i
ಹೆಣ್ಣು-ಗಂಡು ಕೂಡಿಸಲು ಸೈ, ಜಾಂಬುವಂತನಿಗೆ ಫಲವನಹಳ್ಳಿಯಲ್ಲಿ ಹೆಣ್ಣು ನೋಡಿದ ಜಿಲ್ಲಾ ಅರಣ್ಯಾಧಿಕಾರಿ…
ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ನಿಂತಕಡೆ ನಿಲ್ಲದೇ, ಅತ್ತ ಕಡೆಯಿಂದ ಇತ್ತ ಕಡೆ ಓಡಾಡುವ ಒಂಟಿ ಭೀಮ. ಸದ್ಯ ಈತ ವಿಧುರನಾಗಿದ್ದು, ಸುಮಾರು ಎರಡು ವರ್ಷಗಳಿಂದ ಬ್ರಹ್ಮಚಾರಿಯಾಗಿದ್ದಾನೆ. ಆದರೆ ವಿಧುರ ಜಾಂಬುವಂತನಿಗೆ ಈಗ ಸಂತೋಷಕ್ಕೆ ಪಾರವೇ ಇಲ್ಲ. ಅದೇನೆಪ್ಪ ಅಂದ್ರೆ ಇನ್ನೇನೂ ಕೆಲವೇ ದಿನಗಳಲ್ಲಿ ಅವನಿಗೆ ಸಂಗಾತಿ ಸಿಗಲಿದ್ದು, ಗೃಹಸ್ಥಾಶ್ರಮಕ್ಕೆ ಕಾಲಿಡಲಿದ್ದಾನೆ ಜಾಂಬವಂತ.
ನಾವು ಹೇಳೋದಕ್ಕೆ ಹೊರಟಿರೋದು ಯಾವುದೇ ಮನುಷ್ಯನ ಕಥೆಯಲ್ಲ. ಇದು ದಾವಣಗೆರೆ ತಾಲೂಕಿನ ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಮೃಗಾಲಯದಲ್ಲಿರುವ ಒಂಟಿ ಕರಡಿ ಭೀಮನ ಕಥೆ. ಈ ಭೀಮನ ಜತೆ ಈ ಹಿಂದೆ ಲಕ್ಷ್ಮೀ ಎಂಬ ತನ್ನ ಸಂಗಾತಿ ಇದ್ದಳು, ಅವಳು ಅನಾರೋಗ್ಯದಿಂದ ತೀರಿ ಹೋಗುತ್ತಾಳೆ. ಆ ಬಳಿಕ ಭೀಮ ಒಂಟಿಯಾಗಿ ಕಾಲ ಕಳೆಯುತ್ತಿದ್ದು ಸಾಕಷ್ಟು ರೋಧಿಸುತ್ತಿದ್ದನು. ಅವನನ್ನು ನೋಡಲು ಬರುವ ಜನರೇ ಅವನಿಗೆ ಪ್ರೀತಿ ಪಾತ್ರರಾಗಿರುತ್ತಾರೆ. ನಾನು ಒಂಟಿಯಾಗಿದ್ದೇನೆ ನನಗೂ ಸಂಗಾತಿ ಬೇಕು ಎನ್ನುತ್ತಿದ್ದ ಭೀಮನಿಗೆ ಈಗ ಕಂಕಣಭಾಗ್ಯ ಕೂಡಿ ಬಂದಿದ್ದು, ಇನ್ನೇನೂ ಕೆಲವೇ ದಿನಗಳಲ್ಲಿ ಪಾರ್ವತಿ ಎಂಬ ವಧು ಕರಡಿಯನ್ನು ವಿವಾಹವಾಗಲಿದ್ದಾನೆ. ಅದಕ್ಕಾಗಿ ಅರಣ್ಯಾಧಿಕಾರಿಗಳು ಕೂಡ ಸಜ್ಜಾಗಿದ್ದು, ವಿವಾಹ ಮಹೋತ್ಸವಕ್ಕೆ ವೈದ್ಯರ ಅನುಮತಿ ಕಾಯುತ್ತಿದ್ದಾರೆ. ಅಲ್ಲದೇ ಮಧು ಚಂದ್ರಕೂ ಸಮಯ ನಿಗದಿಮಾಡಲು ವೈದ್ಯರ ಬಳಿ ಅನುಮತಿ ಕೋರಿದ್ದಾರೆ. ಹಾಗಾದ್ರೆ ಆ ಪಾರ್ವತಿ ಕರಡಿ ಯಾರು ಎಂಬ ಕುತೂಹಲವಿದ್ದು,ಅವಳ ಸಂಪೂರ್ಣ ಡೀಟೆಲ್ಸ್ ಇಲ್ಲಿದೆ. ಪಾರ್ವತಿ ಚಿತ್ರದುರ್ಗದ ಮತ್ತು ದಾವಣಗೆರೆ ಜಿಲ್ಲೆಯ ಫಲವನಹಳ್ಳಿ ಗಡಿಭಾಗದ ನೀರ್ಥಡಿ ಫಾರೆಸ್ಟ್ ಪಕ್ಕದಲ್ಲಿ ಸಿಗುತ್ತಾಳೆ. ಮರ ಹತ್ತಿ ಕುಳಿತಿದ್ದ ಆಕೆಯನ್ನು ಕೆಳಗೆ ಇಳಿಸಲು ಅರಣ್ಯಾಧಿಕಾರಿಗಳು ಸಾಕಷ್ಟು ಕಷ್ಟಪಟ್ಟು ಇಳಿಸಿ ವನ್ಯ ಜೀವಿ ಪರಿಪಾಲಕ ಅಧಿಕಾರಿಗಳ ಆದೇಶದ ಮೇರೆಗೆ ಆನಗೋಡಿಗೆ ತರುತ್ತಾರೆ. ಅಲ್ಲಿ 7 ರಿಂದ 8 ವರ್ಷದ ಭೀಮ ಒಂಟಿಯಾಗಿದ್ದು, ದಾವಣಗೆರೆ ಡಿಎಫ್ಒ ಜಗನ್ನಾಥ್ ಏಕಾಂಗಿಯಾಗಿದ್ದ ಭೀಮನಿಗೆ ಪಾರ್ವತಿ ಎಂಬ ಹೆಣ್ಣು ಕರಡಿ ನೋಡಿ ಆನಗೋಡಿನಲ್ಲಿರುವ ಭೀಮನ ಪಕ್ಕದ ಪ್ರತ್ಯೇಕ ಕೊಠಡಿಯಲ್ಲಿ ಪಾರ್ವತಿ ಬಿಡುತ್ತಾರೆ. ಪಾರ್ವತಿ ನೋಡಿದ ಭೀಮ ಈಗ ಸಾಕಷ್ಟು ಸಂತಸವಾಗಿದ್ದು, ಪದೇ ಪದೇ ಪಾರ್ವತಿಯನ್ನು ಇಣುಕಿ ಇಣುಕಿ ನೋಡುತ್ತಿದ್ದಾನೆ. ಪಾರ್ವತಿ ಕೂಡ ಭೀಮನ ಆಕರ್ಷಣೆಗೆ ಒಳಗಾಗಿದ್ದು, ಪ್ರೇಮಾಂಕುರವಾಗಿದೆ. ಪಾರ್ವತಿಗೆ ತಿನ್ನೋದಕ್ಕೆ ಏನಾದರೂ ನೀಡಿದರೆ, ಭೀಮ ಹತ್ತಿರ ಬರುತ್ತಾನೆ. ಭೀಮನಿಗೆ ಏನಾದ್ರೂ ಕೊಟ್ಟರೆ ಪಾರ್ವತಿ ಹತ್ತಿರ ಹೋಗುತ್ತಾಳೆ. ಈ ಇಬ್ಬರ ಲವ್ ಕಹಾನಿ ನೋಡೋದೇ ಒಂದು ಚೆಂದ. ಇನ್ನು ಭೀಮ ಪಾರ್ವತಿ ಬಂದಿರೋದನ್ನು ನೋಡಿ ಮರ ಹತ್ತೋದು, ಯಾರು ಇಲ್ಲದೇ ವೇಳೆ ಅವಳ ಬಳಿ ಮಾತನಾಡುವುದನ್ನು ಮಾಡುತ್ತಿದ್ದಾನೆ ತುಂಟ ಭೀಮ.
ಭೀಮ ಕರಡಿಗೆ ಏಳರಿಂದ ಎಂಟು ವರ್ಷ ವಯಸ್ಸಾಗಿದ್ದು, ಲಕ್ಷ್ಮೀ ಕಳೆದು ಕೊಂಡ ಭೀಮನಿಗೆ ಅನಾಥ ಪ್ರಜ್ಞೆ ಕಾಡುತ್ತಿತ್ತು. ಯಾವಾಗಲೂ ಸಪ್ಪೆ ಮುಖ ಮಾಡಿಕೊಂಡು ಓಡಾಡುತ್ತಿದ್ದ. ಆದರೀಗ ಮೂರುವರೆ ವರ್ಷದ ಪಾರ್ವತಿ ಸಿಕ್ಕಿದ್ದು, ಅವನ ವಿರಹವೇದನೆಯನ್ನು ವೌನದ ಮೂಲಕ ಪಾರ್ವತಿಗೆ ತಿಳಿಸುತ್ತಿದ್ದಾನೆ. ಈ ಲವ್ ಕಹಾನಿ ಸದ್ಯ ಬಂಧನದ ಬೇಲಿಯಲ್ಲಿ ನಡೆಯುತ್ತಿದ್ದು, ಜಿಲ್ಲಾ ಅರಣ್ಯಾಧಿಕಾರಿ ಜಗನ್ನಾಥ್ ಮುಹೂರ್ತ ಫಿಕ್ಸ್ ಮಾಡಲು ಪಶು ವೈದ್ಯರ ಜ್ಯೋತಿಷ್ಯ ಕೇಳಬೇಕಿದೆ. ಆ ಬಳಿಕವೇ ಇವರು ಒಂದಾಗಲಿದ್ದು, ಒಂದೇ ಮನೆಯಲ್ಲಿ ಸಂಸಾರ ಹೂಡುವರು. ಅಲ್ಲಿತನಕ ನಾವೂ ನೀವೂ ಇಬ್ಬರು ಕಾಯಬೇಕು.