i
ಚಿತ್ರದುರ್ಗ ಸಮೀಪ ಭೀಕರ ರಸ್ತೆ ಅಪಘಾತ, ಪತಿ, ಪತ್ನಿ, ಪುತ್ರ ಸೇರಿ ನಾಲ್ಕು ಮಂದಿ ದುರ್ಮರಣ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಪತಿ, ಪತ್ನಿ, ಪುತ್ರ ಸೇರಿ ನಾಲ್ಕು ಮಂದಿ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಇಬ್ಬರು ಪುತ್ರರು ಸೇರಿದಂತೆ ಮತ್ತೊಂಬರು ಗಾಯಗೊಂಡಿದ್ದು ಅವರನ್ನ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
ಚಿತ್ರದುರ್ಗ ಸಮೀಪದ ಮಲ್ಲಾಪುರ ಸೇತುವೆಯ ಮೇಲೆ ಭಾನುವಾರ ಬೆಳಗಿನ ಜಾವ ಮಾರಣಾಂತಿಕ ಅಪಘಾತ ಸಂಭವಿಸಿದೆ. ಹೊಸಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಲಾರಿ ಚಾಲಕ ಲಕ್ಷ್ಮಣ ಭಾರೀ ವಾಹನಗಳಿಗೆ ನಿಗದಿ ಮಾಡಿರುವ ರಸ್ತೆ(ಪಾತ್)ನಲ್ಲಿ ಲಾರಿ ಸಂಚರಿಸುತ್ತಿತ್ತು. ಬಿಜಾಪುರದಿಂದ ಚಿಕ್ಕಮಗಳೂರು ಕಡೆಗೆ ಪ್ರವಾಸಕ್ಕಾಗಿ ತೆರಳುತ್ತಿದ್ದ ಕಾರು ಮುಂದೆ ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಕಾರು ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಮೃತ ಪಟ್ಟವರನ್ನು ಭೀಮಾಶಂಕರ(26) ಕಾರು ಚಾಲಕ ಸಂಗನ ಬಸಪ್ಪ(36), ಈತನ ಪತ್ನಿ ರೇಖಾ ಸಂಗನ ಬಸಪ್ಪ(29), ಪುತ್ರ ಅಗಸ್ತ್ಯ ಸಂಗನ ಬಸಪ್ಪ(8) ಎಂದು ತಿಳಿದು ಬಂದಿದೆ.
ಕಾರು ಚಾಲಕನ ಪುತ್ರಿ ಅನ್ವಿತಾ ಸಂಗನ ಬಸಪ್ಪ(6), ಮತ್ತೊಬ್ಬ ಪುತ್ರ ಆದರ್ಶ ಸಂಗನ ಬಸಪ್ಪ(4), ಅಪರಿಚಿತ ಪುರುಷ ವ್ಯಕ್ತಿ(26) ಈ ಮೂರು ಮಂದಿ ಗಾಯಗೊಂಡಿದ್ದು ಇವರೆಲ್ಲರೂ ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮೃತರೆಲ್ಲರೂ ಬಿಜಾಪುರ ನಿವಾಸಿಗಳಾಗಿದ್ದಾರೆ. ಸಂಗನ ಬಸಪ್ಪ ಮತ್ತು ಅವರ ಸಂಬಂಧಿ ಈರಣ್ಣ ಅವರ ಕುಟುಂಬ ಕುಟುಂಬ ಪ್ರವಾಸಕ್ಕಾಗಿ ಚಿಕ್ಕಮಗಳೂರಿಗೆ ತೆರಳುತ್ತಿತ್ತು. ಇನ್ನೊಂದು ಕಾರಿನಲ್ಲಿ ಈರಣ್ಣನವರ ಕುಟುಂಬ ಇದ್ದು ಅಪಘಾತಕ್ಕೀಡಾಗುತ್ತಿದ್ದಂತೆ ತಕ್ಷಣ ನೆರವಿಗೆ ಬಂದಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕೈರಿ ಕೆ.ಪರಶುರಾಂ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.