i
ಸೋಲಿನ ಭೀತಿಯಿಂದ ಜನರತ್ತ ಮುಖ ಮಾಡಿದ ಕೇಂದ್ರ ಸಚಿವ ನಾರಾಯಣಸ್ವಾಮಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಳೆದ 4 ವರ್ಷಗಳಿಂದ ಕಣ್ಮರೆಯಾಗಿ ಈಗ ಸೋಲಿನ ಭಯದಿಂದ ಜನರತ್ತ ಮುಖ ಮಾಡಿರುವ ಬಿಜೆಪಿಯ ಕೇಂದ್ರ ಸಚಿವರು ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಎ.ನಾರಾಯಣಸ್ವಾಮಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆಂದು ಎಂದು ಕೆ.ಪಿ.ಸಿ.ಸಿ ಪ್ರಚಾರ ಸಮಿತಿಯ ರಾಜ್ಯ ಸಂಯೋಜಕ ಸಿ.ಶಿವುಯಾದವ್ ಭವಿಷ್ಯ ನುಡಿದಿದ್ದಾರೆ.
ಅವರು ಪತ್ರಿಕಾ ಹೇಳಿಕೆ ನೀಡಿ, ನಾಲ್ಕು ವರ್ಷದಿಂದ ಜನರಿಂದ ಅಹವಾಲು ಸ್ವೀಕರಿಸದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿಯವರು ರಾಜ್ಯದ ಚುನಾವಣೆ ನಂತರ ಎಚ್ಚೆತ್ತುಕೊಂಡು ಜನರ ಕಡೆ ಅಹವಾಲು ಸ್ವೀಕಾರ ಮಾಡುವ ನೆಪದಲ್ಲಿ ಬಂದಿದ್ದಾರೆ. ಇಷ್ಟು ದಿನ ಎಲ್ಲಿ ಹೋಗಿದ್ದರು ಎನ್ನುವುದಕ್ಕೆ ಕೇಂದ್ರ ಸಚಿವರು ಉತ್ತರಿಸಲಿ. ಪ್ರವಾಹ ಬಂದು ಜನರು ತತ್ತರಿಸಿದ ಸಮಯದಲ್ಲಿ ತಿರುಗಿ ನೋಡಲಿಲ್ಲ, ನೀರಿಗೆ ಹಾಹಾಕಾರವುಂಟಾದಾಗ ಹಳ್ಳಿಗರು ಬೊಬ್ಬೆ ಹಾಕುತ್ತಿದ್ದಾಗ ಜನರ ಅಹವಾಲು ಸ್ವೀಕರಿಸಲಿಲ್ಲವೇಕೆ? ಎಂದು ವಾಗ್ದಾಳಿ ಮಾಡಿದ್ದಾರೆ.
ಲೋಕಸಭಾ ಸದಸ್ಯರಾಗಿ ನಾರಾಯಣಸ್ವಾಮಿ ಅವರು ಐದು ವರ್ಷ ಮಾಡಿದ ಕಾರ್ಯ ಸಾಧನೆಗಳೇನು? ಹೇಳಿಕೊಳ್ಳುವಂತಹ ಒಂದೇ ಒಂದು ಕಾರ್ಯ ನಾನು ಮಾಡಿದ್ದೇನೆಂದು ಶ್ವೇತ ಪತ್ರ ಹೊರಡಿಸಲಿ ಎಂದು ಶಿವುಯಾದವ್ ಸವಾಲ್ ಹಾಕಿಸದರು.
ತುರುವನೂರು ರಸ್ತೆ ರೈಲ್ವೆ ಅಂಡರ್ ಪಾಸ್ ಸಮಸ್ಯೆ ಕುರಿತು ನೂರಾರು ಮನವಿ ಸಲ್ಲಿಸಿದರು. ಭೀಮಸಮುದ್ರ ಭಾಗದ ರೈಲ್ವೆ ಕ್ರಾಸಿಂಗ್ ಸಮಸ್ಯೆಗೆ ಹತ್ತಾರು ಬಾರಿ ಮನವಿ ಸಲ್ಲಿಸಿದರು ಇದುವರೆಗೂ ಸಮಸ್ಯೆ ಬಗೆಹರಿದಿಲ್ಲ. ಆ ಭಾಗದ ಜನ ಮಳೆಗಾಲದಲ್ಲಿ ಜೀವಭಯದಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಶೇ. ೧೦ ರಷ್ಟು ಮೀಸಲಾತಿಯನ್ನು ಮೇಲ್ಜಾತಿಯವರಿಗೆ ನೀಡಿದಾಗ ಸಚಿವರು ಏಕೆ ಮಾತನಾಡಲಿಲ್ಲ, ಸಾಮಾಜಿಕ ನ್ಯಾಯ ಕುರಿತು ಸಚಿವರು ಮಾತನಾಡುವುದು ಬಿಟ್ಟು ದ್ವೇಷದ ಮಾತುಗಳನ್ನಾಡುತ್ತಾರೆ. ಅಭಿವೃದ್ಧಿಯ ಮಾತುಗಳನ್ನು ಏಕೆ ಹಾಡುವುದಿಲ್ಲವೆಂದು, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿ ರಾಜ್ಯದ ಯಾವ ಸಮುದಾಯಕ್ಕೆ ಮೀಸಲಾತಿ ಕೊಡಿಸಿದ್ದಾರೆ ಎಂದು ಘೋಷಣೆ ಮಾಡಲಿ ಎಂದು ಅವರು ಆಗ್ರಹ ಮಾಡಿದರು. ರೈತರ ಖಾತೆಗೆ ಕೇಂದ್ರ ಸರ್ಕಾರ ಹಣ ಜಮಾ ಮಾಡಿ ರೈತರನ್ನು ಬಿಕ್ಷುಕರನ್ನಾಗಿ ಮಾಡಿದಿಯೇ? ಕರ್ನಾಟಕ ಸರ್ಕಾರ ಜನರ ಆಶಯಗಳಿಗೆ ತಕ್ಕಂತೆ ಯೋಜನೆಗಳನ್ನು ರೂಪಿಸಿ ಕಲ್ಯಾಣ ರಾಜ್ಯದತ್ತ ಕೊಂಡೊಯ್ಯುವ ಯೋಜನೆಗಳಿಗೆ ಸ್ವಾಗತ ಕೋರುವುದು ಬಿಟ್ಟು ಟೀಕೆ ಮಾಡುತ್ತಿರುವುದು ಖಂಡನೀಯವಾದುದ್ದು ಎಂದು ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯೆಂದು ಘೋಷಿಸಲಿಲ್ಲ. ಆಗ, ಏಕೆ ಸಚಿವರು ಮಾತನಾಡಲಿಲ್ಲ? ಯೋಜನೆಗೆ ಮೀಸಲಿಟ್ಟ ಅನುದಾನ ಏನಾಯಿತು! ಇದುವರೆಗೂ ಎಷ್ಟು ಬಿಡುಗಡೆಯಾಗಿದೆ ಎಂಬ ವಿವರ ಜನರ ಮುಂದಿಡಲಿ ಎಂದು ಶಿವುಯಾದವ್ ಆಗ್ರಹ ಮಾಡಿದ್ದಾರೆ.