i
ಜನತಾ ಪರಿವಾರದ ಮುಖಂಡರು ವಾಪಸ್ ಜೆಡಿಎಸ್ ಸೇರ್ಪಡೆ…
ಚಂದ್ರವಳ್ಳಿ ನ್ಯೂಸ್, ಕಲಬುರಗಿ:
2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರ ಮಾಡಿಯೇ ತೀರುವುದಾಗಿ ಹೇಳುತ್ತಿರುವ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಇದಕ್ಕಾಗಿ ಜನತಾ ಪರಿವಾರದಿಂದ ಬೇರೆ ಬೇರೆ ಪಕ್ಷಕ್ಕೆ ವಲಸೆ ಹೋಗಿರುವ ಮುಖಂಡರುಗಳ ಜೊತೆ ಚರ್ಚಿಸಿದ್ದು ಶೀಘ್ರ ಅವರೆಲ್ಲ ಜೆಡಿಎಸ್ಗೆ ಮರಳಲಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್-ಬಿಜೆಪಿಯ ಬಹಳಷ್ಟು ಮುಖಂಡರು ಜೆಡಿಎಸ್ಗೆ ಸೇರ್ಪಡೆ ಆಗುತ್ತಾರೆ. ಇಷ್ಟು ದಿನ ಜೆಡಿಎಸ್ಗೆ ಶಾಕ್ ಅಂದವರಿಗೆ ಈಗ ಅವರಿಗೆ ಶಾಕ್ ಆಗುತ್ತಿದೆ. ನಮಗೆ ಯಾವುದೂ ಶಾಕ್ ಇಲ್ಲ. ಹಲವರು ಪಕ್ಷಕ್ಕೆ ಸೇರ್ಪಡೆ ಆಗುತ್ತಾರೆ ಎಂದು ತಿಳಿಸಿದ್ದಾರೆ.
ಜೇವರ್ಗಿ ಕ್ಷೇತ್ರದಲ್ಲಿ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಅವರು ಸೇರ್ಪಡೆಯಾಗುವುದು ಅಂತಿಮವಾಗಿದೆ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಇಲ್ಲ ಎಂದು ಹೇಳುತ್ತಿದ್ದರು. ಆದರೆ ಈಗ ಉತ್ತರ ಕರ್ನಾಟಕದಲ್ಲಿ 30 ರಿಂದ 40 ಕ್ಷೇತ್ರಗಳಲ್ಲಿ ಗೆಲ್ಲುವ ವಾತಾವರಣ ನಿರ್ಮಾಣ ಆಗಿದೆ ಎಂದರು.
ಮಾಜಿ ಶಾಸಕ ವೈಎಸ್ವಿ ದತ್ತ ಅವರು ಈಗ ನನ್ನ ಸಂಪರ್ಕದಲ್ಲಿ ಇಲ್ಲ. ದತ್ತ ಶಾಸಕರಾಗಿದ್ದಾಗಲೂ ನನ್ನ ಜೊತೆ ಸಂಪರ್ಕದಲ್ಲಿ ಇರಲಿಲ್ಲ. ಮಾಜಿ ಸಚಿವ ಹೆಚ್.ಡಿ. ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.