i
ಕೆನರಾ ಬ್ಯಾಂಕಿಗೆ 1.94 ಕೋಟಿ ವಂಚಿಸಿದ ಹಿರಿಯ ಮ್ಯಾನೇಜರ್…
ಚಂದ್ರವಳ್ಳಿ ನ್ಯೂಸ್, ಕಾರವಾರ:
ಅಂಕೋಲಾಪಟ್ಟಣದ ಕೆನರಾ ಬ್ಯಾಂಕಿನ ವ್ಯವಸ್ಥಾಪಕನೊಬ್ಬ ಬ್ಯಾಂಕಿಗೆ ಮತ್ತು ಗ್ರಾಹಕರಿಗೆ ಸೇರಿದಂತೆ 1.94 ಕೋಟಿ ರೂ. ವಂಚನೆ ಮಾಡಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೆನರಾ ಬ್ಯಾಂಕ್ 2ನೇ ಶಾಖೆಯಲ್ಲಿ ಹಿರಿಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಗದಗ ಜಿಲ್ಲೆಯ ಹುಲಕೋಟಿ ಗ್ರಾಮದ ವೆಂಕಟೇಶ ಎಫ್. ಮಜ್ಜಿಗುಡ್ಡ ವಂಚನೆಯ ಆರೋಪಿ ಎನ್ನಲಾಗಿದೆ.
ದೂರು: ಸೆ.21, 2020 ರಿಂದ ಜ.31, 2023 ರವರೆಗೆ ಬ್ಯಾಂಕಿನ ಸೀನಿಯರ್ಮೆನೇಜರ್ ಆಗಿ ಕಾರ್ಯನಿರ್ವಹಿಸಿದ್ದ ವೆಂಕಟೇಶ ಮಜ್ಜಿಗುಡ್ಡ ತನ್ನ ಅವಧಿಯಲ್ಲಿ ಬ್ಯಾಂಕಿನ ಖಾತೆಯಿಂದ ಹಣವನ್ನು ತನ್ನ ಖಾತೆಗೆ, ತನ್ನ ಹತ್ತಿರದ ಸಂಬಂಧಿಕರ ಖಾತೆಗೆ ಹಾಗೂ ಸ್ನೇಹಿತರ ಖಾತೆಗೆ ಹಣ ವರ್ಗಾವಣೆ ಮಾಡಿ ನಗದು ರೂಪದಲ್ಲಿ ಹಣ ತೆಗೆದುಕೊಂಡಿರುವ ಕುರಿತು ಬ್ಯಾಂಕಿನಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿದ್ದಲ್ಲದೇ ಅನೇಕ ಬ್ಯಾಂಕ್ ಗ್ರಾಹಕರ ಖಾತೆಯಿಂದ ಖಾತೆದಾರರ ಅನುಮತಿ ಇಲ್ಲದೇ ಯಾವುದೇ ದಾಖಲೆಗಳಿಲ್ಲದೆ ಬೇರೆ, ಬೇರೆ ಗ್ರಾಹಕರ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಬ್ಯಾಂಕಿನಿಂದ ಗ್ರಾಹಕರಿಗೆ ಸಾಲ ನೀಡುವಾಗ ಸರಿಯಾಗಿ ದಾಖಲಾತಿಗಳನ್ನು ನಿರ್ವಹಿಸಿದೆ ಬ್ಯಾಂಕ್ ಸ್ಲಿಪ್ ಮತ್ತು ಚಲನ್ಗಳ ಸಾಕ್ಷಿ ನಾಶಪಡಿಸಿದ್ದಾರೆ.
ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಸ್ವಸಹಾಯ ಸಂಘಗಳಿಗೆ ಸಾಲ ಕೊಟ್ಟ ನಂತರ ಅವರಿಂದ ಬ್ಯಾಂಕ್ನಲ್ಲಿ ಡಿಪಾಸಿಟ್ ಹಣ ಇಡಬೇಕು, ಸಾಲ ಮುಕ್ತಾಯವಾದ ನಂತರ ಡಿಪಾಸಿಟ್ ಹಣ ಸಾಲಕ್ಕೆ ಮರುಪಾವತಿಯಾಗುವುದಾಗಿ ಹೇಳಿ ನಂಬಿಸಿ ಹಣ ಪಡೆದು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು ಗ್ರಾಹಕರಿಗೆ ಮತ್ತು ಬ್ಯಾಂಕಿಗೆ ಮೋಸ ವಂಚನೆ ಮಾಡಿದ್ದಾನೆ. ಸುಮಾರು 50 ಸ್ವಸಹಾಯ ಸಂಘಗಳ 1.94 ಕೋಟಿ ರೂ. ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾನೆ ಎಂದು ಬ್ಯಾಂಕಿನ ಹಾಲಿ ವ್ಯವಸ್ಥಾಪಕಿ ಪ್ರತೀಕ್ಷಾ ವಿನೋದ ಖರೆ ಪೊಲೀಸ್ ದೂರು ನೀಡಿದ್ದಾರೆ.