i
ರೀಲ್ಸ್ ಹುಚ್ಚಾಟ: ಶಾಲಾ ಪೀಠೋಪಕರ ಧ್ವಂಸ ಮಾಡಿದ ವಿದ್ಯಾರ್ಥಿಗಳು…
ಚಂದ್ರವಳ್ಳಿ ನ್ಯೂಸ್, ಹೊಸನಗರ:
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನಪೇಟೆ ಸಮೀಪದ ಹೆದ್ದಾರಿಪುರ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುನ್ನ ಕೆಲವು ಕಿಡಿಗೇಡಿ ವಿದ್ಯಾರ್ಥಿಗಳ ದಾಂಧಲೆಯಿಂದ ತರಗತಿಯಲ್ಲಿನ ಕುರ್ಚಿ, ಟ್ಯೂಬಲೈಟ್, ಫ್ಯಾನ್, ಹೆಂಚು, ಕಿಟಕಿ ಬಾಗಿಲು ಕ್ಷಣಮಾತ್ರದಲ್ಲಿ ಪೀಸ್ ಪೀಸ್ ಆಗಿದೆ.
ಈ ಹಿನ್ನೆಲೆ ಶಾಲಾ ಅಭಿವೃದ್ಧಿ ಸಮಿತಿಯವರು, ಶಿಕ್ಷಕರು, ಗ್ರಾಮಸ್ಥರು ಶನಿವಾರ ಶಾಲೆಯಲ್ಲಿ ಸಭೆ ಕರೆದಿದ್ದರು. ಶಾಲೆಯ ಮರ್ಯಾದೆ ಹೋಗುತ್ತದೆ ಹಾಗೂ ಸೋಮವಾರದಿಂದ ಪ್ರಾರಂಭವಾಗುವ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎಂದು ಪೀಠೋಪಕರಣಗಳನ್ನು ಹಾಳು ಮಾಡಿದ ಪುಂಡ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರುಗಳಿಗೆ ಬುದ್ಧಿ ಹೇಳಿ ಕಳಿಸಿದ್ದಾರೆ.
ಆದರೆ, ತಾವು ಮಾಡಿದ ದಾಂಧಲೆಯ ವಿಡಿಯೋವನ್ನು ರೀಲ್ಸ್ ಮಾಡಿ ಪುಂಡ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಅದೀಗ ವೈರಲ್ ಆಗಿದ್ದು, ಸಾರ್ವಜನಿಕವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.