i
ಯಡಿಯೂರು ಸಿದ್ಧಲಿಂಗೇಶ್ವರ ಸ್ವಾಮಿಗಳ ಅದ್ಧೂರಿ ಜಯಂತ್ಯೋತ್ಸವ ಆಚರಣೆ…
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ಶ್ರೀಕ್ಷೇತ್ರ ದೊಡ್ಡಮಠ ಆವರಣದಲ್ಲಿ ಭಾನುವಾರ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿಯವರ 5ನೇ ವರ್ಷದ ಜಯಂತ್ಯುತ್ಸವ ಅದ್ದೂರಿಯಾಗಿ ನೆರವೇರಿತು.
ಬೆಳಿಗ್ಗೆ 10 ಗಂಟೆಗೆ ಬಸವಣ್ಣ ದೇವಾಲಯದಿಂದ ಪ್ರಾರಂಭವಾದ ಸಿದ್ಧಲಿಂಗೇಶ್ವರ ಸ್ವಾಮಿಯವರ ಬೆಳ್ಳಿರಥದ ಮೆರವಣಿಗೆಯಲ್ಲಿ ನಂದಿಧ್ವಜ, ವೀರಗಾಸೆ, ಡೊಳ್ಳು ಕುಣಿತ, ಪೂಜಾ ಕುಣಿತ ನಾದಸ್ವರಗಳು ರುಮಾಲೆ ವೃತ್ತ ಪಾಂಡುರಂಗ ದೇವಾಲಯ ಮುಂಭಾಗ, ಸ್ವಾಮಿ ವಿವೇಕಾನಂದರ ಪ್ರತಿಮೆ ಮುಂಭಾಗದಿಂದ ಸಂಚರಿಸಿ ನಗರೇಶ್ವರ ದೇವಾಲಯ, ಕಾಳಮ್ಮನ ದೇವಾಲಯ ಮಾರ್ಗವಾಗಿ ತಾಲೂಕು ಕಚೇರಿ ವೃತ್ತದ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ಸಾಗಿತು.
ಸುಮಾರು ಐವತ್ತಕ್ಕೂ ಹೆಚ್ಚಿನ ಸ್ವಾಮೀಜಿಗಳು ಕಾಲ್ನಡಿಗೆಯಲ್ಲಿ ದೊಡ್ಡಮಠದ ಆವರಣಕ್ಕೆ ತಲುಪಿದ ನಂತರ ವೇದಿಕೆ ಕಾರ್ಯಕ್ರಮ ಪ್ರಾರಂಭವಾಯಿತು.
ಬೆಂಗಳೂರಿನ ಬೇಲಿ ಮಠದ ಚರಮೂರ್ತಿ ಶಿವರುದ್ರ ಮಹಾಸ್ವಾಮಿ ಅವರು ” ಮಹಾಶಿವಯೋಗಿ ಉದ್ದಾನ ಯತೀಶ್ವರರು” ಎಂಬ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
12ನೇ ಶತಮಾನದ ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮುಂದಿನ ದಿನಗಳಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿಯಾಗುತ್ತದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕುಣಿಗಲ್ ತಾಲ್ಲೂಕು ಬೆಟ್ಟಹಳ್ಳಿ ಮಠದ ಪರಮಪೂಜ್ಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ನಗರದ ದೊಡ್ಡ ಮಠ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶರಣತತ್ವ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ಇಂತಹ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ಸಾಗಲಿ ಎಂದು ಹಾರೈಸಿದರು.
ನೆಲಮಂಗಲ ತಾಲ್ಲೂಕಿನ ವೀರಶೈವ ಲಿಂಗಾಯತ ನಿವೃತ್ತ ನೌಕರರ ಸಂಘದ ವತಿಯಿಂದ ಇಂಜಿನಿಯರಿಂಗ್ ಶಿಕ್ಷಣ ಮುಂದುವರಿಸಲು ಸಹಾಯಾರ್ಥವಾಗಿ ಹತ್ತು ಸಾವಿರ ರೂಪಾಯಿಗಳ ನೆರವು ನೀಡಿದರು.
ಸರ್ಕಾರಿ ಶಾಲೆಗಳ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ಮಾಡಿದರು. ಸಮಾರಂಭದಲ್ಲಿ ಸುಮಾರು ಮೂರು ಸಾವಿರ ಜನರು ಪಾಲ್ಗೊಂಡಿದ್ದರು.
ಶಾಸಕ ಧೀರಜ್ ಮುನಿರಾಜು, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ರವಿಕುಮಾರ್, ಪುಷ್ಪಾ ಶಿವಶಂಕರ್, ಮುತ್ತಣ್ಣ ನೆಲಮಂಗಲ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಲ್ಲಣ್ಣ ಸೇರಿ ಹಲವರು ಉಪಸ್ಥಿತರಿದ್ದರು.
ಕೆ.ಮಹಾಲಿಂಗಯ್ಯ ಕಾರ್ಯಕ್ರಮ ನಿರೂಪಿಸಿದರು. ಅಭಿಲಾಷ್ ಸ್ವಾಗತಿಸಿದರು.