i
ಚಿತ್ರದುರ್ಗ ಕ್ಷೇತ್ರದಲ್ಲಿ ಸ್ಪರ್ಧಿಸಲು ಯಾರು ಗಂಡಸರು ಇಲ್ಲವೇ- ರಘುಚಂದನ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜಕೀಯವಾಗಿ ಚಿತ್ರದುರ್ಗ ಆಶ್ರಯವಿಲ್ಲದವರಿಗೆ ನಿರಾಶ್ರಿತರ ಕೇಂದ್ರವಾಗಿರುವುದು ಅತ್ಯಂತ ನೋವಿನ ಸಂಗತಿ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ. ಟಿಕೆಟ್ ಆಕಾಂಕ್ಷಿ ಎಂ.ಸಿ.ರಘುಚಂದನ್ ಅತೀವ ಬೇಸರ ವ್ಯಕ್ತಪಡಿಸಿದರು.ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಐದು ನೂರು ಕಿ.ಮೀ. ದೂರದ ಗೋವಿಂದ ಕಾರಜೋಳರವರನ್ನು ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಪಕ್ಷದ ನಾಯಕರು ಘೋಷಿಸಿರುವುದು ಯಾವ ಪುರುಷಾರ್ಥಕ್ಕಾಗಿ ಚಿತ್ರದುರ್ಗದಲ್ಲಿ ಯಾರು ಗಂಡಸರು ಇಲ್ಲವೇ ಎಂದು ಪ್ರಶ್ನಿಸಿದ ಎಂ.ಸಿ.ರಘುಚಂದನ್ ಇದು ನಮ್ಮ ಸ್ವಾಭಿಮಾನ ಅಸ್ಮಿತೆಯ ಪ್ರಶ್ನೆ? ಹಾಗಾಗಿ ಶುಕ್ರವಾರ ಕಾರ್ಯಕರ್ತರ ಸಭೆ ಕರೆದಿದ್ದು, ಮುಂದಿನ ನಡೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.೨೦೧೩ ರಲ್ಲಿ ಮೂಡಿಗೆರೆಯಿಂದ ಸೋತ ಬಿ.ಎನ್.ಚಂದ್ರಪ್ಪನವರನ್ನು ಕರೆ ತಂದು ಇಲ್ಲಿಂದ ಎಂ.ಪಿ. ಮಾಡಲಾಯಿತು. ೨೦೧೯ ರಲ್ಲಿ ಆನೆಕಲ್ನಿಂದ ಸೋತ ಎ.ನಾರಾಯಣಸ್ವಾಮಿಯನ್ನು ಕರೆಸಿಕೊಂಡು ಚಿತ್ರದುರ್ಗ ಕ್ಷೇತ್ರದಿಂದ ಪಾರ್ಲಿಮೆಂಟ್ಗೆ ಕಳಿಸಲಾಯಿತು. ಈಗ ಮುದೋಳದಿಂದ ಸೋತಿರುವ ಗೋವಿಂದ ಕಾರಜೋಳರಿಗೆ ಸ್ಪರ್ಧಿಸಲು ಪಕ್ಷ ಅವಕಾಶ ಮಾಡಿಕೊಟ್ಟಿದೆ. ಹೆಸರಿಗಷ್ಟೆ ಚಿತ್ರದುರ್ಗ ಗಂಡು ಮೆಟ್ಟಿನ ನಾಡು. ರೋಷ, ಆವೇಷ, ಸ್ವಾಭಿಮಾನ ಯಾರಿಗೂ ಇಲ್ಲದಂತಾಗಿದೆ. ಪಕ್ಷ ಸ್ಥಳೀಯರು ಯಾರಿಗಾದರೂ ಟಿಕೆಟ್ ಕೊಡಬಹುದಿತ್ತು. ಗೋವಿಂದ ಕಾರಜೋಳರನ್ನು ಕರೆಸಿಕೊಳ್ಳುವ ಅವಶ್ಯಕತೆ ಏನಿತ್ತು? ಈ ಭಾಗದಲ್ಲಿ ಬಿಜೆಪಿ. ಅರಳಬೇಕು. ಕಟ್ಟ ಕಡೆಯ ಕಾರ್ಯಕರ್ತನಿಗೂ ಧ್ವನಿಯಾಗಬೇಕೆಂಬುದು ನಮ್ಮ ಅಳಲು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇವರುಗಳನ್ನು ಇದುವರೆವಿಗೂ ನಂಬಿದ್ದೆವು. ಈಗಲು ನಂಬಿದ್ದೇವೆ. ನಮ್ಮಲ್ಲಿ ಸ್ಪರ್ಧಿಸಲು ಯಾರಿಗೂ ಶಕ್ತಿ ಇಲ್ಲವೇ? ಎಂದು ಎಂ.ಸಿ.ರಘುಚಂದನ್ ಬಿಜೆಪಿ. ನಾಯಕರುಗಳ ವಿರುದ್ದ ಕಿಡಿ ಕಾರಿದರು.ನನಗೆ ಎಂ.ಪಿ. ಟಿಕೇಟ್ ತಪ್ಪಿಸಲು ನಮ್ಮಲ್ಲಿಯೇ ಕೆಲವರು ಕಳ್ಳಿನರಸಪ್ಪನ ಕೆಲಸ ಮಾಡಿದ್ದಾರೆ. ಎಂ.ಸಿ.ರಘುಚಂದನ್ಗೆ ಟಿಕೆಟ್ ತಪ್ಪಿಸಿದ್ದೇವೆಂದು ಕೆಲವರು ಅಂದುಕೊಂಡಿರಬಹುದು. ಆದರೆ ಕೊಂದವನಿಗೆ ಕೊಲೆ ತಪ್ಪಿದ್ದಲ್ಲ. ಎಲ್ಲವನ್ನು ಭಗವಂತ ನೋಡುತ್ತಿದ್ದಾನೆ. ೭೪ ವರ್ಷದ ಗೋವಿಂದ ಕಾರಜೋಳರನ್ನು ಇಲ್ಲಿಗೆ ಕರೆತಂದು ಬಿಜೆಪಿ. ನಾಯಕರುಗಳು ಮಾಡುವುದಾದರೂ ಏನು? ಪಕ್ಷದ ನಾಯಕರುಗಳ ಮೇಲೆ ನಮಗಿರುವ ಅಭಿಮಾನ, ಪ್ರೀತಿಯನ್ನು ಕೆಲವರು ದೌರ್ಬಲ್ಯ ಅಂದುಕೊಂಡರೆ ನಾವೇನು ಮಾಡಲು ಆಗುವುದಿಲ್ಲ. ಇಷ್ಟೊಂದು ದೌರ್ಜನ್ಯ ದಬ್ಬಾಳಿಕೆ ಸರಿಯಲ್ಲ. ನಾವು ಭಾವುಟ ಹಿಡಿದು ಕಟ್ಟಿರುವ ಗೂಡಿನಲ್ಲಿ ಬೇರೆಯವರು ಬಂದು ಸೇರಿಕೊಂಡರೆ ಹೇಗೆ? ಮತ್ತೊಮ್ಮೆ ನರೇಂದ್ರಮೋದಿ ಗೆಲ್ಲಬೇಕು. ದೇಶಕ್ಕೆ ಬಿಜೆಪಿ. ಅಗತ್ಯವಿದೆ. ಕೊನೆ ಹಂತದಲ್ಲಿ ನನ್ನ ಹೆಸರು ಬಿಟ್ಟು ಹೋಗಿದೆ. ಚಿತ್ರದುರ್ಗದಲ್ಲಿ ಗಂಡಸರಿಲ್ಲ ಎನ್ನುವ ಭಾವನೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆಂದರು.ಶ್ರೀಮತಿ ರತ್ನಮ್ಮ, ಹೊಳಲ್ಕೆರೆ ಮಂಡಲ ಅಧ್ಯಕ್ಷ ಸಿದ್ದೇಶ್, ಹೊಳಲ್ಕೆರೆ ನಗರಾಧ್ಯಕ್ಷ ಪ್ರವೀಣ್, ಶಿವನಕೆರೆ ರಾಜಣ್ಣ, ನಾಗೇಂದ್ರಪ್ಪ, ರುದ್ರೇಶ್, ತಿಪ್ಪೇಸ್ವಾಮಿ, ಪರಮೇಶ್ವರಪ್ಪ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.