i
ಕುಡಿವ ನೀರಿಗೆ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಲು ಡಿಸಿ ಸೂಚನೆ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆಯಾಗಿ ಕ್ರಮ ಕೈಗೊಂಡು ಅಧಿಕಾರಿಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುಡಿಯುವ ನೀರು ಪೂರೈಕೆ ಹಾಗೂ ಬರ ನಿರ್ವಹಣೆ ಕುರಿತು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಒಂದು ದಿನವೂ ವ್ಯತ್ಯಯವಾಗದಂತೆ ತಾಲ್ಲೂಕುಗಳ ಇಓ ಗಳು, ತಹಶೀಲ್ದಾರರು ಮತ್ತು ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಕ್ರಮ ವಹಿಸಬೇಕು. ಸಮಸ್ಯಾತ್ಮಕ ಗಾಮಗಳು ಮತ್ತು ವಾರ್ಡುಗಳ ಪಟ್ಟಿ ಈಗಾಗಲೇ ತಯಾರಿಸಿಕೊಂಡಿದ್ದೀರಿ. ಮತ್ತೆ ಇನ್ನೆಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದೆಂದು ಮತ್ತೊಮ್ಮೆ ಪರಿಶೀಲಿಸಬೇಕು. ಗ್ರಾಮೀಣ ಕುಡಿಯುವ ನೀರು ಇಲಾಖೆಯವರು ಇಓ, ತಹಶೀಲ್ದಾರರು ಇತರೆ ಅಧಿಕಾರಿಗಳ ಸಮನ್ವಯದೊಂದಿಗೆ ಪರಿಣಾಮಕಾರಿಯಾಗಿ ಬರ ನಿರ್ವಹಣೆಯಲ್ಲಿ ತೊಡಗಿಕೊಳ್ಳಬೇಕು.
ಚುನಾವಣಾ ನೀತಿ ಸಂಹಿತೆಯು ಕುಡಿಯುವ ನೀರಿನ ವ್ಯವಸ್ಥೆ ಮತ್ತು ಕಾಮಗಾರಿಗೆ ಅಡ್ಡಿಪಡಿಸುವುದಿಲ್ಲ. ಚುನಾವಣಾ ಕರ್ತವ್ಯದೊಂದಿಗೆ ಕುಡಿಯುವ ನೀರಿನ ನಿರ್ವಹಣೆಗೆ ಸಹ ಹೆಚ್ಚಿನ ಗಮನವನ್ನು ಅಧಿಕಾರಿಗಳು ನೀಡಬೇಕು. ಜೂನ್ವರೆಗೆ ಕುಡಿಯುವ ನೀರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು. ಗ್ರಾಮ ಪಂಚಾಯ್ತಿ ಮಟ್ಟದಲ್ಲೇ ಟೆಂಡರ್ ಕರೆದು ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡುಬಹುದಾಗಿದ್ದು ಪಿಡಿಓ ಗಳು ಕ್ರಮ ವಹಿಸಬೇಕೆಂದರು.
ನೀರಿನ ಸಂಗ್ರಹಣೆಗಳು, ಜಲಾಶಯಗಳು, ಬಹುಗ್ರಾಮ ನೀರಿನ ಯೋಜನೆಗಳಡಿ ನೀರನ್ನು ಪೋಲು ಮಾಡಬಾರದು. ಅಚ್ಚುಕಟ್ಟಾಗಿ ನೀರನ್ನು ಬಳಸಬೇಕು. ಮುಂದಿನ ದಿನಗಳಲ್ಲಿ ಹಬ್ಬ ಹರಿದಿನಗಳಿದ್ದು ನೀರಿನ ಬಳಕೆ ಕುರಿತು ಸಮರ್ಪಕವಾಗಿ ಯೋಜಿಸಿಕೊಂಡು ಅಧಿಕಾರಿಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕೆಂದರು.
ಜಿಲ್ಲೆಯಲ್ಲಿ ಮುಂಬರುವ ತಿಂಗಳಲ್ಲಿ ಒಟ್ಟು 238 ಗ್ರಾಮಗಳು ಮತ್ತು 11 ವಾರ್ಡುಗಳಲ್ಲಿ ಕುಡಿಯುವ ನೀರಗೆ ಸಮಸ್ಯೆ ಎದುರಾಗಬಹುದೆಂದು ಗುರುತಿಸಲಾಗಿದ್ದು ಹೆಚ್ಚಿನ ಇಳುವರಿ ನೀಡುವ 68 ಬೋರ್ವೆಲ್ಳೊಂದಿಗೆ ಮುಂಗಡ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ.
ಜಿಲ್ಲೆಯಲ್ಲಿ ಮಾ.15 ರ ವೇಳೆಗೆ 1139057 ಮೆಟ್ರಿಕ್ ಟನ್ ಅಂದರೆ 42 ವಾರಗಳಿಗೆ ಸಾಕಾಗುವಷ್ಟು ಲಭ್ಯತೆ ಇದೆ. ಹಾಗೂ ಮುಂಬರುವ ತಿಂಗಳಲ್ಲಿ ಮೇವಿನ ಕೊರತೆ ಉಂಟಾದಲ್ಲಿ ಮೇವು ಖರೀದಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದ ಅವರು ಬೇಸಿಗೆಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ಹೊಂಡ ಅಥವಾ ತೊಟ್ಟಿಗಳನ್ನು ನಿರ್ಮಿಸಿ ಸಹಕರಿಸಬೇಕೆಂದರು.