i
25 ಲಕ್ಷ ಪರಿಹಾರ, ಉದ್ಯೋಗ ನೀಡದ ಹೊರೆತು ಶವ ಸಂಸ್ಕಾರ ಮಾಡಲ್ಲ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಲುಷಿತ ನೀರು ಸೇವಿಸಿ ಮಹಿಳೆ ಮಂಜುಳಾ ಮೃತಪಟ್ಟ ಘಟನೆ ಚಿತ್ರದುರ್ಗ ನಗರದ ಕವಾಡಿಗರಹಟ್ಟಿಯಲ್ಲಿ ನಡೆದಿದ್ದು ಮೃತ ದೇಹದ ಅಂತ್ಯ ಸಂಸ್ಕಾರಕ್ಕೆ ಕುಟುಂಬಸ್ಥರು ಮತ್ತು ಕವಾಡಿಗರಹಟ್ಟಿಯ ನಿವಾಸಿಗಳು ಅಡ್ಡಿ ಮಾಡುತ್ತಿದ್ದಾರೆ.ಕವಾಡಿಗರಹಟ್ಟಿಯ ಮೃತ ಮಂಜುಳಾ ಪತಿ ಆಂಜನೇಯ ಅವರ ಮನೆ ಮುಂದೆ ಪಾರ್ಥಿವ ಶರೀರ ಇಟ್ಟಿದ್ದು ಶವ ಸಂಸ್ಕಾರಕ್ಕೆ ನಿವಾಸಿಗಳು ಒಪ್ಪುತ್ತಿಲ್ಲ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಕವಾಡಿಗರಹಟ್ಟಿಗೆ ಆಗಮಿಸಿ 25 ಲಕ್ಷ ರೂ.ಗಳ ಪರಿಹಾರ ನೀಡಬೇಕು. ಇದರ ಜೊತೆಯಲ್ಲಿ ಸಂಸತ್ರಸ್ತ ಕುಟುಂಬದ ಓರ್ವರಿಗೆ ಉದ್ಯೋಗ ನೀಡಬೇಕು ಎಂದು ಬುಧವಾರ ಪಟ್ಟು ಹಿಡಿದು ಕೂತಿದ್ದಾರೆ.
ಕಲುಷಿತ ನೀರು ಸೇವಿಸಿ ಮಂಜುಳಾ(23) ಆಂಜನೇಯ ಅವರು ಚಿಕಿತ್ಸೆ ಫಲಿಸದೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ಸಾವನ್ನಪ್ಪಿದ್ದನ್ನು ಸ್ಮರಿಸಬಹುದಾಗಿದೆ. ಮಂಗಳವಾರ ರಾತ್ರಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಕವಾಡಿಗರಹಟ್ಟಿಗೆ ಆಗಮಿಸಿ ಸಂಸತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಲು ಮುಂದಾದಾಗ ನಿವಾಸಿಗಳು ಮುತ್ತಿಗೆ ಹಾಕಿ ಸಚಿವ ವಿರುದ್ಧ ಧಿಕ್ಕಾರ ಕೂಗಿದ್ದರು.
ಸಚಿವರು ಮಾತು ಮಾತನಾಡುತ್ತಿದ್ದಂತೆ ಕಾರಲ್ಲಿ ಹೊರಡಲು ಸಿದ್ದರಾದಾಗ ನಿವಾಸಿಗಳು ಕಾರಿಗೆ ಅಡ್ಡ ನಿಂತು ಮುತ್ತಿಗೆ ಹಾಕಿ ಸೂಕ್ತ ಪರಿಹಾರಕ್ಕೆ ಪಟ್ಟು ಹಿಡಿದಿದ್ದರು. ಕೊನೆಗೆ ಐಮಂಗಲದ ಹರಳಯ್ಯ ಸ್ವಾಮೀಜಿಗಳ ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿ ಶಾಂತಗೊಳಿಸಿದ ನಂತರ ಸುಧಾಕರ್ ಅಲ್ಲಿಂದ ಹೊರಟು ಹೋಗಿದ್ದರು. ಹಾಗಾಗಿ ಕವಾಡಿಗರಹಟ್ಟಿಯ ನಿವಾಸಿಗಳು ಮೃತ ದೇಹ ಎತ್ತದೇ ಪರಿಹಾರಕ್ಕಾಗಿ ಮತ್ತು ಉದ್ಯೋಗಕ್ಕಾಗಿ ಬಿಗಿಪಟ್ಟು ಹಿಡಿದಿದ್ದಾರೆ.