i
ಮುದ್ರಕರು ಮತ್ತು ಕೇಬಲ್ ಆಪರೇಟರ್ಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ-ಜಿಲ್ಲಾಧಿಕಾರಿ ದಿವ್ಯಪ್ರಭು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಮುದ್ರಣಾಲಯಗಳ ಮಾಲೀಕರು, ಕೇಬಲ್ ಟಿ.ವಿ ಆಪರೇಟರ್ಗಳು ಚುನಾವಣಾ ನೀತಿ ಸಂಹಿತೆಯ ನಿಯಮಗಳನ್ನು ತಪ್ಪದೆ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ತಿಳಿಸಿದ್ದಾರೆ.
ಯಾವುದೇ ರಾಜಕೀಯ ಪಕ್ಷದವರು, ಅಭ್ಯರ್ಥಿ ಮುದ್ರಿಸಿದ ಕರಪತ್ರಗಳ ಪ್ರತಿಗಳ ಸಂಖ್ಯೆ ಸಹ ರಿಜಿಸ್ಟರ್ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಮುದ್ರಣಕ್ಕೆ ಆದೇಶ ನೀಡಿದ ವ್ಯಕ್ತಿಯಿಂದ ಕಡ್ಡಾಯವಾಗಿ ಒಂದು ಘೋಷಣೆಯನ್ನು ದ್ವಿಪ್ರತಿಯಲ್ಲಿ ಪಡೆದುಕೊಳ್ಳಬೇಕು ಹಾಗೂ ಈ ಘೋಷಣೆಗೆ ಇಬ್ಬರ ಸಾಕ್ಷಿದಾರರ ರುಜು ಪಡೆದುಕೊಳ್ಳಬೇಕು. ಘೋಷಣೆಯನ್ನು ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರದ ಚುನಾವಣೆ ಪ್ರತಿ ಮುದ್ರಣಾಲದ ಮಾಲೀಕರು ಯುಕ್ತವಾಗಿ ಪಡೆದುಕೊಂಡು ನಂತರ ಮಾಡಿರಬೇಕು. ಮುದ್ರಣ ಮಾಡಿದ ಎರಡು ದಿನದೊಳಗಾಗಿ ಘೋಷಣೆ ಮತ್ತು ಮುದ್ರಿಸಿದ ಪ್ರಚಾರ ಸಾಮಗ್ರಿಯ ಒಂದು ಪ್ರತಿಯೊಂದಿಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಚುನಾವಣಾ ಕರ್ತವ್ಯ ನಿರತ ಯಾವುದೇ ಅಧಿಕಾರಿ ಮಾಹಿತಿ ಕೇಳಿದಾಗ ತಕ್ಷಣ ನೀಡಬೇಕು.
ಮುದ್ರಿಸುವ ಪ್ರತಿ ಕರಪತ್ರಗಳ ಮೇಲೆಯು ಮುದ್ರಕರ ಮತ್ತು ಮುದ್ರಣಕ್ಕೆ ಆದೇಶ ನೀಡಿದವರ (ಪ್ರಿಂಟರ್ ಮತ್ತು ಪಬ್ಲಿಷರ್) ಹೆಸರು ಸ್ಪಷ್ಟವಾಗಿ ಮತ್ತು ಕಡ್ಡಾಯವಾಗಿ ನಮೂದಿಸಬೇಕು ಹಾಗೂ ಕರಪತ್ರಗಳ ಸಂಖ್ಯೆ ಸಹ ನಮೂದಿಸಬೇಕು. ವಿವರಗಳು ಇಲ್ಲದೆ ಯಾವುದೇ ಕರಪತ್ರ ಮುದ್ರಣ ಚುನಾವಣಾ ಅಪರಾಧವಾಗುತ್ತದೆ. ನಿಯಮಗಳನ್ನು ಮುದ್ರಣಾಲಯದ ಮಾಲೀಕರು ಕಟ್ಟುನಿಟ್ಟಾಗಿ ಪಾಲಿಸಬೇಕು. ತಪ್ಪಿದಲ್ಲಿ ಅಥವಾ ಉಲ್ಲಂಘನೆಯಾದಲ್ಲಿ ಅಂತರ ವಿರುದ್ಧ ಪ್ರಜಾಪ್ರಾತಿನಿಧ್ಯ ಕಾಯ್ದೆ 1951 ರ ಪ್ರಕಾರ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು.
ಕೇಬಲ್ ಆಪರೇಟರ್ಗಳಿಗೆ ಸೂಚನೆ :
ಯಾವುದೇ ಪಕ್ಷ ಹಾಗೂ ಅಭ್ಯರ್ಥಿಯು ತಮ್ಮ ಜಾಹೀರಾತಿನಲ್ಲಿ ಬಳಸಲಾಗಿರುವ ವಿವರವನ್ನು (ಕಂಟೆಂಟ್) ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ, ಜಿಲ್ಲಾ ಮಟ್ಟದ ಎಂ.ಸಿ.ಎಂ.ಸಿ. ಸಮಿತಿಯಿಂದ ಪೂರ್ವಾನುಮತಿ ಕಡ್ಡಾಯವಾಗಿ ಪಡೆದಿರಬೇಕು. ಕೇಬಲ್ ಆಪರೇಟರ್ಗಳು ಈ ರೀತಿ ಪೂರ್ವಾನುಮತಿ ಪಡೆಯದ ಯಾವುದೇ ಜಾಹೀರಾತನ್ನು ಬಿತ್ತರಿಸುವಂತಿಲ್ಲ. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರದ ತಾಲೂಕುಗಳಲ್ಲಿ ಹಾಗೂ ಎಲ್ಲ ಸ್ಥಳೀಯ ಕೇಬಲ್ ಆಪರೇಟರ್ಗಳು ತಮ್ಮ ವಾಹಿನಿ, ಚಾನಲ್, ಕೇಬಲ್ ನೆಟ್ವರ್ಕ್ನಲ್ಲಿ ಬಿತ್ತರಿಸಿದ ಎಲ್ಲ ಜಾಹೀರಾತುಗಳ ಮಾಹಿತಿ ಮತ್ತು ಅದಕ್ಕೆ ವಿಧಿಸಲಾಗಿರುವ ವೆಚ್ಚದ ವಿವರವನ್ನು ಕಡ್ಡಾಯವಾಗಿ ಜಿಲ್ಲಾ ಚುನಾವಣಾಧಿಕಾರಿಗಳ ಹಾಗೂ ಆಯಾ ತಾಲೂಕಿನ ವಿಧಾನಸಭಾ ಕ್ಷೇತ್ರದ ಚುನವಣಾಧಿಕಾರಿಗಳ ಗಮನಕ್ಕೆ ಕಡ್ಡಾಯವಾಗಿ ತರಬೇಕು.
ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಪ್ರಜಾಪ್ರಾತಿನಿಧಯ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.