i
ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದ ಮಾಜಿ ಸಚಿವ ಆಲ್ಕೋಡ್ ಹನುಮಂತಪ್ಪ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಸಚಿವ ಆಲ್ಕೋಡ್ ಹನುಮಂತಪ್ಪ ಕಾಂಗ್ರೆಸ್ ಪಕ್ಷ ತೊರೆದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಯಾದರು.
ಜೆಡಿಎಸ್ ವರಿಷ್ಠರು ಪಕ್ಷದ ಶಾಲು ಹೊದಿಸಿ ಆಲ್ಕೋಡ್ ಹನುಮಂತಪ್ಪ ಅವರನ್ನು ಜೆಡಿಎಸ್ ನಾಯಕರು ಬರಮಾಡಿಕೊಂಡರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಮಾತನಾಡಿ, ದಲಿತ ನಾಯಕರು ಹಾಗೂ ಹಿರಿಯರಾದ ಹನುಮಂತಪ್ಪ ಮತ್ತೆ ತಮ್ಮ ಸ್ವಂತ ಮನೆಗೆ ಬಂದಿದ್ದಾರೆ. ಸಿಎಂ ಇಬ್ರಾಹಿಂ ನೇತೃತ್ವದಲ್ಲಿ ಜೆಡಿಎಸ್ ಮನೆಗೆ ಬರಲು ನಿರ್ಧಾರ ಮಾಡಿದ್ದಾರೆ. ಕಾಂಗ್ರೆಸ್ನಲ್ಲಿ ಅವರ ಶಕ್ತಿ ಬಳಸಿಕೊಳ್ಳುವ ಕೆಲಸ ಮಾಡಲಿಲ್ಲ ಎಂದು ಹೇಳಿದರು.
ಮಾಜಿ ಸಚಿವ ಹನುಮಂತಪ್ಪ ಅವರ ದೇಹ ಮಾತ್ರ ಕಾಂಗ್ರೆಸ್ನಲ್ಲಿತ್ತು, ಆದರೆ ಮನಸ್ಸು ಜೆಡಿಎಸ್ನಲ್ಲಿತ್ತು. ನಮ್ಮ ಸಂಪರ್ಕದಲ್ಲೇ ಆಲ್ಕೋಡ್ ಹನುಮಂತಪ್ಪ ಇದ್ದರು. ಕಾಂಗ್ರೆಸ್ ಪಕ್ಷ ಮತ್ತು ನಾಯಕರ ನಡವಳಿಕೆಯಿಂದ ಬೇಸತ್ತು ಜೆಡಿಎಸ್ ಪಕ್ಷಕ್ಕೆ ಬಂದಿದ್ದಾರೆ. ಅವರಿಗೆ ರಾಜ್ಯ ಮಟ್ಟದಲ್ಲಿ ಸ್ಥಾನಮಾನ ಕೊಡಲು ಸಿಎಂ ಇಬ್ರಾಹಿಂ ನಿರ್ಧಾರಿಸಿದ್ದಾರೆ. ಉತ್ತರ ಕರ್ನಾಟಕದ ಹಲವು ಭಾಗದ ಮುಖಂಡರು ಹನುಮಂತಪ್ಪನವರೊಂದಿಗೆ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ತಿಳಿಸಿದರು.
ಜೆಡಿಎಸ್ ಪಕ್ಷಕ್ಕೆ ಹನುಮಂತಪ್ಪ ಅವರ ಅನುಭವ ಉಪಯೋಗ ಆಗುತ್ತದೆ. ಜೆಡಿಎಸ್ ಗೆ ಬರುವಂತಹ ನಾಯಕರು ಇನ್ನೂ ಇದ್ದಾರೆ. ಏ.27 ರಂದು ತುಮಕೂರಿನಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಇದೆ. ತುಮಕೂರಿನ 11 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲುತ್ತೆ ಎಂಬ ನಂಬಿಕೆ ಇದೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅವರು ತಿಳಿಸಿದರು.
ಜೆಡಿಎಸ್ ಪಕ್ಷವು ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಹೆಚ್ಚು ಸೀಟ್ ಗೆಲ್ಲುತ್ತದೆ. ನಮ್ಮ 123 ಕ್ಷೇತ್ರಗಳ ಗುರಿಯನ್ನು ಮುಟ್ಟುತ್ತದೆ. ರಾಷ್ಟ್ರೀಯ ಪಕ್ಷಗಳಿಗೆ ಹಣಬಲ ಇದೆ. ಇಂದು ನಮಗೂ ಹಣಬಲ ಇದ್ದರೆ 140 ಸೀಟ್ ಗೆಲ್ಲುತ್ತೇವೆ ಎಂದು ಘೋಷಣೆ ಮಾಡುತ್ತಿದ್ದೆ. ಈಗ ನನಗೆ ನಂಬಿಕೆ ಇದೆ, 123 ಸೀಟ್ ಗೆಲ್ಲುತ್ತೇನೆ ಎಂದು. ನಾವು ಗುರಿ ಮುಟ್ಟುತ್ತವೆ ಎಂದು ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ಆಲ್ಕೋಡ್ ಹನುಮಂತಪ್ಪ ಸೇರಿದಂತೆ ಮತ್ತಿತರರು ಇದ್ದರು.