i
ಕೃಷಿ ಪದವಿ ಕಾಲೇಜು, ವಾಣಿ ವಿಲಾಸ ಸಕ್ಕರೆ ಕಾರ್ಖಾನೆ ಆರಂಭಿಸಲು ಸಿಎಂಗೆ ಮನವಿ ಮಾಡಿದ ಸುಧಾಕರ್…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕು ಬಬ್ಬೂರು ಫಾರಂ ಆವರಣದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇವರ ವತಿಯಿಂದ ಆಯೋಜಿಸಲಾದ ಬಬ್ಬೂರು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಮಾರಂಭ ಹಾಗೂ ಸಿರಿಧಾನ್ಯ ಮೇಳ ಮತ್ತು ತೋಟಗಾರಿಕೆ ಬೆಳೆಗಳ ವಿಚಾರಸಂಕಿರಣ ಉದ್ಘಾಟನಾ ಸಮಾರಂಭದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸಂಶೋಧನಾ ಕೇಂದ್ರ ಪ್ರಾರಂಭವಾಗಿ 100 ವರ್ಷಗಳು ತುಂಬಿವೆ. ಈ ಕೇಂದ್ರದ ಸ್ಥಾಪನೆಗೆ ಕಾರಣೀಭೂತರಾದ ಎಲ್ಲರನ್ನೂ ಸ್ಮರಿಸುವುದು ಅಗತ್ಯ. 1913 ರಲ್ಲಿ ಈ ಭಾಗದ ಜನರು ಉದಾರ ಮನೋಭಾವದಿಂದ ಸಂಶೋಧನಾ ಕೇಂದ್ರಕ್ಕೆ ಜಮೀನು ನೀಡಿದ್ದಾರೆ. ಸಂಶೋಧನಾ ಕೇಂದ್ರದಿಂದ ಜಿಲ್ಲೆಯ ರೈತರ ಹೊಲಗಳಲ್ಲಿ ಬೆಳೆಗಳ ಕುರಿತು ಪ್ರಯೋಗ ಹಾಗೂ ಪ್ರಾತ್ಯಕ್ಷಿಕೆ ನಡೆಸಲಾಗುತ್ತದೆ. ಹಿರಿಯೂರಿನಲ್ಲಿ ತೋಟಗಾರಿಕೆ ಕಾಲೇಜು ಈಗಾಗಲೇ ಇದೆ. ಬಬ್ಬೂರು ಸಂಶೋಧನಾ ಕೇಂದ್ರದಲ್ಲಿಯೂ ಕೃಷಿ ಪದವಿ ಕಾಲೇಜು ಆರಂಭಿಸಬೇಕು. ಸಂಶೋಧನಾ ಕೇಂದ್ರದಲ್ಲಿ ಬೋಧನೆ, ಸಂಶೋಧನೆ, ವಿಸ್ತರಣೆ ಕಾರ್ಯ ನಡೆಯುತ್ತಿದೆ. ಇವುಗಳನ್ನು ಉನ್ನತೀಕರಣ ಗೊಳಿಸಲು ಸಹಕಾರ ನೀಡಬೇಕು. ಈ ಭಾಗದ ರೈತರ ಅನುಕೂಲಕ್ಕಾಗಿ ಮೈಸೂರು ಅರಸರ ಕಾಲದಲ್ಲಿ ಆರಂಭಿಸಿದ ವಾಣಿ ವಿಲಾಸ ಸಕ್ಕರೆ ಕಾರ್ಖಾನೆಯನ್ನು ಮರು ಪ್ರಾರಂಭಕ್ಕೆ ಅನುದಾನ ನೀಡಬೇಕು. ಹಿರಿಯೂರು ನಗರ ಅಭಿವೃದ್ಧಿ ರೂ.40 ಕೋಟಿ, ನಗರದಲ್ಲಿ ಈಗಿನ ಹಳೆಯ ಬಸ್ ನಿಲ್ದಾಣ ತೆರವುಗೊಳಿಸಿ ಹೈಟೆಕ್ ಬಸ್ ನಿರ್ಮಾಣ ಮಾಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಕೋರಿದರು.
ಶಾಸಕ ಬಿ.ಜಿ.ಗೋವಿಂದ ಮಾತನಾಡಿ ಜಿಲ್ಲೆಯಲ್ಲಿ ಕಪ್ಪು ತಲೆ ಹುಳಿವಿನ ಬಾಧೆಯಿಂದ ತೆಂಗಿನ ತೋಟಗಳು ಹಾಳಾಗುತ್ತಿವೆ. ರೈತರ ನೆರವಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಲೆಸ್ಲಿ ಕೋಲ್ಮನ್ ಶತಮಾನೋತ್ಸವ ಭವನದ ಉದ್ಘಾಟನೆ. ಕೃಷಿ ಯಂತ್ರೋಪಕರಣಗಳ ಪರೀಕ್ಷಾ ಕೇಂದ್ರ, ಶೇಂಗಾ ಸಂಸ್ಕರಣ ಘಟಕ, ವಿಶೇಷ ಅಂಚೆ ಲಕೋಟೆ ಹಾಗೂ ಭೂಪಟಗಳು, ಕೃಷಿ ಪ್ರಕಟಣೆಗಳನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಟಿ. ರಘುಮೂರ್ತಿ, ಎನ್.ವೈ. ಗೋಪಾಲಕೃಷ್ಣ, ಕೆ.ಸಿ.ವೀರೇಂದ್ರ ಪಪ್ಪಿ, ಬಬ್ಬೂರು ಗ್ರಾ.ಪಂ. ಅಧ್ಯಕ್ಷ ಪಿ. ಕರಿಯಣ್ಣ, ಜಿಲ್ಲಾಧಿಕಾರಿ ದಿವ್ಯಪ್ರಭು, ಜಿ.ಪಂ. ಸಿಇಒ ಸೋಮಶೇಖರ್ ಎಸ್.ಜೆ., ತೋಟಗಾರಿಕೆ ನಿರ್ದೇಶಕ ರಮೇಶ್ ಡಿ.ಎಸ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇಂದ್ರ ಕುಮಾರ್ ಮೀನಾ, ಬೆಂಗಳೂರು ಕೃಷಿ ವಿ.ವಿ. ಕುಲಪತಿ ಡಾ. ಎಸ್.ವಿ. ಸುರೇಶ, ಪಶುಸಂಗೋಪನೆ ವಿವಿ ಕುಲಪತಿ ಡಾ. ಕೆ.ಸಿ. ವೀರಣ್ಣ, ಮಾಜಿ ಸಹಕಾರ ಸಚಿವ ಡಾ. ಹೆಚ್. ಏಕಾಂತಯ್ಯ, ಕೃಷಿಕ ಸಮಾಜ ತಾಲ್ಲೂಕು ಅಧ್ಯಕ್ಷ ಹೆಚ್.ಆರ್. ತಿಮ್ಮಯ್ಯ, ಮಾಜಿ ಸಚಿವ ಹೆಚ್. ಆಂಜನೇಯ, ಮಾಜಿ ಸಂಸದ ಚಂದ್ರಪ್ಪ, ಸೇರಿದಂತೆ ವಿವಿಧ ಗಣ್ಯರು, ಅಧಿಕಾರಿಗಳು, ವ್ಯವಸ್ಥಾಪನಾ ಮಂಡಳಿ ಸದಸ್ಯರು, ವಿಶ್ವವಿದ್ಯಾಲಯದ ಅಧಿಕಾರಿಗಳು, ಪ್ರಗತಿಪರ ರೈತರು ಭಾಗವಹಿಸಿದ್ದರು. ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ. ಜಗದೀಶ್ ಸ್ವಾಗತಿಸಿದರು.