i
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಟ ಸುದೀಪ್ ಬೆಂಬಲ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು: kiccha sudeep bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಚುನಾವಣೆಯಲ್ಲಿ ಬೆಂಬಲ ನೀಡುವುದಾಗಿ ಚಿತ್ರನಟ ಸುದೀಪ್ ಘೋಷಿಸಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಇಂದು ಕರೆದಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬೊಮ್ಮಾಯಿಯವರನ್ನು ಚಿಕ್ಕಂದಿನಿಂದ ನೋಡಿದ್ದು, ಚಿತ್ರರಂಗದ ಕಷ್ಟದ ದಿನಗಳಲ್ಲಿ ಕೆಲವರು ಬೆನ್ನಿಗೆ ಇದ್ದರು. ಕಷ್ಟ ಕಾಲದಲ್ಲಿ ಬೊಮ್ಮಾಯಿಯವರು ನನ್ನ ನೆರವಿಗೆ ನಿಂತಿದ್ದಾರೆ ಎಂದರು.
*ಪರಿಚಯ*
ಚಿತ್ರರಂಗದಲ್ಲಿ ನನಗೆ ಗಾಡ್ ಫಾದರ್ ಇರಲಿಲ್ಲ. ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿರುವುದು ನನಗೆ ಖುಷಿ. ಅವರಿಗೆ ನಾನು ಗೌರವ ಸಲ್ಲಿಸುತ್ತೇನೆ. ಚಿಕ್ಕ ವಯಸ್ಸಿನಿಂದ ಬೊಮ್ಮಾಯಿಯರನ್ನು ಮಾಮ ಎನ್ನುತ್ತೇನೆ ಎಂದ ಸುದೀಪ್, ರಾಜಕಾರಣಕ್ಕೆ ನಾನು ಇಳಿಯುವುದಿಲ್ಲ . ಆರಂಭದ ದಿನಗಳಿಂದಲೂ ನನಗೆ ಬೊಮ್ಮಾಯಿಯವರು ಪರಿಚಯ ಎಂದರು. ಬೊಮ್ಮಾಯಿಯವರ ಆಹ್ವಾನದ ಮೇಲೆ ಸುದ್ದಿಗೋಷ್ಠಿಗೆ ಬಂದಿದ್ದೇನೆ. ನಾನು ಬೊಮ್ಮಾಯಿ ಅವರ ಬೆಂಬಲಕ್ಕೆ ನಿಂತಿದ್ದೇನೆ. ನನ್ನ ತಂದೆ ತೋರಿಸಿದ ದಾರಿಯಲ್ಲಿ ನಡೆಯುವುದಾಗಿ ತಿಳಿಸಿದರು.
ಸಿಎಂ ಅವರಿಗೆ ಅವಶ್ಯಕತೆ ಇದ್ದಲ್ಲಿ ನಾನಿರುತ್ತೇನೆ. ಅನಿವಾರ್ಯ ಕಾರಣಗಳಿಗೆ ನಾನು ನಿಲುವು ಕೈಗೊಳ್ಳುವುದಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವುದೇ ಆದರೆ ಸ್ಪಷ್ಟವಾಗಿ ನಿರ್ಧಾರ ತೆಗೆದುಕೊಳ್ಳುವೆ ಎಂದರು. ಸಿಎಂ ಕೆಲವರಿಗೆ ಬೆಂಬಲಿಸಬೇಕು ಎಂದಿದ್ದಾರೆ, ಅವರಿಗೆ ಬೆಂಬಲ ನೀಡುತ್ತೇನೆ ಎಂದರು.
*ಎಲ್ಲರ ಪರ ಪ್ರಚಾರ ಸಾಧ್ಯವಿಲ್ಲ*
ಈ ವೇದಿಕೆಗೆ ಬರುವ ಅಗತ್ಯ ನನಗಿರಲಿಲ್ಲ. ಬೇರೆ ಪಕ್ಷದವರು ನನ್ನ ಕಷ್ಟಕ್ಕೆ ಬಂದಿದ್ದರೆ ಅವರ ಪರವೂ ಪ್ರಚಾರ ಕೈಗೊಳ್ಳುತ್ತೇನೆ. ಆದರೆ, ಎಲ್ಲರ ಪರ ಪ್ರಚಾರ ಮಾಡಲು ಸಾಧ್ಯವಿಲ್ಲ ಎಂದರು.
*ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಪ್ರವೇಶವಿಲ್ಲ*
ಪ್ರಕಾಶ್ ರಾಜ್ ಜೊತೆ ನಾನು ರನ್ನ ಚಿತ್ರ ಮಾಡಿದ್ದೇನೆ. ಪ್ರಕಾಶ್ ರೈ ಜತೆ ಮುಂದಿನ ಚಿತ್ರಕ್ಕೆ ಕಾಯುತ್ತಿದ್ದೇನೆ. ನಾನು ರಾಜಕೀಯಕ್ಕೆ ಪ್ರವೇಶಿಸುತ್ತಿಲ್ಲ. ಹಣಕ್ಕಾಗಿ ನಾನು ಪ್ರಚಾರಕ್ಕೆ ಬರುತ್ತಿಲ್ಲ. ಹಣ ಮಾಡುವುದಾದರೆ ನನಗೆ ಸಿನಿಮಾ ರಂಗ ಇದೆ. ಚಿತ್ರರಂಗದಿಂದಲೇ ನನಗೆ ಸಾಕಷ್ಟು ಹಣ ಬರಬೇಕಿದೆ. ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರಲ್ಲ. ಅನಿವಾರ್ಯ ಕಾರಣಗಳಿಗೂ ನಾನು ಚುನಾವಣೆಗೆ ನಿಲ್ಲುವ ನಿರ್ಧಾರ ಮಾದುವುದಿಲ್ಲ ಎಂದರು.
ಭಾರತ ಎತ್ತರಕ್ಕೆ ಏರುತ್ತಿರುವುದು ಏಕೆ ಎಂದು ತಿಳಿದಿದೆ. ಭಾರತದಲ್ಲಿ ಆಗಿರುವ ಅಭಿವೃದ್ದಿ ಬಗ್ಗೆ ನನಗೆ ಖುಷಿ ಇದ್ದು, ಭ್ರಷ್ಟಾಚಾರದ ಬಗ್ಗೆ ಕಾನೂನು ಸೂಕ್ತ ಕ್ರಮ ಕೈಗೊಳ್ಳಲಿದೆ.
ಅಭಿವೃದ್ದಿ ಆಗಿರುವುದನ್ನು ಗಮನಿಸಿದ್ದು, ಅದು ನನ್ನ ಅಭಿಪ್ರಾಯದ ಮೇಲೂ ಪ್ರಭಾವ ಬೀರಿದೆ. ನಮ್ಮ ನಾಯಕತ್ವವನ್ನ ನಾನು ಒಪ್ಪಿಕೊಳ್ಳುತ್ತೇನೆ. ನಾನು ಮೋದಿ ನಾಯಕತ್ವವನ್ನ ಒಪ್ಪಿಕೊಳ್ಳುತ್ತೇನೆ. ಆದರೆ, ಅದಕ್ಕೂ ಇಂದಿನ ನಿರ್ಣಯಕ್ಕೂ ಸಂಬಂಧವಿಲ್ಲ. ಒಳ್ಳೆಯ ಕಾರಣಗಳಿಗಾಗಿ ಬೆಂಬಲ ನೀಡುತ್ತಿರುವುದಾಗಿ ತಿಳಿಸಿದರು. ಹಲವು ಸಿದ್ದಾಂತಗಳನ್ನು ನಾನು ಸಹ ಒಪ್ಪುತ್ತೇನೆ ಎಂದರು.
*ಒತ್ತಡ ಇಲ್ಲ*
ಹಿಂದೆ ತಮ್ಮ ಮೇಲೆ ಐಟಿ ದಾಳಿ ನಡೆದ ಒತ್ತಡಕ್ಕೆ ಮಣಿದು ಬೆಂಬಲ ನೀಡುತ್ತಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆ ಗೆ ಉತ್ತರಿಸಿ, ಒತ್ತಡಕ್ಕೆ ಒಳಗಾಗುವ ವ್ಯಕ್ತಿ ನಾನಲ್ಲ. ಪ್ರಚಾರಕ್ಕೆ ಬರಲು ಯಾರ ಒತ್ತಡವೂ ಇಲ್ಲ. ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬೆಂಬಲಕ್ಕೆ ನಿಂತಿದ್ದೇನೆ ಎಂದರು.