿಎಲ್ ಮತ್ತು ಜಿಲ್ಲಾಡಳಿತ ಪರಿಹಾರ ನೀಡಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನೊಂದ ರೈತರು ಆಕ್ರೋಶ ವ್ಯಕ್ತ ಪಡಿಸಿದರು.
ರೈತರಾದ ಹರಿಯಬ್ಬೆ ಶಶಿ, ಮುಂಗಸವಳ್ಳಿ ಬಂಗಾರಪ್ಪ, ಚಿಕ್ಕಣ್ಣ ಸೇರಿದಂತೆ ಇತರೆ 13 ಮಂದಿ ರೈತರನ್ನು ಬಂಧಿಸಿ ಬಿಡುಗಡೆ ಮಾಡಿದರು.