i
ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಗ್ಯಾಸ್ ಸಿಲಿಂಡರ್ ಉಚಿತ-ಎಚ್.ಡಿ. ಕುಮಾರಸ್ವಾಮಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ವರ್ಷಕ್ಕೆ ಐದು ಸಿಲಿಂಡರ್ ಉಚಿತವಾಗಿ ನೀಡುವುದರ ಜೊತೆಯಲ್ಲಿ ಹತ್ತು ಸಿಲಿಂಡರ್ಗಳನ್ನು ಅರ್ಧ ಬೆಲೆಗೆ ನೀಡುವ ಯೋಜನೆ ಜಾರಿಗೊಳಿಸಲಾಗುವುದು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.
ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪಂಚರತ್ನ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿ, ಗ್ಯಾಸ್ ಸಿಲಿಂಡರ್ ಬೆಲೆ 1100ಕ್ಕೆ ಏರಿಕೆಯಾಗಿದೆ. ಬಡವರು ಗ್ಯಾಸ್ ಖರೀದಿ ಮಾಡುವ ಮಟ್ಟದಲಿಲ್ಲ. ಕೇಂದ್ರ ಸರ್ಕಾರ ಸಿಲಿಂಡರ್ ಖರೀದಿಗೆ ಸಬ್ಸಿಡಿ ನೀಡುವುದಾಗಿ ಹೇಳಿ ಉಜ್ವಲ ಯೋಜನೆ ಜಾರಿಗೊಳಿಸಿ ಈಗ ಗ್ಯಾಸ್ ದರ ಏರಿಕೆ ಮಾಡಿ ಮಹಿಳೆಯರಿಗೆ ಆಘಾತ ನೀಡಿದೆ. ಬಡವರು ಜೀವನ ದುಸ್ತರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆಟೋ ಚಾಲಕರಿಗೆ ಮಾಸಿಕ 2,000 ಸಹಾಯಧನ ನೀಡುವ ಯೋಜನೆ ಜಾರಿಗೆ ತರಲಾಗುವುದು. ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆ, ಉಚಿತ ಚಿಕಿತ್ಸೆ, ದ್ವಿತೀಯ ಪಿಯುಸಿವರೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲಿ ಉಚಿತ ಶಿಕ್ಷಣ, ರೈತರಿಗೆ ದಿನದ 24 ಗಂಟೆಗಳ ಕಾಲ ನಿರಂತರ ಉಚಿತ ವಿದ್ಯುತ್ ಪೂರೈಕೆ, ರೈತರಿಗೆ ಪ್ರತೀ ಎಕರೆಗೆ 10,000 ರೂ. ಸಹಾಯಧನ, ಎಲ್ಲರಿಗೂ ವಸತಿ ಸೌಲಭ್ಯ ಹಾಗೂ ಮಹಿಳೆಯರು ಮತ್ತು ಯುವಜನ ಸಬಲೀಕರಣಕ್ಕೆ ವಿಶೇಷ ಯೋಜನೆಗಳನ್ನು ಜಾರಿಗೊಳಿಸುವ ಭರವಸೆ, ಕೊಬ್ಬರಿ ಮತ್ತು ಅಡಿಕೆ ಬೆಳೆಗಳ ದರ ಕುಸಿತ ತಡೆಯಲು ವಿಶೇಷ ಯೋಜನೆ ಅನುಷ್ಠಾನಕ್ಕೆ ತರುವುದಾಗಿಯೂ ಕುಮಾರಸ್ವಾಮಿ ತಿಳಿಸಿದ್ದಾರೆ.