i
ಹುಳಿಯಾರ ರಸ್ತೆ ಮಾಲೀಕರ ಕರಾಮತ್ತು, ಯಾವುದೇ ಕಟ್ಟಡ ಹೊಡೆಯದೇ ರಸ್ತೆ ಅಗಲೀಕರಣ…
ವರದಿ-ಮಲ್ಲಪ್ಪನಹಳ್ಳಿ ಎಂ.ಎಲ್.ಗಿರಿಧರ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸುಗಮ ಸಂಚಾರಕ್ಕಾಗಿ ರಸ್ತೆ ಅಗಲೀಕರಣ ಮಾಡಲು ಮತ್ತು ರಸ್ತೆ ಒತ್ತುವರಿ ಮಾಡಿರುವ ಕಟ್ಟಡಗಳ ತೆರವುಗೊಳಿಸಿ ಅಗಲವಾದ ರಸ್ತೆ ನಿರ್ಮಾಣಕ್ಕೆ ಸುಪ್ರೀಂ ಕೋಟ್೯ ಸ್ಪಷ್ಟ ಆದೇಶ ನೀಡಿದ್ದರೂ ಹಿರಿಯೂರು ನಗರದಲ್ಲಿ ಒತ್ತುವರಿಯಾಗಿರುವ ಕಟ್ಟಡಗಳ ತೆರವುಗೊಳಿಸಿ ರಸ್ತೆ ಅಗಲೀಕರಣ ಮಾಡದೆ ರಸ್ತೆ ಒತ್ತುವರಿದಾರರಿಗೆ ಜಿಲ್ಲಾಡಳಿತ, ತಾಲೂಕು ಆಡಳಿತವೇ ರಕ್ಷಣೆ ನೀಡಿ ಕೆಲಸ ಮಾಡುತ್ತಿದ್ದು ಕಾನೂನುಗಳನ್ನು ಜಾರಿ ಮಾಡಲು ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದ್ದು ಜಿಲ್ಲಾಧಿಕಾರಿಗಳು ಕೂಡಲೇ ಇತ್ತ ಗಮನ ಅರಿಸಿ ಒತ್ತುವರಿಯಾಗಿರುವ ಕಟ್ಟಡ ತೆರವು ಕಾರ್ಯಕ್ಕೆ ಮುಂದಾಗಬೇಕೆಂದು ಕರ್ನಾಟಕ ರಾಜ್ಯ ನಿವೃತ್ತ ಪೌರ ಸೇವಾ ನೌಕರರ ಮತ್ತು ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಲ್.ನಾರಾಯಣಾಚಾರ್ ಹಿರಿಯೂರು ಒತ್ತಾಯಿಸಿದ್ದಾರೆ.
ನಗರದ ಜನಸಂಖ್ಯೆ 60-70 ಸಾವಿರದ ಆಸುಪಾಸಿನಲ್ಲಿದ್ದು ರಸ್ತೆ ಸಂಚಾರ ಸುಗಮಗೊಳಿಸುವ ಸದುದ್ದೇಶ ಮರೆತಿರುವ ಆಡಳಿತ ಯಂತ್ರ ನಿಷ್ಕ್ರಿಯವಾಗಿದೆ. ನಗರದ ಗಾಂಧಿ ವೖತ್ತದಿಂದ ತಾಲೂಕು ಕಚೇರಿ ಬಳಿ ಇರುವ ವೇದಾವತಿ ಸೇತುವ ತನಕ ಬಲಿಷ್ಠ ವ್ಯಕ್ತಿಗಳು ತಮ್ಮ ಅಂಗಡಿ ಮುಂಗಟ್ಟುಗಳನ್ನು ಕಾನೂನು ಬಾಹಿರವಾಗಿ ನಿರ್ಮಿಸಿ ಮುಖ್ಯ ರಸ್ತೆ ಒತ್ತುವರಿ ಮಾಡಿದ್ದಾರೆ.
ಈ ಹಿಂದೆ ನೂರಾರು ಅಡಿಯಷ್ಟು ವಿಶಾಲವಾಗಿದ್ದ ರಸ್ತೆ ಒತ್ತುವರಿಯಿಂದ ಪ್ರತಿನಿತ್ಯ ರಸ್ತೆ ಜಾಮ್ ಆಗುತ್ತಿದ್ದರೂ ಪೊಲೀಸ್ ಇಲಾಖೆಯಾಗಲಿ, ತಾಲೂಕು ಆಡಳಿತವಾಗಲಿ ಗಮನ ನೀಡಿಲ್ಲ. ಶ್ರೀರಂಗಪಟ್ಟಣ-ಬೀದರ್ ರಸ್ತೆಯಲ್ಲಿ ಸಂಚರಿಸುವ ನೂರಾರು ವಾಹನಗಳು, ಬೆಂಗಳೂರು, ಬೆಳಗಾವಿ, ಕೊಪ್ಪಳ, ರಾಯಚೂರು ಜಿಲ್ಲೆಗಳಿಗೂ ಸಂಚರಿಸುವ ಸಾವಿರಾರು ವಾಹನಗಳು ಈ ರಸ್ತೆಯಲ್ಲೆ ಓಡಾಟ ಮಾಡಬೇಕಿದ್ದು ನಿತ್ಯ ವಾಹನ ಸಂಚಾರ ಅಸ್ತವ್ಯಸ್ತವಾಗುತ್ತಿದೆ.
ಇದರ ಜೊತೆಯಲ್ಲಿ ಲಕ್ಕವ್ವನಹಳ್ಳಿ, ದೊಡ್ಡಘಟ್ಟ, ಕುರುಬರಹಳ್ಳಿ ಮಾರ್ಗವಾಗಿ ವಿವಿ ಸಾಗರ ಸೇರುವ ವಾಹನಗಳು, ಕೂನಿಕೆರೆ ಕಡೆ ಹೋಗುವ ವಾಹನಗಳು ಕಲ್ಪನಾ ಹೋಟೆಲ್ ಸಮೀಪ ತಿರುವು ಪಡೆಯುವುದರಿಂದ ನಿತ್ಯ ರೋಡ್ ಜಾಮ್ ಆಗುತ್ತಿದೆ ಎಂದು ಅವರು ಆತಂಕ ವ್ಯಕ್ತ ಪಡಿಸಿದ್ದಾರೆ.
ಏಕಮುಖ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಪರಿವರ್ತಿಸಲು ಇರುವ ರಸ್ತೆ ಜಾಗದಲ್ಲಿ ಸಾಧ್ಯವೇ ಇಲ್ಲ. ನಗರದ ಪ್ರಮುಖ ರಸ್ತೆಯಾಗಿದ್ದು ಎರಡು ಬದಿಗಳಲ್ಲಿ 5 ಅಡಿಯಾದರು ಫುಟ್ ಪಾತ್ ಇರಬೇಕು, ವಾಹನಗಳಿಗೆ ರಸ್ತೆಯೇ ಇಲ್ಲ ಎಂದ ಮೇಲೆ ಫುಟ್ ಪಾತ್ ಎಲ್ಲಿಂದ ಬರಬೇಕೆಂದು ಅವರು ಪ್ರಶ್ನಿಸಿದ್ದಾರೆ.
ನಗರಸಭೆ ಮುಂಭಾಗದಿಂದ ಆರಂಭವಾಗುವ ಫುಟ್ ಪಾತ್ ಮತ್ತು ಸಾರ್ವಜನಿಕರು ಓಡಾಟ ಮಾಡುವ ರಸ್ತೆ ಒತ್ತುವರಿ ಕಾರ್ಯ ಪೊಲೀಸ್ ಠಾಣೆ, ಗಾಂಧಿ ವೖತ್ತ, ನೆಹರು ಹೈಟೆಕ್ ಮಾರುಕಟ್ಟೆ, ವಿಜಯ ಬ್ಯಾಂಕ್, ಶ್ರೀರಾಮ ದೇವಸ್ಥಾನ, ದುರ್ಗಮ್ಮ ಗುಡಿ ರಸ್ತೆ ತಿರುವು, ಮಟನ್ ಮಾರುಕಟ್ಟೆ ಸಮೀಪದ ರಸ್ತೆಯವರೆಗೆ ರಸ್ತೆ ಒತ್ತುವರಿಯಾಗಿರುವುದರ ದೊದ್ದ ಪಟ್ಟಿ ಬೆಳೆದು ಹೋಗಿದೆ. ಸುಪ್ರೀಂ ಕೋಟ್೯ ಆದೇಶದಂತೆ ರಸ್ತೆ ಅಗಲೀಕರಣ ಮಾಡಬೇಕಾದವರು ದಿವ್ಯ ಮೌನಕ್ಕೆ ಶರಣಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ, ಚಳ್ಳಕೆರೆ, ಹೊಳಲ್ಕೆರೆ, ಚಿತ್ರದುರ್ಗ ನಗರಗಳಲ್ಲಿ ರಸ್ತೆ ಅಗಲೀಕರಣ ಮಾಡಲಾಗಿದೆ. ಆದರೆ ಪಟಭದ್ರ ಹಿತಾಸಕ್ತಿಗಳಿಂದಾಗಿ ಹಿರಿಯೂರು ನಗರದಲ್ಲಿ ರಸ್ತೆ ಅಗಲೀಕರಣಕ್ಕೆ ಜಿಲ್ಲಾಡಳಿತ ಕೈ ಹಾಕಿಲ್ಲ. ಇರುವ ರಸ್ತೆಯನ್ನೇ 13 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಅಗಲೀಕರಣ ಮಾಡುವುದಾಗಿ ಹೇಳಲಾಗುತ್ತಿದೆ. ದಿನ ನಿತ್ಯ ಹುಳಿಯಾರ್ ರಸ್ತೆ, ಟಿಬಿ ವೃತ್ತದಿಂದ ಗಾಂಧಿ ವೃತ್ತದವರೆಗಿನ ರಸ್ತೆಯಲ್ಲಿ ನಿತ್ಯ ಸಂಚಾರ ಅಸ್ತವ್ಯಸ್ತವಾಗುತ್ತಿದ್ದರೂ ಸಂಬಂಧಿಸಿದವರು ಕಣ್ಣಿದ್ದು ಕುರುಡರಾಗಿದ್ದಾರೆಂದು ಅವರು ಆರೋಪಿಸಿದ್ದಾರೆ.
ಸುಗಮ ಸಂಚಾರಕ್ಕಾಗಿ ಯಾವುದೇ ಮರ್ಜಿಗೂ ಒಳಗಾಗದೆ ರಸ್ತೆ ತೆರವು ಕಾರ್ಯವನ್ನು ಮಾಡಬೇಕಾದ ಪೊಲೀಸ್ ಇಲಾಖೆಯೂ ನಗಗಸಭೆಯವರೆ ಮೌನವಾಗಿರುವಾಗ ನಾವೇಕೆ ಮರ ಕಡಿದು ಮೈ ಮೇಲೆ ಹಾಕಿಕೊಳ್ಳಬೇಕು ಎಂದು ಪೊಲೀಸರು ರಸ್ತೆಯಲ್ಲೆ ದಾರಿಗಾಗಿ ಶಬ್ದ ಮಾಡಿಕೊಂಡು ಹೊರಟು ಹೋಗುತ್ತಿದ್ದಾರೆ.
ಒಂದು ಕಡೆ ಆಟೋಗಳು ಮನ ಬಂದಂತೆ ದಿಕ್ಕು ಬದಲಾಯಿಸಿ ಸಂಚಾರಕ್ಕೆ ಆಡಚಣೆ ಮಾಡುವುದರ ಜತೆಯಲ್ಲಿ ಅಪಘಾತಗಳನ್ನು ಮಾಡುತ್ತಿದ್ದುದರ ಜತೆಗೆ ಹೊಸ ಸೇರ್ಪಡೆ ಎಂದರೆ ಟಾಟಾ ಎಸಿ ಲಗೇಜ್ ಮಿನಿ ವಾಹನಗಳ ಭರಾಟೆ ಜಾಸ್ತಿಯಾಗಿದೆ. ಟಾಟಾ ಎಸಿಗಳು ದಿಕ್ಕು ತಪ್ಪಿ ವಾಹನವನ್ನು ಚಾಲನೆ ಮಾಡುತ್ತಿದ್ದಾರೆ. ಮ್ಯಾಕ್ಸಿ ಕ್ಯಾಬ್, ಕ್ರೂಸರ್ ವಾಹನಗಳು, ಆಟೋ, ಟಾಟಾ ಎಸಿ ವಾಹನಗಳಿಗೆ ಯಾರು ನಿಯಂತ್ರಣ ಹಾಕುತ್ತಾರೋ ಕಾದು ನೋಡಬೇಕಾಗಿದೆ. ಜಿಲ್ಲಾ ಮತ್ತು ತಾಲೂಕು ಆಡಳಿತ ಜಡತ್ವ ಕೈಬಿಟ್ಟು ರಸ್ತೆ ಅಗಲೀಕರಣಕ್ಕೆ ಮುಂದಾಗಬೇಕು, ಸುಗಮ ಸಂಚಾರಕ್ಕೆ ಆದ್ಯತೆ ನೀಡಬೇಕಾಗಿದೆ.
ಯಾವುದೇ ಕಟ್ಟಗಳನ್ನು ಹೊಡೆಯದೇ ಹುಳಿಯಾರ ರಸ್ತೆ ಅಗಲೀಕರಣ ಮಾಡುತ್ತಿರುವುದರಿಂದ ಕಟ್ಟಡದ ಮಾಲೀಕರುಗಳು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಸಮಸ್ಯೆ ಮಾತ್ರ ಹಾಗೇ ಉಳಿಯಲಿದೆ. ರಸ್ತೆ ಅಭಿವೃದ್ಧಿ ಮಾಡಿಯೂ ಪ್ರಯೋಜನ ಇಲ್ಲದಂತಾಗಲಿದೆ.
ನಗರಸಭೆ, ತಾಲೂಕು ಆಡಳಿತ ಗಾಂಧಿ ವೃತ್ತದಿಂದ ಟಿಬಿ ವೃತ್ತದವರೆಗೆ, ಹುಳಿಯಾರ್ ರಸ್ತೆಯಲ್ಲಿ ಅದೆಷ್ಟು ರಸ್ತೆ ಮಾರ್ಕಿಂಗ್ ಮಾಡಿ ಕಟ್ಟಡಗಳಿಗೆ ಕೆಂಪು ಬಣ್ಣ ಬಳಿದಿದ್ದಾರೋ ದೇವರಿಗೆ ಗೊತ್ತು. ಆದರೆ ಇದೆಲ್ಲವನ್ನು ಬಿಟ್ಟು ಕೇವಲ ರಸ್ತೆ ಮಾಡುವುದು ಎಷ್ಟು ಸರಿ ಎನ್ನುವುದು ನಾರಾಯಣಾಚಾರ್ ಅವರ ಪ್ರಶ್ನೆಯಾಗಿದೆ.
ಹುಲಿಯಾರ್ ರಸ್ತೆಯ ವಿವಿ ಸಾಗರ ಕಾಲುವೆ ಸಮೀಪ ಇರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಸಾಗರ ರೆಡ್ಡಿ ಹೋಟೆಲ್ ನವರಿಗೆ ಇರುವ ಕಟ್ಟಡಗಳನ್ನು ತೆರವು ಮಾಡದೆ ಪಕ್ಕದಲಿದ್ದ ರಸ್ತೆಯನ್ನು ಉಪಯೋಗಿಸಿಕೊಂಡು ರಸ್ತೆ ಮಾಡುತ್ತಿರುವುದು ಒಂದು ಕಡೆಯಾದರೆ, ಟಿಬಿ ಸರ್ಕಲ್ ನಿಂದ ತಾಲೂಕು ಕಚೇರಿಯವರಿಗೆ 21 ಮೀಟರ್ ಅಗಲದ ರಸ್ತೆ ಮಾಡಲು ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ ಅಡಿ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ಅನುಕೂಲವಾಗುವುದಿಲ್ಲ, ಕೇವಲ ಕಟ್ಟಡ ಒತ್ತುವರಿದಾದರ ರಕ್ಷಣೆ ಮಾಡಿದಂತಾಗಲಿದೆ ಎಂದು ನಾರಾಯಣಾಚಾರ್ ಗುಡುಗಿದ್ದಾರೆ.