i
ಟ್ರ್ಯಾಕ್ಟರ್ ನಲ್ಲಿ ಮೆರವಣಿಗೆ ಹೊರಟ ರಾಮ ಲಕ್ಷ್ಮಣ, ಸೀತೆ, ಆಂಜನೇಯ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಕೋವೇರಹಟ್ಟಿ ಗ್ರಾಮದಲ್ಲಿ ಚೌಡೇಶ್ವರಿ ದೇವಸ್ಥಾನದಲ್ಲಿ ಬುಧವಾರ ನಡೆದ ರಾಮ ನವಮಿ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಬಾಳೆ ಕಂದು, ಹೂಗಳಿಂದ ಟ್ರ್ಯಾಕ್ಟರ್ ಗೆ ಅದ್ಧೂರಿಯಾಗಿ ಸಿಂಗಾರ ಮಾಡಿ ರಾಮ ಲಕ್ಷ್ಮಣ, ಸೀತೆ, ಆಂಜನೇಯ ಇವರುಗಳ ವೇಷ ಭೂಷಣದೊಂದಿಗೆಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮರೆವಣಿಗೆ ಮಾಡಲಾಯಿತು. ಇಡೀ ಗ್ರಾಮದ ಯುವಕರು, ಹಿರಿಯರು ಸೇರಿದಂತೆ ಶ್ರೀರಾಮನ ಭಕ್ತರು ಜೈ ಶ್ರೀರಾಮ ಎಂದು ಜೈಕಾರ ಕೂಗುತ್ತಾ ರಾಮನ ಭಜನೆ ಮಾಡುತ್ತಾ ಅದ್ಧೂರಿ ಮೆರವಣಿಗೆ ಮಾಡಲಾಯಿತು. ಸಾವಿರಾರು ಭಕ್ತರಿಗೆ ಕೋಸಂಬರಿ, ಪಾನಕ ವಿತರಿಸಲಾಯಿತು.
ವಿಜಯನಗರ ಜಿಲ್ಲೆಯ ಹೊಸಪೇಟೆಯಿಂದ ಕರೆಸಲಾಗಿದ್ದ ವಿಶೇಷ ಕಲಾ ತಂಡಗಳು, ಭಜನಾ ಮಂಡಳಿ ಸದಸ್ಯರು, ಗ್ರಾಮ ಸುತ್ತ ಮುತ್ತಲಿನ ಭಜನಾ ಕಲಾವಿದರು ಮೆರವಣಿಗೆಗೆ ಮೆರಗು ನೀಡಿದರು.
ಶ್ರೀರಾಮನ ವೇಷಧಾರಿಯಾಗಿ ಪಿಯುಸಿ ವಿದ್ಯಾರ್ಥಿ ವರುಣ್, ಲಕ್ಷ್ಮಣ ಪಾತ್ರಧಾರಿ ಪಿಯುಸಿ ವಿದ್ಯಾರ್ಥಿ ಕಿಶಾನ್, ಸೀತಾ ಪಾತ್ರಧಾರಿಯಾಗಿ ಎಸ್ಎಸ್ಎಲ್ ಸಿ ವಿದ್ಯಾರ್ಥಿ ಅಜಯ್, ಶ್ರೀರಾಮನ ಪರಮಭಂಟ ಆಂಜನೇಯನ ವೇಷಧಾರಿಯಾಗಿ ಪ್ರಮೋದ್ ಗೌಡ ಅವರು ಕಂಗೊಳಿಸಿದರು. ಈ ನಾಲ್ಕು ವೇಷಧಾರಿಗಳನ್ನು ಗ್ರಾಮಸ್ಥರು ತುಂಬ ಹೃದಯದಿಂದ ಆರೈಸಿದರು. ಇಡೇ ಪೂಜಾ ವ್ಯವಸ್ಥೆ ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕೆ.ದ್ಯಾಮೇಗೌಡರ ನೇತೃತ್ವದಲ್ಲಿ ವಿಶೇಷವಾಗಿ ನಡೆಯಿತು.
ಗ್ರಾಮದ ಪ್ರಮುಖರಾದ ಮಾಜಿ ಗ್ರಾಪಂ ಅಧ್ಯಕ್ಷ ವೃಷಾಭೇಂದ್ರ, ಮಾಜಿ ಅಧ್ಯಕ್ಷ ಚಿದಾನಂದಪ್ಪ, ಸೋಮಶೇಖರ್, ಅಮರ್ ಗೌಡ, ರವಿವರ್ಮ, ಕೆ.ಎಲ್.ರಮೇಶ್, ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ, ಡಾ.ರಾಜಣ್ಣ ಸೇರಿದಂತೆ ಊರಿನ ಗಣ್ಯರು, ಯುವಕರು ಪಾಲ್ಗೊಂಡಿದ್ದರು.