i
ಸಂಸ್ಕೃತಿ-ಸಂಸ್ಕಾರ ಗೊತ್ತಿಲ್ಲದ ಸಿ.ಟಿ ರವಿ ಹೇಳಿಕೆಗೆ ಖಂಡನೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿಯವರ ತಾಯಿಯ ಬಗ್ಗೆ ಬಿಜೆಪಿ.ಯ ಸಿ.ಟಿ. ರವಿ ಅವಹೇಳನವಾಗಿ ಮಾತನಾಡಿರುವುದು ಭೋವಿ ಸಮಾಜಕ್ಕೆ ಅತ್ಯಂತ ನೋವುಂಟು ಮಾಡಿದೆ. ಈ ಕೂಡಲೆ ಸಿ.ಟಿ.ರವಿ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಎಲ್ಲಿಗೆ ಬಂದರೂ ಘೇರಾವ್ ಮಾಡಿ ಕಪ್ಪುಬಟ್ಟೆ ಪ್ರದರ್ಶಿಸುತ್ತೇವೆಂದು ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ ಎಚ್ಚರಿಕೆ ನೀಡಿದರು.ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಹೆಣ್ಣನ್ನು ಭೂಮಾತೆ ಎಂದು ಗೌರವಿಸಲಾಗುವುದು. ರಾಜಕೀಯ ವ್ಯವಸ್ಥೆಯಲ್ಲಿ ಟೀಕೆ ಟಿಪ್ಪಣಿಗಳಿರುವುದು ಸಹಜ. ಆದರೆ ಶಿವರಾಜ್ ತಂಗಡಗಿಯವರ ತಾಯಿ ಕುರಿತು ಅವಹೇಳನವಾಗಿ ಮಾತನಾಡಿರುವ ಸಿ.ಟಿ.ರವಿ ಸಂಸ್ಕೃತಿ ಎಂತಹುದು ಎಂದು ತೋರಿಸುತ್ತದೆ. ಹಾಗಾಗಿ ಕ್ಷಮೆ ಕೇಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದರು.ಜಿಲ್ಲಾ ಭೋವಿ ಸಂಘದ ಖಜಾಂಚಿ ಈ.ಮಂಜುನಾಥ್ ಮಾತನಾಡಿ ಶಿವರಾಜ್ ತಂಗಡಗಿ ತಾಯಿ ಬಗ್ಗೆ ಹೀನಾಯವಾದ ಮಾತುಗಳನ್ನು ಬಳಸಿರುವ ಸಿ.ಟಿ.ರವಿ ಎಲ್ಲಿಯೇ ಬರಲಿ ಅವರ ವಿರುದ್ದ ಧಿಕ್ಕಾರಗಳನ್ನು ಕೂಗಿ ಘೇರಾವ್ ಹಾಕುತ್ತೇವೆ. ಇನ್ನು ಮುಂದೆ ಯಾವ ಹೆಣ್ಣಿಗೂ ಅವಮಾನವಾಗುವ ರೀತಿಯಲ್ಲಿ ನಡೆದುಕೊಳ್ಳಬಾರದೆಂದು ಆಕ್ರೋಶ ವ್ಯಕ್ತಪಡಿಸಿದರು.ಗೋಡೆಮನೆ ಹನುಮಂತಪ್ಪ ಮಾತನಾಡುತ್ತ ಬಿಜೆಪಿ.ಯ ಸಿ.ಟಿ.ರವಿ ನಮ್ಮ ಕಣ್ಣಿಗೆ ಎಲ್ಲಿಯೇ ಕಾಣಿಸಲಿ ಘೇರಾವ್ ಹಾಕಿ ದಿಕ್ಕಾರಗಳನ್ನು ಕೂಗುತ್ತೇವೆ. ಕ್ಷಮೆ ಕೇಳುವತನಕ ಬಿಡುವುದಿಲ್ಲ ಎಂದರು.ಜಿಲ್ಲಾ ಭೋವಿ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಲಕ್ಷ್ಮಣ್, ದೇವರಾಜ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.