i
ಹಾಲಿನ ಬೆಲೆ ಇಳಿಕೆ ವಿರುದ್ಧ ಜ-09 ರಂದು ಭಾರತೀಯ ಕಿಸಾನ್ ಸಂಘದಿಂದ ಹೋರಾಟ-ಮಂಜುನಾಥ ಕಾತ್ರಿಕೇನಹಳ್ಳಿ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಶಿಮೂಲ್ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಹಾಲಿನ ಬೆಲೆ ಪದೇಪದೇ ಇಳಿಕೆ ಮಾಡುತ್ತಿರುವುದರಿಂದ ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ತುಂಬಲಾರದ ನಷ್ಟವಾಗುತ್ತಿದೆ. ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಂಡ ರೈತನಿಗೆ ಪದೇಪದೇ ಕೈಕೊಡುತ್ತಿರುವ ಮಳೆ ಹಾಗೂ ವಿದ್ಯುತ್ತಿನ ಕಣ್ಣಾಮುಚ್ಚಾಲೆಯಿಂದ ಕೈಕೊಟ್ಟ ಬೆಳೆಯಿಂದ ಲಾಭ ಕಾಣದೇ ಕಂಗಾಲಾದ ಅನ್ನದಾತನಿಗೆ ಹೈನುಗಾರಿಕೆ ಯಿಂದಲಾದರೂ ಬದುಕು ಕಟ್ಟಿಕೊಳ್ಳಬೇಕೆಂದು ನಂಬಿದ್ದ ಅನ್ನದಾತನಿಗೆ ಹಾಲಿನ ದರ ಇಳಿಕೆ ಯಿಂದ ದಿಕ್ಕು ತೋಚದಂತಾಗಿದೆ. ಆದ್ದರಿಂದ ಭಾರತೀಯ ಕಿಸಾನ್ ಸಂಘವು ಜನವರಿ-9 ರಂದು ಮಂಗಳವಾರ ಶಿವಮೊಗ್ಗ ಹಾಲು ಒಕ್ಕೂಟದ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಂಡಿರುವುದರಿಂದ ಎಲ್ಲ ಹಾಲು ಉತ್ಪಾದಕ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಭಾರತೀಯ ಕಿಸಾನ್ ಸಂಘದ ಕಾತ್ರಿಕೇನಹಳ್ಳಿ ಮಂಜುನಾಥ್ ಮನವಿ ಮಾಡಿದ್ದಾರೆ.
ಹಿರಿಯೂರು ತಾಲೂಕಿನಾದ್ಯಂತ ಇರುವ ಎಲ್ಲಾ ಹಾಲು ಉತ್ಪಾದಕ ಸಹಕಾರ ಸಂಘಗಳನ್ನು ಭೇಟಿಯಾಗಿ ಹಾಲಿನ ಬೆಲೆಯನ್ನು ಇಳಿಸಿರುವುದರ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗಿದೆ ಆದ್ದರಿಂದ ತಾವೆಲ್ಲರೂ ಈ ಚಳುವಳಿಯಲ್ಲಿ ಭಾಗವಹಿಸಿ ಅನ್ನದಾತನಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ದ್ವನಿ ಎತ್ತಬೇಕು ಎಂದು ತಿಳಿಸಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾತ್ರಿಕೇನಹಳ್ಳಿ ಮಂಜುನಾಥ್ ಹೋರಾಟಕ್ಕೆ ಕರೆ ನೀಡಿದ್ದಾರೆ.ಇದರ ಅಂಗವಾಗಿ ತಾಲೂಕಿನ ಹರಿಯಬ್ಬೆ, ಬರುಡುಕುಂಟೆ, ಬೇತೂರು, ಹೊಸಕೆರೆ, ಖಂಡೇನಹಳ್ಳಿ, ಧರ್ಮಪುರ, ವಾಣಿವಿಲಾಸಪುರ, ಅಮ್ಮನಹಟ್ಟಿ, ಲಕ್ಕವ್ವನಹಳ್ಳಿ, ರಂಗೇನಹಳ್ಳಿ, ಚಿಲ್ಲಹಳ್ಳಿ ಹಾಗೂ ಬ್ಯಾಡರಹಳ್ಳಿ ಗ್ರಾಮಗಳಲ್ಲಿ ಪೋಸ್ಟರ್ ಅಂಟಿಸಿ ಹಾಲು ಉತ್ಪಾದಕರನ್ನು ಹೋರಾಟಕ್ಕೆ ಆಹ್ವಾನಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಚಿಲ್ಲಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಮಣ್ಣ ಮಾತನಾಡಿ ಭಾರತೀಯ ಕಿಸಾನ್ ಸಂಘ ಹಾಲು ಉತ್ಪಾದಕರ ನೆರವಿಗೆ ಬಂದಿರುವುದು ಶ್ಲಾಘನೀಯ. ಈ ಹೋರಾಟಕ್ಕೆ ಎಲ್ಲಾ ಹಾಲು ಉತ್ಪಾದಕರು ಒಗ್ಗಟ್ಟಿನಿಂದ ಕೈಜೋಡಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಅಧ್ಯಕ್ಷ ಲಕ್ಕವನಹಳ್ಳಿ, ಸುಬ್ರಮಣಿ ಮಾತನಾಡಿ ಹೋರಾಟ ಮಾಡಿದರೆ ಮಾತ್ರ ನ್ಯಾಯಯುತವಾದ ಬೆಲೆ ಪಡೆಯಲು ಸಾಧ್ಯ ಆದ್ದರಿಂದ ಎಲ್ಲರೂ ಹೋರಾಟಕ್ಕೆ ಕೈಜೋಡಿಸಬೇಕು ಎಂದು ತಿಳಿಸಿದರು.