i
ಇಂದಿನಿಂದ ಶ್ರೀಹೆಂಜೇರು ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ…
ಹೆಚ್.ಸಿ.ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಹೇಮಾವತಿ(ಆಂದ್ರ):
ದಕ್ಷಿಣ ಭಾರತದ ಮೂರು ರಾಜ್ಯಗಳ ಭಕ್ತ ಸಮೂಹ ಹೊಂದಿರುವ ಕರ್ನಾಟಕ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಐಸಿಹಾಸಿಕ ಹಿನ್ನೆಲೆಯುಳ್ಳ ಆಂದ್ರ ಪ್ರದೇಶದ ಹೇಮಾವತಿಯ ಶ್ರೀಹೆಂಜೇರು ಸಿದ್ದೇಶ್ವರಸ್ವಾಮಿಯ ಮಹಾ ಶಿವರಾತ್ರಿ ಅಂಗವಾಗಿ ನಡೆಯಲಿರುವ ಜಾತ್ರಾ ಮಹೋತ್ಸವ ಅತ್ಯಂತ ವಿಶಿಷ್ಟತೆವಾಗಿ ನಡೆಯಲಿದ್ದು ಹೇಮಾವತಿ ಶ್ರೀಹೆಂಜೇರು ಸಿದ್ದೇಶ್ವರ ಸ್ವಾಮಿಯ ಗತವೈಭವ ಮರುಕಳಿಸಬೇಕಾಗಿದೆ.
ಕ್ರಿ.ಶ. ಒಂಭತ್ತು ಮತ್ತು ಹತ್ತನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದ ನೊಳಂಬ ಸಾಮ್ರಾಜ್ಯಕ್ಕೆ ಈಗಿನ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ ತಾಲ್ಲೂಕಿನ ಹೇಮಾವತಿ ಗ್ರಾಮವು ರಾಜಧಾನಿಯಾಗಿತ್ತು.
ರಾಜರು ಗತಿಸಿದರೂ, ರಾಜ್ಯಗಳು ಅಳಿದರೂ, ರಾಜಧಾನಿಗಳು ನಾಶವಾಗಿ ಹೋದರೂ ರಾಜಾಶ್ರಯದ ಪೋಷಣೆಯಲ್ಲಿ ಬೆಳೆದ ಶಾಸ್ತ್ರ, ಸಾಹಿತ್ಯ, ಸಂಗೀತ, ಶಿಲ್ಪಕಲೆ ಮುಂತಾದವು ಇಂದಿಗೂ ಉಳಿದುಕೊಂಡಿದ್ದು ಅದಕ್ಕೆ ಸಾಕ್ಷಿಗುಡ್ಡೆಯಾಗಿ ಶ್ರೀ ಹೇಮಾವತಿ ಹೆಂಜಾರು ಸಿದ್ದೇಶ್ವರ ಸ್ವಾಮಿ ನೆಲೆ ಇದೆ. ಅಂದಿನ ನೊಳಂಬ ರಾಜವಂಶ ಇಂದು ಉಳಿದಿಲ್ಲ. ಒಂದು ಕಾಲದಲ್ಲಿ ನೊಳಂಬರ ವೈಭವದ ರಾಜಧಾನಿ ಕೇಂದ್ರವಾಗಿದ್ದ ಹೇಮಾವತಿಯು ಈಗ ಕುಗ್ರಾಮವಾಗಿ ನೊಳಂಬರ ಗತವೈಭವದ ಶಿಲ್ಪಾವಶೇಷ ಸಂಪತ್ತಿನೊಂದಿಗೆ ಉಳಿದುಕೊಂಡಿದೆ.
ಹೇಮಾವತಿ ಗ್ರಾಮದಲ್ಲಿ ಎತ್ತ ನೋಡಿದರತ್ತ ಯಾವುದೇ ಒಂದು ಮಣ್ಣಿನ ಗುಡ್ಡೆಯೊಳನ್ನು ಕೆದಕಿದರೆ ಶಿಲ್ಪಕಲಾ ಸುರ ಸುಂದರಿಯರೋ ಅಥವಾ ಅರೆಕೊರೆ ಮುರಿದು ಮುಕ್ಕಾದ ಶಿಲಾಬಳ್ಳಿಯಲ್ಲಿ ಮೊಗ್ಗರಳಿ ಹೂವಾಗುವ ಮನೋಹರ ದೃಶ್ಯವೋ ಕಾಣಿಸುತ್ತದೆ. ಮಣ್ಣಿನ ದಿಬ್ಬವನ್ನು ಕೆದಕಿದರೂ ಸಾಕು ಸೌಂದರ್ಯ ಚೆಲ್ಲುತ್ತಾ ಇಲ್ಲೊಂದು ಶಿಲಾಸ್ತಂಭ ಅಲ್ಲೊಂದು ಬಾಗಿಲುಗಂಬ, ಮತ್ತೊಂದು ಕಡೆಯಲ್ಲಿ ಗವಾಕ್ಷಿ, ಮಗದೊಂದು ಕಡೆಯಲ್ಲಿ ದಿಕ್ಪಾಲಕರ ಫಲಕ ಹೀಗೆ ಕಾಣಿಸುತ್ತಿದ್ದವು. ನೊಳಂಬರ ಗತಕಾಲದ ಆ ರಾಜಧಾನಿ ನಗರದಲ್ಲಿ, ಇವತ್ತಿನ ಆ ಕುಗ್ರಾಮದಲ್ಲಿ ಎತ್ತ ತಿರುಗಿದರತ್ತ ಶಿಲ್ಪಗಳ ರಾಶಿಗಳೇ ಕಾಣಿಸುತ್ತಿದ್ದವು. ಎತ್ತ ನೋಡಿದರೂ ಸೌಂದರ್ಯದ ಕುಪ್ಪೆಗಳೇ ಕಾಣಿಸುತ್ತಿದ್ದವು! ಮುಖಗಳು ಭಗ್ನಗೊಂಡಿದ್ದರೂ, ಕಿವಿಗಳು ಉದುರಿದ್ದರೂ, ಕೈಕಾಲುಗಳು ಮುರಿದು ಬಿದ್ದಿದ್ದರೂ, ಶಿಲ್ಪ ಶರೀರದ ಯಾವುದೇ ಅಂಗಗಳು ಊನಗೊಂಡಿದ್ದರೂ ಅವುಗಳೆಲ್ಲವೂ ನೊಳಂಬರ ಕಲಾನೈಪುಣ್ಯತೆಯಿಂದ ಅಮೂಲ್ಯವಾದವುಗಳೇ ಆಗಿದ್ದವು. ಅವುಗಳ ಪ್ರತಿಯೊಂದೊಂದು ಬಾಗುವಿಕೆಯಲ್ಲಿ, ರೂಪದಲ್ಲಿ, ಎತ್ತರದಲ್ಲಿ, ಕೆತ್ತನೆಯ ಕುಸುರಿಯಲ್ಲಿ ಸಿದ್ಧಹಸ್ತರಾಗಿದ್ದ ಮಹಾಶಿಲ್ಪಿಗಳ ಕಲಾ ಸಾಮರ್ಥ್ಯ ನೋಡುಗರಿಗೆ ಎದ್ದುಕಾಣುತ್ತಿತ್ತು. ಅವರ ಶಿಲ್ಪಕಲೆಯು ಪ್ರಧಾನವಾಗಿ ಪಲ್ಲವರ ಶೈಲಿ ಇರಬಹುದು. ಆದರೆ ಅದರಲ್ಲಿ ಚಾಲುಕ್ಯ, ರಾಷ್ಟ್ರಕೂಟ ಶಿಲ್ಪಕಲಾ ಶೈಲಿಗಳು ಪ್ರತಿಭಾಪೂರ್ವಕವಾಗಿ ಮೇಳೈಸಿವೆ. ಆಂಧ್ರಪ್ರದೇಶದ ಅಮರಾವತಿ ಶೈಲಿಯು ಕೂಡಾ ಅಂತರ್ವಾಹಿನಿಯಾಗಿ ನೊಳಂಬರ ಶಿಲ್ಪಕಲಾ ಶೈಲಿಯನ್ನು ಪ್ರಭಾವಿಸಿದೆ ಅನ್ನಿಸುತ್ತಿದೆ.
ಆಂದ್ರಪ್ರದೇಶದ ಹೇಮಾವತಿಯ ಶ್ರೀಹೆಂಜೇರು ಸಿದ್ದೇಶ್ವರಸ್ವಾಮಿಯ ಮಹಾಶಿವರಾತ್ರಿಯು ಅತ್ಯಂತ ವಿಶಿಷ್ಟತೆಯಿಂದ ನಡೆಯಲಿದೆ. ಶಿವರಾತ್ರಿ ಉತ್ಸವವು ಕರ್ನಾಟಕ, ಆಂದ್ರ ಪ್ರದೇಶ, ತಮಿಳುನಾಡಿನ ಭಕ್ತ ಸಮೂಹಕ್ಕೆ ಹಬ್ಬದ ವಾತಾವರಣ ಒದಗಿಸಲಿದೆ. ಅದರಲ್ಲೂ ಕರ್ನಾಟಕದ ಭಕ್ತ ಸಮೂಹವೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ಸವ ಯಶಸ್ವಿಗೊಳಿಸುತ್ತಿದ್ದಾರೆ. ಶಿವಲಿಂಗಕ್ಕೆ ಪೂಜೆ ಸಲ್ಲುತ್ತದೆಯಾದರೂ ಈ ದೇವಸ್ಥಾನದಲ್ಲಿ ವ್ಯಕ್ತಿ ರೂಪದ ಶಿವನ ದೇವರ ವಿಗ್ರಹ ಪೂಜಿಸುವುದು ವಿಶೇಷ. ಈ ದೇವಸ್ಥಾನದಲ್ಲಿ ದೊಡ್ಡೇಶ್ವರ, ಸೋಮೇಶ್ವರ, ಮತ್ತೀಶ್ವರ, ಚಿತ್ತೇಶ್ವರ, ಹಾಗೂ ವಿರುಪಾಕ್ಷೇಶ್ವರ ಎಂಬ ಪಂಚಲಿಂಗೇಶ್ವರ ದೇವಾಲಯಗಳ ಜೊತೆಯಲ್ಲಿ ಬಸವಣ್ಣ, ದೊಡ್ಡ ಶಿವಲಿಂಗ, ಚೇಳಪ್ಪ, ಮತ್ತಿತರರ ದೇವರುಗಳು ನೆಲೆಸಿವೆ.
7ನೇ ಶತಮಾನದಲ್ಲಿ ನೊಳಂಬ ರಾಜರ ಆಳ್ವಿಕೆ ಕಾಲದಲ್ಲಿ ಶ್ರೀಹೆಂಜೇರು ಸಂಸ್ಥಾನವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ರಾಜ್ಯ ಬಾರ ಮಾಡುತ್ತಿದ್ದರು. ಅಂದಿನ ಶ್ರೀಹೆಂಜೇರು ರಾಜಧಾನಿಯೇ ಇಂದು ಹೇಮಾವತಿಯಾಗಿ ಪರಿವರ್ತನೆಯಾಗಿದೆ. ಅಲ್ಲದೆ ಐತಿಹಾಸಿಕ ನೊಳಂಬವಾಡಿ ಮೂವತ್ತೆರೆಡು ಸಾವಿರ ಎಂದು ಪ್ರಚಲಿತದಲ್ಲಿದೆ.
ಶ್ರೀಹೆಂಜೇರು ಸಿದ್ದೇಶ್ವರಸ್ವಾಮಿ ದೇವಸ್ಥಾನದ ಒಟ್ಟು ವಿಸ್ತೀ೯ಣ 14 ಎಕರೆ ಇದ್ದು ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ. ಪ್ರಾಚ್ಯವಸ್ತು ಇಲಾಖೆಯು ಕಳೆದ ಮೂರು ದಶಕಗಳಿಂದೆ ಈ ಪ್ರದೇಶದಲ್ಲಿ ಭೂ ಉತ್ಖನನ ಕಾರ್ಯ ಮಾಡಿಕೊಂಡು ಬರುತ್ತಿದ್ದು ನೂರಾರು ಶಿವಲಿಂಗಗಳು, ನಂದಿ ವಿಗ್ರಹಗಳು, ಏಕಶಿಲಾಮೂರ್ತಿಗಳು ಮತ್ತಿತರ ಸ್ಮಾರಕಗಳನ್ನು ಹೇಮಾವತಿ ಮ್ಯೂಸಿಯಂನಲ್ಲಿ ಇಡಲಾಗಿದೆ. ನಿತ್ಯ ನೂರಾರು ಪ್ರವಾಸಿಗರು ಇಲ್ಲಿಗೆ ಬಂದು ಇದರ ಇತಿಹಾಸ ತಿಳಿಯುತ್ತಿದ್ದಾರೆ.
ಅಗ್ನಿಗೊಂಡ- ಹೇಮಾವತಿ ಶ್ರೀಹೆಂಜೇರು ಸಿದ್ದೇಶ್ವರಸ್ವಾಮಿ ಸಂಸ್ಥಾನದಲ್ಲಿ ನಡೆಯಲಿರುವ ಅಗ್ನಿಗೊಂಡ ಕಾರ್ಯಕ್ರಮವು ರೈತಾಪಿ ವರ್ಗಕ್ಕೆ ಮೀಸಲಿರುವಂತೆ ಕಾಣುತ್ತಿದೆ. ರೈತರು ತಮ್ಮ ಜಮೀನಿನಲ್ಲಿ ಬೆಳೆದ ಆಹಾರ ಧಾನ್ಯಗಳನ್ನು, ತೆಂಗಿನ ಕಾಯಿ, ಶೇಂಗಾ ಕಾಯಿ, ಹರಳು, ಬೇಳೆ, ತೊಗರಿ, ಹೆಸರು, ಹುರುಳಿಕಾಳು, ರಾಗಿ, ಭತ್ತ, ಜೋಳ, ನವಣೆ ಮತ್ತಿತರ ಎಲ್ಲ ರೀತಿಯ ಆಹಾರ ಧಾನ್ಯಗಳನ್ನು ರೈತರು ತಮಗಿಷ್ಟ ಬಂದೊಷ್ಟು ಪ್ರಮಾಣದಲ್ಲಿ ಅಗ್ನಿಗೊಂಡಕ್ಕೆ ತಂದು ಹಾಕಿ ಹರಕೆ ತೀರಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣವೆಂದರೆ ರೈತರು ಬೆಳೆದ ಫಸಲಿಗೆ ಯಾವುದೇ ರೀತಿಯ ಕೀಟ ಬಾಧೆ, ಹುಳುಗಳ ಕಾಟ ಬೀಳಬಾರದು, ಹುಲುಸಾಗಿ ಫಸಲು ಬರಲಿ ಎಂದು ಮೊದಲೇ ಹರಕೆ ಹೊತ್ತ ರೈತಾಪಿ ವರ್ಗ ಅಗ್ನಿಗೊಂಡದೊಂದು ತಮ್ಮ ಜಮೀನಿನಲ್ಲಿ ಬೆಳೆದ ಎಲ್ಲ ಆಹಾರ ಧಾನ್ಯಗಳನ್ನು ಅಗ್ನಿಗೊಂಡಕ್ಕೆ ಹಾಕಿ ಹರಕೆ ತೀರಿಸಿಕೊಳ್ಳುತ್ತಾರೆ. ಹತ್ತಾರು ಸಾವಿರ ಜನ ಸೇರುವ ಈ ಉತ್ಸವದಲ್ಲಿ ಅಗ್ನಿಗೊಂಡ ಕಾರ್ಯಕ್ರಮವು ವಿಶೇಷತೆ ಪಡೆದಿದೆ. ಅಂದು ರೈತಾಪಿ ವರ್ಗ ಭಕ್ತಿಯಿಂದ ಉಪವಾಸವಿದ್ದು ತಮ್ಮ ಆಹಾರ ಧಾನ್ಯಗಳನ್ನು ದೇವರಿಗೆ ಸಮರ್ಪಿಸಿದ ನಂತರವೇ ಮನೆಯಲ್ಲಿ ಹಬ್ಬ ಮಾಡಿಕೊಂಡು ದೇವರಿಗೆ ಎಡೆ ಅರ್ಪಿಸಿ ಮನೆ ಮಂದಿಯಲ್ಲ ಕುಳಿತು ಊಟ ಮಾಡುವುದು. ಈ ಹಬ್ಬದೊಂದು ತಬ್ಬಿಟ್ಟಿನ ಉಂಡೆ ಮಾಡಿ ಭಕ್ತರು ಮನೆ ಮಂದಿಗೆಲ್ಲ, ಸ್ನೇಹಿತರಿಗೆಲ್ಲ, ಬಂಧುಗಳಿಗೆಲ್ಲ ಹಂಚಿ ಸಂಭ್ರಮಿಸುತ್ತಾರೆ. ಕುಲ್ಲುಪರೆ(ಮೈಮೇಲಿನ ಸಣ್ಣ ಸಣ್ಣ ಚರ್ಮ ಗಂಟು)-
ಮೈ ಮೇಲಿನ ಕುಲ್ಲುಪರೆಯನ್ನು ಒಡೆದು ಓಡಿಸಲು ರಾಮಬಾಣ ಎಂದರೆ ದೇವರಿಗೆ ಅರ್ಪಿಸುವ ಭಕ್ತಿ ಮಾತ್ರ. ಮೈ ಮೇಲಿನ ಕುಲ್ಲುಪರೆಯಿಂದ ಬಳಲುವ ಜನತೆ ಸ್ವಾಮಿ ಸನ್ನಿಧಿಗೆ ಬಂದು ದೂಪ ಹಾಕಿಸುತ್ತೇವೆಂದು ಹರಕೆ ಹೊತ್ತರೆ ಒಂದೆರಡು ತಿಂಗಳಲ್ಲಿ ಮೈ ಮೇಲಿನ ಕುಲ್ಲುಪರೆ ಕಣ್ಮರೆಯಾಗಿ ಮಾಮೂಲಿನಂತೆ ಚರ್ಮ ಕಂಗೊಳಿಸುತ್ತದೆ. ಈ ಸತ್ಯ ಅರಿತಿರುವ ಸಾವಿರಾರು ಕುಲ್ಲುಪರೆಯಿಂದ ಬಳಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಬಂದು ಭಕ್ತಿ ಸಮರ್ಪಣೆ ಮಾಡುವುದು ಗತಕಾಲದಿಂದಲೂ ನಡೆದುಕೊಂಡು ಬಂದಿದೆ.
ಸಿದ್ಭುಕ್ತಿ- ಶ್ರೀಹೆಂಜೇರು ಸಿದ್ದೇಶ್ವರಸ್ವಾಮಿಗೆ ಮತ್ತೊಂದು ರೀತಿಯಲ್ಲಿ ಭಕ್ತರು ಮಾಂಸ ಸಮರ್ಪಿಸುತ್ತಾರೆ. ಮನೆಗಳಲ್ಲಿ ಕುರಿ, ಮೇಕೆಗಳನ್ನು ಕಡಿದು ಸಿದ್ಭುಕ್ತಿ ಮಾಡಿ ಮಾಂಸದೂಟವನ್ನು ದೇವರಿಗೆ ಅರ್ಪಿಸಿ ಜನರಿಗೆ ನೀಡುವುದು ನಡೆದುಕೊಂಡು ಬಂದಿದೆ. ಕೇವಲ ಮನೆಯವರಷ್ಟೇ ಅಲ್ಲದೆ ಹೊರಗಿನ ಬಂಧು, ಬಾಂಧವರನ್ನು ಕರೆದು ಈ ರೀತಿಯ ಗುಡ್ಡಗಾಡು ಪದ್ಧಿತಿಯನ್ನು ಆಚರಣೆ ಮಾಡಿಕೊಂಡು ಬರುತ್ತಿರುವುದು ಕಾಣ ಸಿಗುತ್ತದೆ. ಹೆಂಜೇರು ಸಿದ್ದೇಶ್ವರ ಸ್ವಾಮಿಯು ಶಿವ ದೇವರಾಗಿದ್ದರು ಮಾಂಸದೂಟ ಅರ್ಪಿಸುವುದು ವಿಶೇಷವಾಗಿದೆ.
ಬಸವಣ್ಣನಿಗೆ ಬಾಳೆ ಹಣ್ಣು ತಿನ್ನಿಸುವುದು, ಚೇಳಪ್ಪಸ್ವಾಮಿಗೆ ಪೂಜೆ ಸಲ್ಲಿಸುವುದು ಹತ್ತಾರು ರೀತಿಯ ಪೂಜಾ ಕಾರ್ಯಗಳು, ವಿಶಿಷ್ಟ ಉತ್ಸವಗಳು ವಾರಗಟ್ಟಲೆ ನಡೆಯುತ್ತವೆ.
ಇಂದಿನಿಂದ ಜಾತ್ರಾ ಮಹೋತ್ಸವ-
ಅಖಂಡ ಪೂಜೆಯೊಂದಿಗೆ ಆರಂಭವಾಗುವ ಶ್ರೀಹೆಂಜೇರು ಸಿದ್ದೇಶ್ವರಸ್ವಾಮಿಯ ಶಿವರಾತ್ರಿ ಉತ್ಸವವು ಮಾ.8 ರಿಂದ ಮಾ.15 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ಮಾ. 8ರಂದು ಶುಕ್ರವಾರ ಮಹಾ ಶಿವರಾತ್ರಿ ಅಂಗವಾಗಿ ರುದ್ರಾಭಿಷೇಕ, ಅಖಂಡ ಪೂಜೆ, ಮಾ.9ರ ಶನಿವಾರ ಭಾನ, ಪಲ್ಲಕ್ಕಿ, ಮಾ.10ರ ಭಾನುವಾರ ಅಗ್ನಿಗೊಂಡ ಕಾರ್ಯಕ್ರಮ, ಮಾ.11ರ ಸೋಮವಾರ ಸಿಡಿ, ಮರ ಏರುವ ಉತ್ಸವ, ಮಾ.12ರ ಮಂಗಳವಾರ ಸಣ್ಣ(ಚಿಕ್ಕ)ತೇರು, ಮಾ.13ರ ಬುಧವಾರ ಭ್ರಹ್ಮ ರಥೋತ್ಸವ(ದೊಡ್ಡ ರಥೋತ್ಸವ), ಮಾ.14ರ ಗುರುವಾರ ವಸಂತೋತ್ಸವ, ಮಾ.15ರ ಶುಕ್ರವಾರ ಶಯನೋತ್ಸವ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲಿದೆ ಎಂದು ಶ್ರೀ ಕ್ಷೇತ್ರ ಹೇಮಾವತಿಯ ಶ್ರೀಹೆಂಜೇರು ಸಿದ್ದೇಶ್ವರಸ್ವಾಮಿ ದೇವಸ್ಥಾನ ಸಮಿತಿ ಛೇರ್ಮನ್, ಕಾರ್ಯದರ್ಶಿ ಗಳು ತಿಳಿಸಿದ್ದಾರೆ.