i
ಜೆಡಿಎಸ್-ಬಿಜೆಪಿ ಮೈತ್ರಿ ಹೆಚ್ಚಿದ ಉಲ್ಲಾಸ ತಿಮ್ಮರಾಯಪ್ಪ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ದೇಶದ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ನೇತೃತ್ವದ ಪ್ರಬಲ ಪ್ರಾದೇಶಿಕ ಪಕ್ಷ ಜಾತ್ಯಾತೀತ ಜನತಾದಳ ರಾಜ್ಯದಲ್ಲಿ ತನ್ನ ಸಂಘಟನಾ ಶಕ್ತಿಯನ್ನು ವೃದ್ದಿಸಿಕೊಳ್ಳುತ್ತಿದೆ. ಚಿತ್ರದುರ್ಗ ಜಿಲ್ಲೆ ಜೆಡಿಎಸ್ ಪಕ್ಷದ ಭದ್ರಕೋಟೆಯಾಗಿದ್ದು, ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ಗೆ ಲೋಕಸಭೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟರೆ ಈ ಕ್ಷೇತ್ರದಲ್ಲಿ ಅಭ್ಯರ್ಥಿಯ ಗೆಲುವು ಗ್ಯಾರಂಟಿ ಎಂದು ಜಾತ್ಯಾತೀತ ಜನತಾದಳದ ಚಿತ್ರದುರ್ಗ ಲೋಕಸಭಾ ಉಸ್ತುವಾರಿ ಹಾಗೂ ಮಾಜಿ ಶಾಸಕ ತಿಮ್ಮರಾಯಪ್ಪ ತಿಳಿಸಿದರು. ಅವರು, ಶನಿವಾರ ದಲ್ಲಾಲರ ಸಮುದಾಯ ಭವನದಲ್ಲಿ ಜೆಡಿಎಸ್ ಪಕ್ಷ ಹಮ್ಮಿಕೊಂಡಿದ್ದ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ, ಮುಖಂಡ ಸಭೆಯನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಂದು ಚುನಾವಣೆಯಲ್ಲಿಯೂ ಕಾರ್ಯಕರ್ತರು ಹಲವಾರು ಸಂದರ್ಭಗಳಲ್ಲಿ ಬದಲಾವಣೆಗೆ ಹೊಂದಿಕೊಳ್ಳಬೇಕಾಗುತ್ತದೆ. ಇತ್ತೀಚೆಗೆ ತಾನೇ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ನಿದೇರ್ಶನದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿಯೊಂದಿಗೆ ಮೈತ್ರಿ ಬೆಳೆಸಿರುವುದು ಪಕ್ಷದ ಹಿತದೃಷ್ಠಿಯಿಂದ ಉತ್ತಮ ವಾತಾವರಣ ಎಂದರು. ಜೆಡಿಎಸ್ ಜಿಲ್ಲಾಧ್ಯಕ್ಷ ಪಿಲಾಜನಹಳ್ಳಿ ಎಂ.ಜಯಣ್ಣ ಮಾತನಾಡಿ, ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಎರಡು ಬಾರಿಯೂ ಕೈತಪ್ಪಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಆದರೂ ನಮ್ಮ ಅಭ್ಯರ್ಥಿ ಎಂ.ರವೀಶ್ಕುಮಾರ್ ಸೋಲನ್ನು ಮರೆತು ಮತ್ತೆ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಆರಂಭಿಸಿದ್ಧಾರೆ. ರಾಜಕೀಯ ಕ್ಷೇತ್ರದಲ್ಲಿ ಸೋಲಿನಿಂದ ದೃತಿಗೆಡದೆ ಗೆಲುವಿನತ್ತ ಹೆಜ್ಜೆ ಇಡುವ ಸಂಕಲ್ಪ ಮಾಡಬೇಕಾಗುತ್ತದೆ. ಪಕ್ಷದ ಎಲ್ಲಾ ಹಂತದ ಮುಖಂಡರು, ಕಾರ್ಯಕರ್ತರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹಾಗೂ ಮೈತ್ರಿ ಪಕ್ಷದ ಗೆಲುವಿಗೆ ಸಂಕಲ್ಪ ಮಾಡಬೇಕು ಎಂದರು. ಸಭೆಯನ್ನು ಉದ್ದೇಶಿಸಿ ಪರಾಜಿತ ಅಭ್ಯರ್ಥಿ ಎಂ.ರವೀಶ್ಕುಮಾರ್, ಎಂ.ರವೀಂದ್ರಪ್ಪ, ಗೌರವಾಧ್ಯಕ್ಷ ಹೆಗ್ಗೆರೆ ಆನಂದಪ್ಪ ಮುಂತಾದವರು ಮಾತನಾಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ಮಾತನಾಡಿ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವನ್ನು ಸಂಘಟಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾರ್ಯಕರ್ತರನ್ನು ಸಜ್ಜುಗೊಳಿಸಲು ಈ ಕಾರ್ಯಕ್ರಮ ಆಯೋಜಿಸಿದೆ. ನಿರೀಕ್ಷೆಗೂ ಮೀರಿ ಹೆಚ್ಚಿನ ಕಾರ್ಯಕರ್ತರು,ಮುಖಂಡರು ಆಗಮಿಸಿರುವುದು ಸಂತಸ ತಂದಿದೆ. ಎಲ್ಲರೂ ಒಟ್ಟಾಗಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಸಹಕರಿಸೋಣವೆಂದರು. ಸಭೆಯಲ್ಲಿ ನಗರಸಭಾ ಸದಸ್ಯರಾದ ಪ್ರಮೋದ್, ತಿಪ್ಪಕ್ಕ, ನಾಗಮಣಿ, ಚನ್ನಿಗರಾಯ, ಕಲಮರಹಳ್ಳಿ ಶಿವಣ್ಣ, ಜಡೇಕುಂಟೆ ತಿಪ್ಪೇಸ್ವಾಮಿ, ಹನುಮಂತಪ್ಪ, ಶ್ರೀಧರಚಾರಿ, ಶಿವಣ್ಣ, ಚಂದ್ರಣ್ಣ, ಬಸವರಾಜು, ವೀರಣ್ಣ, ಡಿ.ಟಿ.ಭೂತಲಿಂಗಪ್ಪ, ಸ್ವಾಲೇಹ, ವೀರೇಂದ್ರಪ್ಪ ಮುಂತಾದವರು ಉಪಸ್ಥಿತರಿದ್ದರು.