i
ತೀವ್ರಗತಿಯಲ್ಲಿ ಏರುತ್ತಿರುವ ತಾಪಮಾನ, ಬೆಚ್ಚಿದ ಜನ, ಜಾನುವಾರುಗಳು, ಪಕ್ಷಿಗಳು…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಳೆದ ವರ್ಷ ಸಾಕಷ್ಟು ಮಳೆಯಾಗಿದ್ದರೂ ಪ್ರಸಕ್ತ ಸಾಲಿನ ಆರಂಭಿಕ ಬೇಸಿಗೆ ಬಿಸಿಲು ಎಲ್ಲರನ್ನು ಬೆಚ್ಚಿ ಬೀಳಿಸಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ದಿನದಿಂದ ದಿನಕ್ಕೆ ಉಷ್ಣಾಂಶದ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುತ್ತಿದ್ದು, ಬೇಸಿಗೆಯ ಬಿಸಿಲಿನ ಬೇಗೆ ಜನರನ್ನು ಬಸವಳಿಯುವಂತೆ ಮಾಡಿದೆ.
ಬಳ್ಳಾರಿ, ಹಾವೇರಿ, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ತುಮಕೂರು, ಬೆಂಗಳೂರು, ಚಿಕ್ಕಮಗಳೂರು, ವಿಜಯ ನಗರ ಜಿಲ್ಲೆಗಳ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತಾಪಮಾನ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ.
ಏಪ್ರಿಲ್, ಮೇ ತಿಂಗಳಲ್ಲಿ ಸೆಖೆಯ ಪ್ರಮಾಣ ಹೆಚ್ಚಾಗುವುದು ಸಾಮಾನ್ಯ, ಆದರೆ ಗರಿಷ್ಠ ಉಷ್ಣಾಂಶದಲ್ಲಿ ನಿತ್ಯ ಏರಿಕೆ ಆಗುತ್ತಿರುವುದು ಒಂದೆಡೆ ಆದರೆ ತೀವ್ರ ಬಿಸಿಲಿನಿಂದಾಗಿ ಬಿಸಿಗಾಳಿಯ ಪರಿಣಾಮದಿಂದ ಸೆಖೆ ಹೆಚ್ಚಾಗಿದೆ. ಹಗಲು ವೇಳೆ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದರಿಂದ ಜನರು ಹೈರಾಣಾಗಿದ್ದಾರೆ.
ಬಿಸಿಲಿನ ತಾಪ ತಡೆದುಕೊಳ್ಳು ಸಾರ್ವಜನಿಕರು ಎಳನೀರು, ಮಜ್ಜಿಗೆ, ಹಣ್ಣು ಸೇರಿದಂತೆ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಆಗೊಮ್ಮೆ ಈಗೊಮ್ಮೆ ಬೇಸಿಗೆ ಮಳೆಯಾದರೂ ವಾತಾವರಣ ತಂಪಾಗುತ್ತಿಲ್ಲ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಗರಿಷ್ಠ ತಾಪಮಾನ 34ಡಿ.ಸೆ.ಗಿಂತ ಹೆಚ್ಚಾಗಿದೆ. ಕನಿಷ್ಠ ತಾಪಮಾನವೂ ಹೆಚ್ಚಾಗಿದ್ದು, 20 ಡಿ.ಸೆ. ಗಡಿ ದಾಟಿದೆ. ಅಲ್ಲದೆ, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಾಪಮಾನದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಬೆಂಗಳೂರಿನಲ್ಲೂ ಬಡಾವಣೆಯಿಂದ ಬಡಾವಣೆಗೆ ತಾಪಮಾನದಲ್ಲಿ ವ್ಯತ್ಯಾಸ ಕಂಡುಬರುತ್ತದೆ.
ಇತ್ತೀಚೆಗೆ ಚಿತ್ರದುರ್ಗ ನಗರದಲ್ಲಿ ಸಾಕಷ್ಟು ಕಾಂಕ್ರೀಟ್ ಕಟ್ಟಡ, ಸಿಮೆಂಟ್ ರಸ್ತೆ ಮಾಡಿರುವುದರಿಂದ ಬಿಸಿಲಿನ ತಾಪ ಹೆಚ್ಚಳವಾಗಿದೆ. ಇದರ ಜೊತೆಯಲ್ಲಿ ಸಿಮೆಂಟ್ ಮತ್ತು ಡಾಂಬರಿನ ರಸ್ತೆ ನಿರ್ಮಾಣ, ಕಟ್ಟಡಗಳ ಹೊರಭಾಗದಲ್ಲಿ ಗಾಜುಗಳ ಅಳವಡಿಕೆ ಸೇರಿದಂತೆ ನಾನಾ ಕಾರಣಗಳಿಂದ ತಾಪಮಾನ ಹೆಚ್ಚಾಗಿದೆ. ಅಲ್ಲದೆ, ತಂಪು ನೀಡುವ ಮರ ಗಿಡಗಳನ್ನು ಅಭಿವೃದ್ಧಿ ಹೆಸರಲ್ಲಿ ಕಡಿದು ಹಾಕುವುದು ಕೂಡ ಪರೋಕ್ಷವಾಗಿ ತಾಪಮಾನ ಏರಿಕೆಗೆ ಕಾರಣವಾಗಿದೆ. ಈಗಾಗಲೇ ಹಲವು ಕಾರಣಗಳಿಂದ ತಾಪಮಾನ ಸರಾಸರಿಗಿಂತ 1-1.5ಡಿ.ಸೆ.ನಷ್ಟು ಉಷ್ಣಾಂಶ ಹೆಚ್ಚಳ ವಾಗಿದೆ ಎಂದು ಕರ್ನಾಟಕ ರಾಜ್ಯನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕರು ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿ ಎಚ್ಚರಿಸಿದ್ದಾರೆ.
ವಾತಾವರಣದಲ್ಲಿ ತೇವಾಂಶದ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆಯ ಉಷ್ಣಾಂಶದಲ್ಲೂ ಹೆಚ್ಚಳವಾಗಿದೆ. ಇದರಿಂದ ಸೆಖೆಯ ಪ್ರಮಾಣ ಹೆಚ್ಚಳವಾಗಿದೆ. ವಾಸ್ತವಿಕ ತಾಪಮಾನವೇ ಬೇರೆ. ತಾಪಮಾನದ ಅನುಭವವೇ ಬೇರೆ. ಅಂದರೆ, ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34-35ಡಿ.ಸೆ.ಇದ್ದರೆ, 38 ಡಿ.ಸೆ.ನಷ್ಟು ಅನುಭವವಾಗುತ್ತದೆ ಎಂದು ಹೇಳಿದರು.
ಬೇಸಿಗೆ ಕಾಲವಾಗಿರುವುದರಿಂದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತಾಪಮಾನವು ಗರಿಷ್ಠ ಪ್ರಮಾಣದಲ್ಲಿ ಹೆಚ್ಚಾಗಿರುತ್ತದೆ. ಬಿಸಿಲಿನ ಝಳಕ್ಕೆ ಗಾಳಿಯು ಕಾಯುತ್ತದೆ. ಹೀಗಾಗಿ ಮೇ.15ರವರೆಗೂ ಬಿಸಿಗಾಳಿಯ ಅನುಭವ ಇರುತ್ತದೆ. ಹವಾಮಾನ ಇಲಾಖೆ ಬಿಸಿಗಾಳಿಯ ಬಗ್ಗೆ ಮುನ್ಸೂಚನೆ ನೀಡಿದೆ. ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು ಜನರು ಆದಷ್ಟೂ ಛತ್ರಿ ಅಥವಾ ಬಟ್ಟೆಯನ್ನು ತಲೆ ಮತ್ತು ಮೈಮೇಲೆ ಹಾಕಿಕೊಂಡು ಬಿಸಿಲಿನಿಂದ ರಕ್ಷಣೆ ಮಾಡಿಕೊಳ್ಳುವುದು ಸೂಕ್ತ ಎಂದು ಅವರು ಹೇಳಿದರು.