i
ಬಿರುಗಾಳಿ, ಆಲಿಕಲ್ಲು ಮಳೆಯ ಬೆಳೆ ಹಾನಿ ಪರಿಹಾರವನ್ನು ರೈತರ ಖಾತೆಗೆ ಜಮೆ ಮಾಡಲು ಆಗ್ರಹ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಳೆದ ತಿಂಗಳು ಚಳ್ಳಕೆರೆ ತಾಲ್ಲೂಕಿನಲ್ಲಿ ಸುರಿದ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಗೆ ರೈತರ ಬೆಳೆ ನಷ್ಟವಾಗಿದ್ದು, ಆರ್.ಆರ್.ಸಿ. ನಿಯಮದಡಿ ಪರಿಹಾರದ ಹಣವನ್ನು ರೈತರಿಗೆ ನೀಡಲು ಸಮಯ ಬೇಕಾಗುತ್ತದೆ. ಇದರಿಂದ ನೊಂದ ಮತ್ತು ಅರ್ಹ ರೈತರು ಸಂಕಷ್ಟ ಅನುಭವಿಸಿದಂತಾಗುತ್ತದೆ. ಹಾಗಾಗಿ ಸರ್ಕಾರದಲ್ಲಿರುವ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವಂತೆ ಜಿಲ್ಲಾಧಿಕಾರಿಗೆ ಒತ್ತಾಯಿಸುವುದಕ್ಕಾಗಿ ಅಖಂಡ ಕರ್ನಾಟಕ ರೈತ ಸಂಘದಿಂದ ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ನಂತರ ಮನವಿ ಸಲ್ಲಿಸಲಾಯಿತು.
ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಗುದ್ದು ರಂಗಸ್ವಾಮಿ ಮಾತನಾಡಿ ಏಪ್ರಿಲ್ ತಿಂಗಳಿನಲ್ಲಿ ಚಳ್ಳಕೆರೆ ತಾಲ್ಲೂಕಿನಾದ್ಯಂತ ಸುರಿದ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಗೆ ೫೦ ಹಳ್ಳಿಗಳಲ್ಲಿ ಬಾಳೆ, ಮೆಕ್ಕೆಜೋಳ, ರಾಗಿ ಇನ್ನಿತರೆ ಫಸಲು ನಷ್ಟವಾಗಿದೆ. ರೈತರಿಗೆ ಹಂಚಬೇಕಾಗಿದ್ದ ಪರಿಹಾರದ ಹಣವನ್ನು ಚಳ್ಳಕೆರೆಯ ಹಿಂದಿನ ತಹಶೀಲ್ದಾರ್ ರಘುಮೂರ್ತಿ, ಗ್ರಾಮ ಲೆಕ್ಕಿಗರು, ರೆವಿನ್ಯೂ ಇನ್ಸ್ಪೆಕ್ಟರ್, ಗ್ರಾಮ ಸಹಾಯಕರು ಇವರುಗಳೇ ದುರಪಯೋಗಪಡಿಸಿಕೊಂಡಿರುವುದರ ವಿರುದ್ದ ಮಾ.೨೭ ರಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದ ಮೇರೆಗೆ ಶಿಸ್ತು ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ. ಆದರೆ ಹಣ ದುರುಪಯೋಗಪಡಿಸಿಕೊಂಡಿರುವುದನ್ನು ಸಂಪೂರ್ಣವಾಗಿ ಸರ್ಕಾರಕ್ಕೆ ಜಮ ಮಾಡಿರುವುದಿಲ್ಲ. ದೇಶಕ್ಕೆ ಅನ್ನ ನೀಡುವ ರೈತರ ಸಮಸ್ಯೆಗಳ ಕುರಿತು ವಿಧಾನಸಭೆ ಹಾಗೂ ಪಾರ್ಲಿಮೆಂಟ್ನಲ್ಲಿ ಧ್ವನಿಯೇ ಎತ್ತದ ಜನಪ್ರತಿನಿಧಿಗಳನ್ನು ಏಕೆ ಆಯ್ಕೆ ಮಾಡಬೇಕೆಂದು ಸೋಮಗುದ್ದು ರಂಗಸ್ವಾಮಿ ಪ್ರಶ್ನಿಸಿದರು?
ಅರಣ್ಯ ಇಲಾಖೆಯಿಂದ ಇದುವರೆವಿಗೂ ಒಂದು ಗಿಡಕ್ಕೆ ೩ ರಿಂದ ೫ ರೂ. ನಿಗಧಿಪಡಿಸಲಾಗಿತ್ತು. ಈಗ ಒಂದು ಗಿಡಕ್ಕೆ ೨೧ ರೂ.ಗಳನ್ನು ರೈತರಿಂದ ವಸೂಲು ಮಾಡಲಾಗುತ್ತಿದೆ. ಇದರಿಂದ ಗಿಡ ಖರೀಧಿಸುವುದು ರೈತರಿಗೆ ದುಬಾರಿಯಾಗುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ಅರಣ್ಯ ಇಲಾಖೆಯವರ ಗಮನ ಸೆಳೆದರು.
ಕುರುಬರಹಳ್ಳಿ ಶಿವಣ್ಣ ಸಭೆಯಲ್ಲಿ ಮಾತನಾಡುತ್ತ ಡಿ.ಎಸ್.ಹಳ್ಳಿ ಸರ್ವೆ ನಂ.೩೦೯ ರಲ್ಲಿ ಹಿಂದಿನಿಂದಲೂ ರೈತರ ಓಡಾಟಕ್ಕಾಗಿ ಇದ್ದ ದಾರಿಯನ್ನು ಬಂದ್ ಮಾಡಲಾಗಿದೆ. ಇದರಿಂದ ಎಂಟತ್ತು ರೈತರಿಗೆ ತಮ್ಮ ಜಮೀನುಗಳಿಗೆ ಓಡಾಡಲು ತೊಂದರೆಯಾಗುತ್ತಿದೆ. ಹಾಗಾಗಿ ಶೀಘ್ರವೇ ಬಂದ್ ಆಗಿರುವ ರಸ್ತೆಯನ್ನು ತೆರವುಗೊಳಿಸುವಂತೆ ಸಂಬಂಧಪಟ್ಟವರನ್ನು ಒತ್ತಾಯಿಸಿದರು.
ಬಸ್ತಿಹಳ್ಳಿಯಲ್ಲಿ ಮಳೆ-ಗಾಳಿಗೆ ನಾಲ್ಕುವರೆ ಎಕರೆಯಲ್ಲಿದ್ದ ಬಾಳೆ ಸಂಪೂರ್ಣ ನೆಲಕಚ್ಚಿದೆ. ನಷ್ಟಕ್ಕೊಳಗಾಗಿರುವ ರೈತನಿಗೆ ತುರ್ತಾಗಿ ಪರಿಹಾರ ಕೊಡಬೇಕೆಂದು ರೈತ ಬಸ್ತಿಹಳ್ಳಿ ನಾರಪ್ಪ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಅಕಾಲಿಕ ಮಳೆಯಿಂದಾಗಿ ಮುದ್ದಾಪುರದಲ್ಲಿ ಎರಡು ಸಾವಿರ ಅಡಿಕೆ ಮರಗಳು ನಲವತ್ತರಿಂದ ಐವತ್ತು ಎಕರೆಯಲ್ಲಿ ಬೆಳೆದಿದ್ದ ಬಾಳೆ ನಷ್ಟವಾಗಿದೆ. ಸರ್ಕಾರ ಇತ್ತ ಗಮನಹರಿಸಿ ತಡಮಾಡದೆ ಪರಿಹಾರ ವಿತರಿಸಬೇಕೆಂದು ರೈತರು ಕಂದಾಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿದ್ದಪ್ಪ ಹಳಿಯೂರು, ಎಸ್.ಎಂ.ಶಿವಕುಮಾರ್, ವೆಂಕಟರಮಣಪ್ಪ, ಜಿಲ್ಲಾ ಖಜಾಂಚಿ ಎನ್.ಜಿ.ಷಣ್ಮುಖಪ್ಪ, ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ಬಸವರಾಜಪ್ಪ, ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ಚಿಕ್ಕಣ್ಣ, ಪ್ರಧಾನ ಕಾರ್ಯದರ್ಶಿ ಹೆಚ್.ಪ್ರಕಾಶ್, ಹನುಮಂತರಾಯ, ವೆಂಕಟರಾಮಣ್ಣ, ಹೊಸಹಳ್ಳಿ ವೀರಣ್ಣ ಸಭೆಯಲ್ಲಿ ಹಾಜರಿದ್ದರು.