i
ಕೌಶಲ್ಯ ಮತ್ತು ಉದ್ಯೋಗಾವಕಾಶ ಬಹಳ ಮುಖ್ಯ–ಎಸ್. ಆರ್.ನಿರಂಜನ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಕೌಶಲ ಮತ್ತು ಉದ್ಯೋಗವಕಾಶ ಕಲ್ಪಿಸುವುದು ಬಹಳ ಮುಖ್ಯವಾಗಿದೆ ಎಂದು ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷರಾದ ಪ್ರೊ. ಎಸ್. ಆರ್. ನಿರಂಜನ ತಿಳಿಸಿದರು.
ಇಗ್ನೋ ಬೆಂಗಳೂರು ಪ್ರಾದೇಶಿಕ ಕೇಂದ್ರದಲ್ಲಿ ನಡೆದ ಹಿರಿಯ ವಿಧ್ಯಾರ್ಥಿಗಳ ಸಭೆ ಮತ್ತು ಪ್ರಮಾಣ ಪತ್ರ ಪ್ರಧಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಪ್ರಸ್ತುತ ಶೈಕ್ಷಣಿಕ ಸನ್ನಿವೇಶದಲ್ಲಿ ಕೌಶಲ್ಯ ಮತ್ತು ಉದ್ಯೋಗಾವಕಾಶ ಬಹಳ ಮುಖ್ಯ ಎಂದು ಅವರು ಅಭಿಪ್ರಾಯಪಟ್ಟರು.
ಭಾರತದಲ್ಲಿ 2050 ಕ್ಕೆ 400 ದಶಲಕ್ಷ ಮೆಟ್ರಿಕ್ ಟನ್ ಆಹಾರ ಪೂರೈಸಬೇಕಾಗುತ್ತದೆ. ಇದನ್ನು ಪೂರೈಸಲು ಸಾಧ್ಯವೇ ಎಂಬುದನ್ನು ನಾವು ಚಿಂತನೆ ನಡೆಸಬೇಕಿದೆ, ಈ ಕಾರಣದಿಂದಲೇ ಹಸಿರು ಕ್ರಾಂತಿ ಪಿತಾಮಹ ಡಾ.ಎಂ.ಎಸ್. ಸ್ವಾಮಿನಾಥನ್ ಅವರು ವೈಜ್ಞಾನಿಕ ಸಂಶೋಧನೆ ಕೈಗೊಂಡು ಹೆಚ್ಚು ಆಹಾರ ಉತ್ಪಾದನೆ ಮಾಡಲು ನೀಲಿ ನಕ್ಷೆ ರೂಪಿಸಿದರು. ಭಾರತ ಮತ್ತು ನೆರೆಯ ರಾಷ್ಟ್ರಗಳ ಅಗತ್ಯತೆ ಪೂರೈಸುವ ಇಳುವರಿಯನ್ನು ಪ್ರಸ್ತಾಪಿಸಿದ್ದರು ಎಂದರು.
ಕೋವಿಡ್ಅನ್ನು ನಿಯಂತ್ರಿಸಲು ಪರಮಾಣು ವಿಜ್ಞಾನ, ಸೈಬರ್ ಭದ್ರತೆ, ವೈದ್ಯಕೀಯ ವಿಜ್ಞಾನ, ಆರೋಗ್ಯ ಮತ್ತು ನೈರ್ಮಲ್ಯ ಮತ್ತು ಲಸಿಕೆ ಕ್ಷೇತ್ರಗಳಲ್ಲಿ ಭಾರತವು ಅನೇಕ ಮೈಲಿಗಲ್ಲುಗಳನ್ನು ಸಾಧಿಸಬಹುದು. ನಮ್ಮ ದೇಶದ ಆರ್ಥಿಕ ಬೆಳವಣಿಗೆಯ ಮೇಲೆ ನೇರವಾಗಿ ಪ್ರಭಾವವನ್ನು ಬೀರುವ ಶಿಕ್ಷಣ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿನ ಗುಣಮಟ್ಟವನ್ನು ಸುಧಾರಿಸಲು ಗುಣಾತ್ಮಕ ಸಂಶೋಧನೆಯತ್ತ ಗಮನಹರಿಸುವಂತೆ ಅವರು ಪದವೀಧರರನ್ನು ಪ್ರೇರೇಪಿಸಿದರು. ವಿದ್ಯಾರ್ಥಿಗಳು ವ್ಯವಹಾರ ಮತ್ತು ಸಂಖ್ಯಾಶಾಸ್ತ್ರೀಯ ತಂತ್ರಗಳನ್ನು ಅಭಿವೃದ್ಧಿಪಡಿಸಬೇಕು. ಇದು ಕಡಿಮೆ ಸಮಯದಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಕೌಶಲ್ಯಗಳನ್ನು ಸುಧಾರಿಸಲು ಅಥವಾ ನವೀಕರಿಸಲು ಅಂತರವನ್ನು ಗುರುತಿಸುವಲ್ಲಿ ಸ್ವಯಂ ಮೌಲ್ಯಮಾಪನವು ಅತ್ಯುತ್ತಮ ವಿಧಾನವಾಗಿದೆ ಎಂದು ತಿಳಿಸಿದರು.
ನಂತರ ಮಾತನಾಡಿದ ಇಗ್ನೋ ಪ್ರಾದೇಶಿಕ ಕೇಂದ್ರ ಹಿರಿಯ ಪ್ರಾದೇಶಿಕ ನಿರ್ದೇಶಕ ಡಾ.ಎಸ್.ರಾಧಾ ಅವರು ಇಗ್ನೋ ಐಐಸಿ ವೆಬಿನಾರ್ಗಳು, ಸ್ವಯಂ ಪ್ರಭಾ ಪ್ರಾದೇಶಿಕ ಭಾಷಾ ಸಮಾಲೋಚನೆ ಮತ್ತು ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಜ್ಞಾನ, ಅಭಿಪ್ರಾಯ-ಅನಿಸಿಕೆಗಳನ್ನು ಹಂಚಿಕೊಳ್ಳುವುದಕ್ಕೆ ಇದೊಂದು ಉತ್ತಮ ವೇದಿಕೆಯಾಗಿದೆ. ಇಗ್ನೋ ಪ್ರಾದೇಶಿಕ ಕೇಂದ್ರ ಬೆಂಗಳೂರು ಇದುವರೆಗೆ ಹಳೆಯ ವಿದ್ಯಾರ್ಥಿಗಳ 300ಕ್ಕೂ ಹೆಚ್ಚು ಯಶಸ್ಸಿನ ಕಥೆಗಳನ್ನು ರೆಕಾರ್ಡ್ ಮಾಡಿದೆ ಮತ್ತು ಅಧಿಕೃತ ಚಾನೆಲ್ನಲ್ಲಿ ಅಪೆÇ್ಲೀಡ್ ಮಾಡಿದೆ. ಇಗ್ನೋ ಹಳೆಯ ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಮಿಲಿಟರಿ, ಸರ್ಕಾರಿ ಕಚೇರಿಗಳು ಮತ್ತು ಸರ್ಕಾರೇತರ ಕಚೇರಿಗಳು ಹಾಗೂ ಸಮಾಜದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ತಮ್ಮ ಸಂಸ್ಥೆಯ ವಿದ್ಯಾರ್ಥಿಗಳ ಬಗ್ಗೆ ಕಾರ್ಯಕ್ರಮದಲ್ಲಿ ನೆರೆದಿದ್ದ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಕಾರ್ಯದರ್ಶಿ ಹಾಗೂ ಎಂಇಎಸ್ ಸದಸ್ಯ ಗಣೇಶ ಭಟ್ಟ, ಪ್ರೊ. ಡಾ. ವೆಂಕೋಬ ರಾವ್, ಬೆಂಗಳೂರಿನ ಪ್ರಾದೇಶಿಕ ಕೇಂದ್ರದ ಸಹಾಯಕ ನಿರ್ದೇಶಕ ಡಾ. ಹೆಚ್ ಸಿ ಹೇಮಾಮಾಲಿನಿ ಮತ್ತು ಡಾ.ಪಿ.ಕಸ್ತೂರಿ ಮುಂತಾದವರು ಉಪಸ್ಥಿತರಿದ್ದರು.