i
ಬಿಜೆಪಿ ಬೆಂಬಲಿಸಿ ದಿಢೀರ್ ನಿವೃತ್ತಿ ಘೋಷಿಸಿದ ಪಕ್ಷೇತರ ಅಭ್ಯರ್ಥಿ ಸೌಭಾಗ್ಯ ಬಸವರಾಜನ್….
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ದಿಢೀರ್ ರಾಜಕೀಯ ವಿದ್ಯಮಾನಗಳು ನಡೆದಿದ್ದು ಆಪರೇಷನ್ ಕಮಲಕ್ಕೆ ಪಕ್ಷೇತರ ಅಭ್ಯರ್ಥಿ ಸೌಭಾಗ್ಯ ಬಸವರಾಜನ್ ಒಳಗಾಗಿದ್ದಾರೆ. ಅಷ್ಟೇ ಅಲ್ಲ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿ ತೀವ್ರ ಪ್ರಯತ್ನ ಮಾಡಿದ್ದ ಅವರು ಕಾಂಗ್ರೆಸ್ ಪಕ್ಷಕ್ಕೆ ಸೆಡ್ಡೊಡೆದು ಬಂಡಾಯ ಎದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಸೌಭಾಗ್ಯ ಬಸವರಾಜನ್ ಅವರು ಸ್ವಯಂ ನಿವೃತ್ತಿ ಘೋಷಿಸಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮತ್ತು ಮುಖಂಡ ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ ಆಗುವ ಮೂಲಕ ಹೊಸದೊಂದು ಇತಿಹಾಸಕ್ಕೆ ಮುನ್ನುಡಿ ಬರೆದಿದ್ದಾರೆ. ಈ ಮಹತ್ವದ ಕಾರ್ಯಕ್ಕೆ ಪತಿ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಕೂಡ ಕೈ ಜೋಡಿಸುವ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮತ್ತು ಪಕ್ಷಕ್ಕೆ ಶಾಕ್ ನೀಡಿದ್ದಾರೆ. ಅಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಿ.ಎಸ್.ಯಡಿಯೂರಪ್ಪ, ಶಾಸಕ ತಿಪ್ಪಾರೆಡ್ಡಿ ಇವರುಗಳ ಪ್ರಯತ್ನದಿಂದಾಗಿ ಈ ಬೆಳವಣಿಗೆ ಸಂಭವಿಸಿದೆ ಎನ್ನಲಾಗುತ್ತಿದೆ.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸೌಭಾಗ್ಯ ಬಸವರಾಜನ್ ಅವರು ಕಣದಿಂದ ನಿವೃತ್ತಿಯಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷವನ್ನು ಸೇರ್ಪಡೆ ಆಗುವ ಮೂಲಕ ಬಿಜೆಪಿ ಅಭ್ಯರ್ಥಿ ಜಿ.ಹೆಚ್.ತಿಪ್ಪಾರೆಡ್ಡಿ ಅವರಿಗೆ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ ಜನರ ಸ್ವಾಗತ ನೋಡಿ ಬಹಳ ಸಂತೋಷ ಆಗಿದೆ. ನಾನು ತಪ್ಪು ಮಾಡಿದೆ. ತಡವಾಗಿ ಪಕ್ಷಕ್ಕೆ ಬಂದೆ ಎಂಬ ಭಾವನೆ ಬಂತು ಎಂದರು. ನಾನು ಮತ್ತು ತಿಪ್ಪಾರೆಡ್ಡಿ ರಾಜಕೀಯ ವೈರಿಗಳು ಈಗ ಸ್ನೇಹಿತರಾಗಿದ್ದೇವೆ. ಅವರು ಮತ್ತು ನಮ್ಮ ಕಾಲದಲ್ಲಿ ಗೂಂಡಾಗಿರಿಗೆ, ಗಲಾಟೆಗೆ ಅವಕಾಶ ಇಲ್ಲದೇ ರಾಜಕಾರಣ ಮಾಡಿಕೊಂಡಿದ್ದೇವೆ. ಅವರು ನಮಗೂ ಮೊದಲಿನಿಂದಲೂ ಆತ್ಮೀಯತೆ ಇತ್ತು. ಹಿರಿಯ ರಾಜಕಾರಣಿಗಳಾದ ತಿಪ್ಪಾರೆಡ್ಡಿ ಅವರ ಗೆಲುವಿಗೆ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ನಾವು ಯಾವ ಪಕ್ಷದಲ್ಲಿ ಇರುತ್ತೇವೋ ಆ ಪಕ್ಷಕ್ಕೆ ನಿಷ್ಠೆ ಮೆರೆಯುತ್ತ ಬಂದಿದ್ದೇನೆ. ಪಕ್ಷ ಸಂಘಟನೆಗೆ ನಾನು ಸೇವೆ ಮಾಡುತ್ತೇನೆ. ಪ್ರತಿಯೊಬ್ಬ ಕಾರ್ಯಕರ್ತರು ಸಂತೋಷವಾಗಿರಬೇಕು ಎಂದರು. ಪಕ್ಷೇತರ ಅಭ್ಯರ್ಥಿ ಸೌಭಾಗ್ಯ ಬಸವರಾಜನ್ ಮಾತನಾಡಿ ಈ ದಿನ ಬರುವಾಗ ನಮಗೆ ಬರುವಾಗ ತುಂಬಾ ಅಳುಕು ಇತ್ತು. ಗೊಂದಲದಲ್ಲಿ ಇಲ್ಲಿಗೆ ಬಂದೇವು. ತುಂಬಾ ಅಭಿಮಾನಿಗಳು ಬಿಜೆಪಿ ಬನ್ನಿ ಎಂದು ಕರೆಯುತ್ತಿದ್ದರು. ಆದರೆ ಈಗ ಅಂತಹ ಕಾಲ ಕೂಡಿ ಬಂದಿದೆ. ಎಲ್ಲರೂ ಸೇರಿ ಪಕ್ಷವನ್ನು ಗೆಲ್ಲಿಸುವ ಕೆಲಸ ಮಾಡೋಣ, ಡಬಲ್ ಇಂಜಿನ್ ಸರ್ಕಾರ ಉತ್ತಮವಾಗಿ ನಡೆಯುತ್ತಿದೆ. ಯಡಿಯೂರಪ್ಪ ಅವರ ಯೋಜನೆಗಳು ಜನಪ್ರಿಯವಾಗಿದೆ. ಕ್ಷೇತ್ರದ ಜನರ ಬಯಕೆಯಂತೆ ನಾನು ಬಿಜೆಪಿ ಬಂದಿದ್ದೇನೆ. ಚಿತ್ರದುರ್ಗ ಉಳಿವಿಗಾಗಿ ಬಿಜೆಪಿ ಪಕ್ಷಕ್ಕೆ ಸೇರಿದ್ದೇನೆ. ಅವರು ತಮ್ಮ ಮನೆಗೆ ಬಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಆಹ್ವಾನ ನೀಡಿದ್ದರು. ಎಲ್ಲರ ಆಶಯಯದಂತೆ ಬಿಜೆಪಿ ಪಕ್ಷ ಸೇರಿದ್ದೇನೆ ಎಂದು ತಿಳಿಸಿದರು.