i
ನೀರಿನ ದುರ್ಬಳಕೆ ತಡೆಯಲು ಸೂಚನೆ…
ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಗ್ರಾಮಗಳಲ್ಲಿ ಕುಡಿಯುವ ನೀರಿನ ಅಪವ್ಯಯ ಹಾಗೂ ಅನಧಿಕೃತ ದುರ್ಬಳಕೆ ತಡೆಗಟ್ಟುವಂತೆ ತಾ.ಪಂ. ಇಓ ಶಿವಪ್ರಕಾಶ್. ಎಸ್ ಸೂಚನೆ ನೀಡಿದರು. ಹೊಳಲ್ಕೆರೆ ತಾಲ್ಲೂಕು ಪಂಚಾಯಿತಿಸಭಾಂಗದಲ್ಲಿ ಬುಧವಾರ ಕುಡಿಯುವ ನೀರಿನ ಸರಬರಾಜು ಕುರಿತು ಜರುಗಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಪಿಡಿಓಗಳು ದಿನದ 24 ಗಂಟೆಯಲ್ಲಿಯೂ ಕರ್ತವ್ಯದಲ್ಲಿ ಇರಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯ ಕುಡಿಯುವ ನೀರಿನ ತೊಂದರೆಯಾಗದಂತೆ ನೀರು ನಿರ್ವಹಣೆ ಮಾಡಬೇಕು. ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಹೆಚ್ಚಿನ ಪೈಪ್ ಗಳನ್ನು ಕೊಳವೆ ಬಾವಿಗಳಿಗೆ ಅಳವಡಿಸಿ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು ಎಂದರು. ಕುಡಿಯುವ ನೀರಿನ ತೊಂದರೆಯಾಗದಂತೆ ನೀರು ನಿರ್ವಹಣೆ ಮಾಡಲು ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿತ ತಮ್ಮ ಜೊತೆಗೆ ಸದಾ ಇರುತ್ತದೆ. ಯಾವುದೇ ರೀತಿಯ ಕರ್ತವ್ಯ ನಿರ್ಲಕ್ಷ್ಯತೆ ಕಂಡು ಬಂದಲ್ಲಿ ಕಟ್ಟು ನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಇಓ ಶಿವಪ್ರಕಾಶ್ ಎಚ್ಚರಿಸಿದರು. ಹೊಳಲ್ಕೆರೆ ವ್ಯಾಪ್ತಿಯಲ್ಲಿ 17 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. 8 ಖಾಸಗಿ ಬೋರ್ ವೆಲ್ಗಳನ್ನು ಗ್ರಾಮ ಪಂಚಾಯಿತಿಯಿಂದ ಬಾಡಿಗೆ ಪಡೆಯಲಾಗಿದೆ.ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಸಹಾಯಕ ಕಾರ್ಯಪಾಲಕ ಅಭಿಯಂತರ ವೈ.ನೀಲಕಂಠ ಸೇರಿದಂತೆ ಪಿಡಿಓಗಳು ಇದ್ದರು.