i
ಪ್ರಾಣ ಪಣಕ್ಕಿಟ್ಟು ರಥದ ಚಕ್ರದಡಿ ಬಿದ್ದ ಏಳು ಭಕ್ತರನ್ನು ರಕ್ಷಣೆ ಮಾಡಿದ ಡಿವೈಎಸ್ಪಿ ಪಿ.ರವಿ, ಪತ್ರಕರ್ತ ಶಿವರಾಜ್…
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ;
ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಭಾರಿ ಅವಘಡಗಳು ಸಂಭವಿಸಿದ್ದು ಒಬ್ಬ ಭಕ್ತ ಮೃತಪಟ್ಟ ಘಟನೆ ನಡೆದಿದೆ.
ಇಂದು ಶ್ರೀಕ್ಷೇತ್ರ ಘಾಟಿ ಸುಬ್ರಮಣ್ಯದಲ್ಲಿ ಬ್ರಹ್ಮ ರಥೋತ್ಸವದಲ್ಲಿ, ರಥ ಎಳೆಯುವ ಸಂದರ್ಭದಲ್ಲಿ ನೂಕು ನುಗ್ಗಾಟದಿಂದಾಗಿ ರಥದ ಚಕ್ರದಡಿ ಬಿದ್ದ ಸುಮಾರು ಏಳು ಜನ ಭಕ್ತರು ಸಂಭವಿಸಬಹುದಾದ ಭಾರೀ ಅವಘಡದಿಂದ ಪಾರಾಗಿದ್ದಾರೆ.
ರಕ್ಷಣೆ ಮಾಡಿದ ಡಿವೈಎಸ್ಪಿ ಪಿ.ರವಿ ಮತ್ತು ಪತ್ರಕರ್ತ ಶಿವರಾಜ್ ನೇಸರ:
ಇಂದು ಷಷ್ಠಿಯ ಅಂಗವಾಗಿ ಘಾಟಿ ಸುಬ್ರಮಣ್ಯ ಕ್ಷೇತ್ರಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 25-30 ಸಾವಿರ ಜನ ಭಕ್ತರು ಸೇರಿದ್ದು, ರಥ ಎಳೆಯುವ ವೇಳೆ ಉಂಟಾದ ನೂಕುನುಗ್ಗಾಟದಿಂದಾಗಿ ರಥದ ಚಕ್ರದಡಿ ಸುಮಾರು ಏಳು ಜನ ಭಕ್ತರು ಬಿದ್ದರು. ಇದನ್ನು ಕಂಡ ಪತ್ರಕರ್ತ ಶಿವರಾಜ್ ನೇಸರ ಮತ್ತು ಡಿವೈಎಸ್ಪಿ ಪಿ.ರವಿ ಅವರು ತಕ್ಷಣ ಜಾಗೃತರಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಭಕ್ತರನ್ನು ರಕ್ಷಣೆ ಮಾಡಿದ್ದಾರೆ.
ಬಸ್ ಅಡಿ ಸಿಲುಕಿದ ಭಕ್ತ ಸಾವು:
ಇದಕ್ಕೂ ಮೊದಲು ಕೆಎಸ್ಆರ್ಟಿಸಿ ಬಸ್ಸೊಂದು ಹಿಮ್ಮುಖವಾಗಿ ಚಲಿಸಿದ ಪರಿಣಾಮದಿಂದ ನಾಲ್ಕೈದು ಜನ ಭಕ್ತರು ಬಸ್ಸಿನ ಅಡಿ ಸಿಲುಕಿದ್ದು, ಓರ್ವ ಭಕ್ತನ ಮೇಲೆ ಬಸ್ಸಿನ ಚಕ್ರ ಹರಿದ ಪರಿಣಾಮ ಸಾವನ್ನಪ್ಪಿರುವ ಘಟನೆ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಬಳಿಯ ವಿಶ್ವೇಶ್ವರಯ್ಯ ಪಿಕಪ್ ಡ್ಯಾಂ ಸಮೀಪ ನಡೆದಿದೆ.
ಬಸ್ ಚಾಲನೆಯಿದ್ದಾಗಲೇ ತರಾತುರಿಯಲ್ಲಿ ಇಳಿಯುವಾಗ ಹಿಂಬದಿ ಚಕ್ರಕ್ಕೆ ಸಿಲುಕಿಕೊಂಡ ಪರಿಣಾಮ ಭಕ್ತನ ಕಾಲಿಗೆ ಗಂಭೀರ ಗಾಯವಾಗಿತ್ತು. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಗರದ ಸರ್ಕಾರಿ ಸಾರ್ಜನಿಕ ಆಸ್ಪತ್ರೆಯಲ್ಲಿ
ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಮೃತನ ಗುರುತು ಇನ್ನೂ ಪತ್ತೆಯಾಗಿಲ್ಲ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.