i
ಲೋಕಸಭಾ ಚುನಾವಣೆಗೆ ಹೊಸ ಮುಖಗಳು ಎಂಟ್ರಿ, ಸಖತ್ ಡಿಮ್ಯಾಂಡ್…
ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ವಿದ್ಯಾಕಾಶಿ ಎಂದೇ ಹೆಸರು ಪಡೆದಿರುವ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 2024ರ ಲೋಕಸಭೆ ಚುನಾವಣೆ ಕಾವು ಜೋರಾಗಿದೆ. ಈ ಬಾರಿ ಹೊಸ ಅಭ್ಯರ್ಥಿಗಳೇ ಹೆಚ್ಚು ಆಕಾಂಕ್ಷಿಗಳಾಗಿದ್ದಾರೆ. ಈ ಕ್ಷೇತ್ರದಿಂದ ಸ್ಪರ್ಧೆಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಆಕಾಂಕ್ಷಿಗಳ ದಂಡೇ ಸಿದ್ಧವಾಗುತ್ತಿದೆ. ಪ್ರಸ್ತುತ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಮಾತ್ರ ಹೆಚ್ಚು ಆಕಾಂಕ್ಷಿಗಳಾಗಿದ್ದು, ಜನರ ಮನಸ್ಸು ಸೆಳೆಯಲು ನಾನಾ ತಂತ್ರಗಳನ್ನು ಹೂಡುತ್ತಿದ್ದಾರೆ.
ಬಿಜೆಪಿಯಲ್ಲಿ ನಿವೃತ್ತ ಸರ್ಕಾರಿ ಅಧಿಕಾರಿ ಕೊಟ್ರೇಶ್, ವೈದ್ಯ ಡಾ.ರವಿ, ಸಂಸದ ಜಿಎಂ ಸಿದ್ದೇಶ್ವರ ಮಗ ಅನಿತ್, ಮಾಜಿ ಶಾಸಕ ರೇಣುಕಾಚಾರ್ಯ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಇನ್ನೂ ಕಾಂಗ್ರೆಸ್ನಲ್ಲಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಪತ್ನಿ ಪ್ರಭಾ ಮಲ್ಲಿಕಾರ್ಜುನ್, ಇನ್ ಸೈಟ್ಸ್ ಐಎಎಸ್ ಕೋಚಿಂಗ್ ಸೆಂಟರ್ ವಿನಯ್ಕುಮಾರ್ ಹೆಸರು ಹೆಚ್ಚು ಪ್ರಚಲಿತದಲ್ಲಿದ್ದರೇ ಕಾಂಗ್ರೆಸ್ನ ಯುವ ನಾಯಕ ನಿಖಿಲ್ ಕೊಂಡಜ್ಜಿ ಹೆಸರು ತೆರೆಮರೆಯಲ್ಲಿ ಓಡಾಡುತ್ತಿದೆ. ಮೂಲತಃ ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡ ನಿವೃತ್ತ ಸರಕಾರಿ ಅಧಿಕಾರಿ ಕೆ.ಬಿ.ಕೊಟ್ರೇಶ್ ಈಗ ಅಖಾಡಕ್ಕೆ ಇಳಿದಿದ್ದು, ತಾನು ಕೂಡ ಪ್ರಬಲ ಆಕಾಂಕ್ಷಿ ಎಂದು ಘೋಷಿಸಿದ್ದಾರೆ. ಇವರು ಎ.ಕೆ.ಫೌಂಡೇಶನ್ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಜನರನ್ನು ತನ್ನತ್ತ ಸೆಳೆಯಲು ಮುಂದಾಗಿದ್ದಾರೆ.
ಇನ್ನು ಸಂಸದರ ಪುತ್ರ ಜಿ.ಎಸ್.ಅನಿತ್ ಪ್ರಬಲ ಆಕಾಂಕ್ಷಿ ಎಂದು ಹೇಳದೇ ಇದ್ದರೂ, ತೆರೆಮರೆಯಲ್ಲಿ ಅವರೂ ಕೂಡ ನಾನಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಜಿಎಂ ಟ್ರಸ್ಟ್ ಮೂಲಕ ಬೃಹತ್ ಕಾರ್ಯಕ್ರಮಗಳನ್ನು ಮಾಡಲು ಸಜ್ಜಾಗಿದ್ದಾರೆ.
ದಾವಣಗೆರೆ ನಗರದ ಖ್ಯಾತ ವೈದ್ಯ ಡಾ.ರವಿ ಜಗಳೂರು ಮಾಜಿ ಶಾಸಕ ಗುರುಸಿದ್ದನಗೌಡರ ಮಗನಾಗಿದ್ದು, ಪ್ರೀತಿ ಆರೈಕೆ ಟ್ರಸ್ಟ್ ಮೂಲಕ ಹಳ್ಳಿ ಹಳ್ಳಿಗಳಲ್ಲಿ ಉಚಿತ ಆರೋಗ್ಯ ಶಿಬಿರ ಕೈಗೊಳ್ಳುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಹಾಲಿ ಗಣಿ ಮತ್ತು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಟಿಕೆಟ್ ಆಕಾಂಕ್ಷಿಯಾಗಿದ್ದು ಅವರು ಈಗಾಗಲೇ ಎಸ್ಎಸ್ಕೇರ್ ಟ್ರಸ್ಟ್ ಮೂಲಕ ಆರೋಗ್ಯ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಟ್ರಸ್ಟ್ನಿಂದ ಆರೋಗ್ಯಕಾರ್ಡ್ ಬಿಡುಗಡೆ ಮಾಡಿದ್ದಾರೆ.
ಇನ್ ಸೈಟ್ಸ್ ಐಎಎಸ್ ಕೋಚಿಂಗ್ ಸೆಂಟರ್ ಸಂಸ್ಥಾಪಕ ವಿನಯ್ಕುಮಾರ್ ಕೂಡಾ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು ಈಗಾಗಲೇ ಧಾರ್ಮಿಕ ಕಾರ್ಯಕ್ರಮ, ಕಾಂಗ್ರೆಸ್ನ ರಾಜಕೀಯ ಕಾರ್ಯಕ್ರಮದ ಫ್ಲೇಕ್ಸ್ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಹಳ್ಳಿ-ಹಳ್ಳಿಗಳಲ್ಲಿ ನಡೆಯುವ ಜಾತ್ರಾ ಸಮಾರಂಭಗಳಿಗೆ ಫ್ಲೇಕ್ಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಬಿಜೆಪಿ ಮುಖಂಡ ಮಾಜಿ ಶಾಸಕ ರೇಣುಕಾಚಾರ್ಯ ನಾನಾ ಕೂಡ ಆಕಾಂಕ್ಷಿ ಎಂದು ಹೇಳುವುದಲ್ಲದೇ, ಕಾಂಗ್ರೆಸ್ ನಾಯಕರ ಜತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರು ಬಿಜೆಪಿ ಅಥವಾ ಕಾಂಗ್ರೆಸ್ ಯಾವುದರಲ್ಲಿ ಅಭ್ಯರ್ಥಿಯಾಗಲಿದ್ದಾರೆ ಎನ್ನುವುದು ನಿಗೂಢವಾಗಿದೆ.ವರಿಷ್ಠರ ಸೆಳೆಯಲು ತಂತ್ರ: ಹಲವು ಆಕಾಂಕ್ಷಿಗಳು ತಮ್ಮ ಪಕ್ಷಗಳ ವರಿಷ್ಠರ ಸೆಳೆಯಲು ಆಕಾಂಕ್ಷಿಗಳು ಸಾಕಷ್ಟು ಪ್ರಯತ್ನದಲ್ಲಿ ತೊಡಗಿದ್ದಾರೆ. ಕೆಲವರಂತೂ ಹಲವಾರು ಸೇವಾ ಕಾರ್ಯಗಳು ತೊಡಗಿಸಿಕೊಳ್ಳುವ ಮೂಲಕ ಮತದಾರರ ಗಮನ ಸೆಳೆಯುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಹೆಚ್ಚು ಬಿಜೆಪಿಯೇ ಗೆದ್ದಿರುವ ಕಾರಣ ಹಲವರು ಕಣ್ಣೀಟ್ಟಿದ್ದಾರೆ.
ಪಂಚ ಗ್ಯಾರಂಟಿಗಳನ್ನು ಜಾರಿ ಮಾಡುವ ಮೂಲಕ ಕಾಂಗ್ರೆಸ್ ಅಲೆಯನ್ನು ತೇಲಿಬಿಟ್ಟಿರುವ ಪಕ್ಷದಲ್ಲಿಯೂ ಕೂಡಾ ಕಟ್ಟಾಳುಗಳು ಜೋರಾಗಿಯೇ ಇದ್ದಾರೆ. ಈ ಎರಡು ಪಕ್ಷದಲ್ಲಿ ಯಾರನ್ನು ಕೇಳಿದರೂ, ನಾವು ಆಕಾಂಕ್ಷಿ ಅಷ್ಟೇ, ಹೈಕಮಾಂಡ್ ಯಾರಿಗೆ ಟಿಕೆಟ್ ಕೊಡುತ್ತದೆಯೋ ಅವರಿಗೆ ಕೆಲಸ ಮಾಡುತ್ತೇವೆ ಎನ್ನುವ ಮಾತು ಮಾತ್ರ ಎಲ್ಲರ ಬಾಯಲ್ಲಿ ರಿಂಗಣಿಸುತ್ತಿದೆ. ಎಲ್ಲರೂ ಕಣ್ಣಿಟ್ಟಿರುವುದು ಆರೋಗ್ಯ ಸೇವೆ: ಕಾಂಗ್ರೆಸ್-ಬಿಜೆಪಿ ಕಟ್ಟಾಳುಗಳು ಹೆಚ್ಚಿನದಾಗಿ ಹಳ್ಳಿಗಳಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಮಾಡಿ ಅಲ್ಲಿ ಹೆಚ್ಚಿನದ್ದಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ರೋಗಿಗಳಿಗೆ ಉಚಿತ ಔಷಧ, ಆಸ್ಪತ್ರೆ ಸೇವೆ ನೀಡುವ ಮೂಲಕ ಜನರ ಮನಸ್ಸನ್ನು ಕದಿಯುತ್ತಿದ್ದಾರೆ. ಸದ್ಯ ಮಳೆ ಇಲ್ಲದ ಕಾರಣ ಹಳ್ಳಿಗಳಲ್ಲಿ ಕೂಡ ಯುವಕರು ಖಾಲಿ ಇದ್ದು, ಆಕಾಂಕ್ಷಿಗಳ ಜತೆ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಆಕಾಂಕ್ಷಿಗಳ ಹೆಸರಲ್ಲಿ ಅಭಿಮಾನಿ ಬಳಗವನ್ನು ಕಟ್ಟಿಕೊಳ್ಳುತ್ತಿದ್ದಾರೆ.
ಶಾಸಕರ ಮನವೊಲಿಕೆ: ದಾವಣಗೆರೆ ಬಿಜೆಪಿಯಲ್ಲಿ ಸಂಸದ ಜಿಎಂ ಸಿದ್ದೇಶ್ವರ, ಮಾಜಿ ಸಚಿವ ಎಸ್ಎ ರವೀಂದ್ರನಾಥ್ ಹೈಕಮಾಂಡ್ ಆಗಿದ್ದಾರೆ. ಇನ್ನೂ ಕಾಂಗ್ರೆಸ್ನಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಹೈಕಮಾಂಡ್ ಆಗಿದ್ದು, ವರಿಷ್ಠರ ಮನವೊಲಿಸಲು ನಾನಾ ತಂತ್ರಗಾರಿಕೆಗಳು ನಡೆಯುತ್ತಿವೆ. ಈ ನಡುವೆ ಆಕಾಂಕ್ಷಿಗಳು ಹಿರಿಯ ನಾಯಕರ ಪಾದಕ್ಕೆ ನಮಸ್ಕಾರ ಮಾಡುವ ಮೂಲಕ ವಿನಯತೆ ಮರೆಯುತ್ತಿದ್ದಾರೆ. ಒಟ್ಟಾರೆ ಎಂಪಿ ಸ್ಥಾನಕ್ಕೆ ಹೊಸ ಮುಖಗಳು ಅಖಾಡಕ್ಕೆ ಇಳಿದು, ಸ್ಫರ್ಧಾಳು ಯಾರು ಎಂಬುದು ಮಾತ್ರ ಇನ್ನೂ ನಿಗೂಢವಾಗಿದ್ದರೂ ಕೂಡಾ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ಲೋಕಸಭೆ ಚುನಾವಣಾ ಕಾವು ದಿನದಿಂದ ದಿನಕ್ಕೆ ಕಾವೇರತೊಡಗಿದೆ.