i
ಕಾಡುಗೊಲ್ಲರ ಸಮುದಾಯದವರು ಸೇರಿದಂತೆ ಎಲ್ಲ ವರ್ಗದವರು ಜೆಡಿಎಸ್ ಸೇರ್ಪಡೆ ಆಗುತ್ತಿದ್ದಾರೆ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ರಾಜ್ಯದ ಸರ್ವತೋಮುಖ ಅಭಿವೃದ್ದಿ ಹಾಗೂ ಎಲ್ಲಾ ಸಮುದಾಯವನ್ನು ಅಭಿವೃದ್ದಿ ಪಥದತ್ತ ಕೊಂಡ್ಯೊಯುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಈ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ ಕರ್ನಾಟಕವನ್ನು ಸುಭಿಕ್ಷ ರಾಜ್ಯವನ್ನಾಗಿ ಮಾಡಬೇಕು. ಚಳ್ಳಕೆರೆ ಕ್ಷೇತ್ರದ ಮತದಾರರು ಈ ಕ್ಷೇತ್ರದಿಂದ ನನ್ನನ್ನು ಆಯ್ಕೆ ಮಾಡಿ ಕಳಿಸಿದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುವವರು ಎಂದು ಅಭ್ಯರ್ಥಿ ಎಂ.ರವೀಶ್ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹತ್ತು ವರ್ಷ ಮಾಡಲಾಗದ ಅಭಿವೃದ್ಧಿಯನ್ನು ನಾನು ಐದು ವರ್ಷದಲ್ಲೇ ಮಾಡಿತೋರಿಸುವೆ. ಈ ಬಾರಿ ಜೆಡಿಎಸ್ ಅಲೆ ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲೂ ಇದೆ. ಕಳೆದ ಬಾರಿ ಸೋತ ಸಂದರ್ಭದಲ್ಲಿ ನಾನು ಬೆಂಗಳೂರು ಸೇರಿಕೊಂಡೆ ಎಂದು ಹೇಳುವ ಕೆಲವರಿಗೆ ಈ ಕ್ಷೇತ್ರದಲ್ಲಿ ನಾನು ಮಾಡಿದ ಅಭಿವೃದ್ಧಿ ತಿಳಿಯಬೇಕು. ಸುಮಾರು 35 ಗ್ರಾಮಗಳಲ್ಲಿ ಸಿಸಿ ರಸ್ತೆ, ಕುಡಿಯುವ ನೀರಿಗೆ ಕೊಳವೆ ಬಾವಿ ಕೊರೆಸಿ ಗ್ರಾಮದ ಜನರಿಗೆ ನೆರವಾಗಿದ್ದೇನೆ. ನನಗೆ ಪ್ರಚಾರ ಬೇಡ, ನಾನು ಮಾಡುವ ಕೆಲಸಗಳು ಜನರಿಗೆ ತಿಳಿದಿವೆ. 2023ರ ಚುನಾವಣೆಯಲ್ಲಿ ನಾನು ಗೆದ್ದು, ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದಲ್ಲಿ ನನ್ನ ಅವಧಿಯ ಐದು ವರ್ಷದಲ್ಲಿ ಕ್ಷೇತ್ರವನ್ನು ಸಂಪೂರ್ಣ ಬದಲು ಮಾಡುವೆ ಎಂದರು.
ಜೆಡಿಎಸ್ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ಮಾತನಾಡಿ, ಚಳ್ಳಕೆರೆ ಕ್ಷೇತ್ರದ ಇತಿಹಾಸದಲ್ಲಿ ಬಾರಿ ಪ್ರಮಾಣದಲ್ಲಿ ವಿವಿಧ ಪಕ್ಷದ ಮುಖಂಡರು ಸೇರ್ಪಡೆಯಾಗುವ ಮೂಲಕ ಜೆಡಿಎಸ್ ಪಕ್ಷಕ್ಕೆ ಶಕ್ತಿ ತುಂಬಿದ್ಧಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮುಖಂಡರು ಜೆಡಿಎಸ್ ಸೇರ್ಪಡೆಯಾಗಲಿದ್ಧಾರೆ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದೂರವಾಣಿ ಮೂಲಕ ಪಕ್ಷಕ್ಕೆ ಸೇರ್ಪಡೆಯಾದ ನಾಯಕರನ್ನು ಸ್ವಾಗತಿಸಿದರಲ್ಲದೆ, ಸೂಕ್ತಸ್ಥಾನಮಾನ ನೀಡುವ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಸವರಾಜಮಂಡಿಮಠ, ಗೌರವಾಧ್ಯಕ್ಷ ಹೆಗ್ಗೆರೆ ಆನಂದಪ್ಪ, ಕಾರ್ಯದರ್ಶಿ ಚನ್ನಿಗರಾಯ, ಕಲಮರಹಳ್ಳಿಶಿವಣ್ಣ, ನಗರಸಭಾ ಸದಸ್ಯರಾದ ಸಿ.ಶ್ರೀನಿವಾಸ್, ವಿ.ವೈ.ಪ್ರಮೋದ್, ವಿಶುಕುಮಾರ್, ಮುಖಂಡರಾದ ಜಿ.ಕೆ.ವೀರಣ್ಣ, ಟಿ.ವಿಜಯಕುಮಾರ್, ಸಮರ್ಥರಾಯ, ಎಸ್.ಶ್ರೀಧರಚಾರಿ, ಹನುಮಂತಚಾರಿ, ಭೂತಲಿಂಗಪ್ಪ, ಭೀಮಣ್ಣ ಮುಂತಾದವರು ಉಪಸ್ಥಿತರಿದ್ದರು.