i
ಕಾಂಗ್ರೆಸ್ ಪಕ್ಷದ ಮೊಸಳೆ ಕಣ್ಣೀರಿಗೆ ಮುಸಲ್ಮಾನರು ಮರುಳಾಗಬಾರದು-ಸಿಎಂ ಇಬ್ರಾಹಿಂ…
ಚಂದ್ರವಳ್ಳಿ ನ್ಯೂಸ್, ತುಮಕೂರು:
ಬಿಜೆಪಿಯ ಕೋಮುವಾದಿ ನಿಲುವುಗಳಿಂದ ಮುಸ್ಲಿಂರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಬೆಳೆವಣಿಗೆಗೆ ತೀವ್ರ ಪೆಟ್ಟು ನೀಡಿದರೆ ಕಾಂಗ್ರೆಸ್ ಮೃದು ಹಿಂದುತ್ವದ ಮೂಲಕ ಮುಸ್ಲಿಮರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ. ಈ ಎರಡು ಪಕ್ಷಗಳನ್ನು ಮುಸಲ್ಮಾನರು ಎಂದಿಗೂ ನಂಬಬಾರದು ಎಂದು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮನವಿ ಮಾಡಿದರು.
ಅವರು ತುಮಕೂರಿನ ಸ್ಟಾರ್ ಕನ್ವೆಕ್ಷನ್ ಹಾಲ್ನಲ್ಲಿ ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತರ ಘಟಕದಿಂದ ಆಯೋಜಿಸಿದ್ದ ಮುಸ್ಲಿಂ ಮುಖಂಡರ ಸಮಾವೇಶದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಸುಮಾರು 1.30 ಕೋಟಿ ಜನಸಂಖ್ಯೆ ಹೊಂದಿರುವ ಅಲ್ಪಸಂಖ್ಯಾತರ ವಿರುದ್ಧ ನೇರವಾಗಿ ಮಾತನಾಡುವ ಬಿಜೆಪಿಯಿಂದ ಎಷ್ಟುಅಪಾಯವಿದೆಯೋ, ಅದಕ್ಕಿಂತ ಹೆಚ್ಚು ಅಪಾಯ ಮೊಸಳೆ ಕಣ್ಣೀರಿನ ಕಾಂಗ್ರೆಸ್ನಿಂದ ಇದೆ. ಆದರೆ ಜೆಡಿಎಸ್ ಪಕ್ಷದಲ್ಲಿ ಈ ಪರಿಸ್ಥಿತಿ ಇಲ್ಲ. ಪ್ರತಿಯೊಂದಕ್ಕೂ ಕೈ ಕಮಾಂಡ್ ಅನುಮತಿಗೆ ಕಾಯುವ ಅಗತ್ಯವಿಲ್ಲ. ಅಲ್ಪಸಂಖ್ಯಾತರ ಮಕ್ಕಳಿಗೆ ಶಿಕ್ಷಣ, ಆರೋಗ್ಯ, ಮನೆ ಎಲ್ಲವನ್ನು ಮಾಡಿಸಿಕೊಡುವುದು ನನ್ನ ಕರ್ತವ್ಯವಾಗಿದೆ. ನಿಮ್ಮ ಪರವಾಗಿ ನಾನೇ ನಿಂತು ಈ ಕೆಲಸ ಮಾಡುತ್ತೆನೆ ಎಂದ ಇಬ್ರಾಂಹಿ ಹೇಳಿದರು.
ರಾಜ್ಯದಲ್ಲಿ ಮುಸ್ಲಿಮರು ಅನುಭವಿಸುತ್ತಿರುವ ಸಂಕಟಗಳಿಗೆ ಜೆಡಿಎಸ್ ಒಂದೇ ಪರಿಹಾರ, ಹಾಗಾಗಿ ಮುಸಲ್ಮಾನರು ಸಾಮೂಹಿಕವಾಗಿ ಜೆಡಿಎಸ್ ಪಕ್ಷ ಬೆಂಬಲಿಸಿ ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಮುಸ್ಲಿಂರ ವಿರುದ್ಧ ಗದಾಪ್ರಹಾರ ನಡೆಸಿ, ಹಲಾಲ್ ಕಟ್, ಅಲ್ಪಸಂಖ್ಯಾತರಿಗೆ ಜಾತ್ರೆ, ಹಬ್ಬ, ಹರಿದಿನಗಳಲ್ಲಿ ವ್ಯವಹಾರಕ್ಕ ತಡೆ ಒಡ್ಡಿದ ಸಂದರ್ಭದಲ್ಲಿ ಕಾಂಗ್ರೆಸ್ ಸಮರ್ಪಕವಾಗಿ ಪ್ರತಿರೋಧ ತೋರಲಿಲ್ಲ. ಬದಲಾಗಿ ಕಾದು ನೋಡುವ ತಂತ್ರ ಅಳವಡಿಸಿಕೊಂಡಿತ್ತು. ಹಿಜಾಬ್ನಿಂದ ನಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾದಾಗಲೂ ಕಾಂಗ್ರೆಸ್ ಮೃದು ಧೋರಣೆಯನ್ನೇ ತೋರಿತ್ತು. ಈ ಎಲ್ಲಾ ಸನ್ನಿವೇಶಗಳನ್ನು ಅರ್ಥಮಾಡಿಕೊಂಡು, ಈ ಬಾರಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ತುಮಕೂರು ನಗರದಲ್ಲಿ ಗೋವಿಂದರಾಜು ಸೇರಿದಂತೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಪಕ್ಷವನ್ನು ಮಸ್ಲಿಂ ಬಾಂಧವರು ಬೆಂಬಲಿಸಬೇಕು. ಈ ಕ್ಷೇತ್ರದಿಂದ ಎನ್.ಗೋವಿಂದರಜು ಗೆದ್ದರೆ ನಾನು ಗೆದ್ದಂತೆ. ನನ್ನ ಶಕ್ತಿ ಹೆಚ್ಚಾಗಲಿದೆ. ನಿಮ್ಮ ಪರವಾಗಿ ಕೆಲಸ ಮಾಡಲು ಮತ್ತಷ್ಟುಶಕ್ತಿ ದೊರೆಯಲಿದೆ ಎಂದು ಸಿ.ಎಂ.ಇಬ್ರಾಹಿಂ ತಿಳಿಸಿದರು.
ತುಮಕೂರು ನಗರ ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜು ಮಾತನಾಡಿ, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರ ಆಗಮನ, ಈ ಬಾರಿ ಗೆಲುವಿನ ಆಶಾಭಾವನೆ ಮೂಡಿಸಿದೆ. ಈ ಕ್ಷೇತ್ರಕ್ಕೆ ಮಾಜಿ ಶಾಸಕ ಡಾ.ರಫೀಕ್ ಅಹಮದ್ ಅವರ ಕೊಡುಗೆ ಶೂನ್ಯ. ಅವರ ಕಾಲದಲ್ಲಿ ಮಂಜೂರಾಗಿದ್ದ ಮೆಡಿಕಲ್ ಕಾಲೇಜು ಆರಂಭವಾಗಲೇ ಇಲ್ಲ. ಜೆಡಿಎಸ್ ಪಂಚರತ್ನದಲ್ಲಿ ಬಡವರ ಮಕ್ಕಳ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಶೇ 90ರಷ್ಟುಬಡವರೇ ಇರುವ ಅಲ್ಪಸಂಖ್ಯಾತರ ಸಮುದಾಯಕ್ಕೆ ಇದರಿಂದ ಹೆಚ್ಚಿನ ಲಾಭವಾಗಲಿದೆ. ಹಾಗಾಗಿ ಜೆಡಿಎಸ್ ಪಕ್ಷ ಬೆಂಬಲಿಸುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಶಂಶುಲ್ ಹಕ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಜಿಲ್ಲಾಧ್ಯಕ್ಷ ತನ್ವಿರ್ ರೆಹಮಾನ್ ಖಾನ್, ಜೆಡಿಎಸ್ ನಗರ ಅಧ್ಯಕ್ಷ ವಿಜಯಗೌಡ, ಉಪಮೇಯರ್ ನರಸಿಂಹಮೂರ್ತಿ, ಪಾಲಿಕೆ ಸದಸ್ಯ ಶ್ರೀನಿವಾಸ್, ಹಾಲೇನೂರು ಲೇಪಾಕ್ಷ, ಮುಖಂಡರಾದ ಇಸ್ಮಾಯಿಲ್, ಇಮ್ತಿಯಾಜ್, ಖಲಿಂವುಲ್ಲಾ,ಪರ್ವಿನ್ ತಾಜ್, ಲೀಲಾವತಿ, ಮೌಲ್ವಿಗಳು ಸೇರಿದಂತೆ ಮತ್ತಿತರರಿದ್ದರು.