i
ಭೂಮಿ ಮತ್ತು ಜನರ ಉತ್ತಮ ಆರೋಗ್ಯಕ್ಕಾಗಿ ಪ್ಲಾಸ್ಟಿಕ್ ಮುಕ್ತ ಮಾಡೋಣ: ಆಯುಕ್ತೆ ರೇಣುಕಾ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಗಿಡ ನೆಡುವುದು, ಪ್ಲಾಸ್ಟಿಕ್ತ್ಯಜಿಸುವುದು, ತ್ಯಾಜ್ಯವನ್ನು ಮರುಬಳಕೆ, ಭೂ ಸಂರಕ್ಷಣೆಗೆ ಜಾಗೃತಿ ಮೂಡಿಸುವುದು. ಪರಿಸರ ಮಾಲಿನ್ಯ ತಡೆ, ಪ್ರಾಣಿ ಪಕ್ಷಿಗಳ ರಕ್ಷಣೆ, ಮರಕಡಿತ ತಡೆ ಇಂತಹ ಕಾರ್ಯಗಳನ್ನು ಮಾಡುವ ಮೂಲಕ ಜನರ ಮತ್ತು ಭೂಮಿಯ ಆರೋಗ್ಯವನ್ನ ಕಾಪಾಡಲು ಪ್ರತಿಯೊಬ್ಬರೂ ವೈಯಕ್ತಿಕ ಜವಾಬ್ದಾರಿಗಳನ್ನು ಅನುಸರಿಸಬೇಕು ಮತ್ತು ಪ್ಲಾಸ್ಟಿಕ್ ಮುಕ್ತ ಮಾಡಲು ಸಂಕಲ್ಪ ಮಾಡೋಣ ಎಂದು ನಗರಸಭೆ ಆಯುಕ್ತೆ ಎಂ. ರೇಣುಕಾ ಹೇಳಿದರು.ಚಿತ್ರದುರ್ಗ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಋಷಿ ಸಂಸ್ಕೃತಿ ಗುರುಕುಲ ಮಹಾಸಂಸ್ಥಾನ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ, ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಭೂಮಿ ದಿನಾಚರಣೆ ಮತ್ತು ಭೂಮಿಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಗರಸಭೆ ಇಂತಹ ಕಾರ್ಯಕ್ರಮಗಳಿಗೆ ಸದಾ ಸಹಕಾರ ನೀಡುತ್ತದೆ. ಪ್ಲಾಸ್ಟಿಕ್ ನಿಷೇಧ ಮತ್ತು ಜಲ ಸಂರಕ್ಷಣೆ, ಗಿಡಬೆಳೆಸುವುದು, ಭೂಮಿ ರಕ್ಷಣೆ ಬಗ್ಗೆ ಪ್ರಬಂಧ ಸ್ಪರ್ಧೆ ಮಾಡಲಾಗುವುದು. ಅದರಲ್ಲೂ ಮಹಿಳೆಯರು ಇರುವ ಈ ಕಾಲೇಜಿನಲ್ಲಿ ಅದು ಪರಿಣಾಮಕಾರಿಯಾಗಿರಲಿ ಎಂದರು. ಭೂಮಿಯ ಸುರಕ್ಷತೆಯಲ್ಲಿ ಪರಿಸರವು ಪ್ರಮುಖ ಪಾತ್ರ ವಹಿಸುತ್ತದೆ. ಜಲ, ವಾಯು ಮಾಲಿನ್ಯ, ಅರಣ್ಯನಾಶ ಹಾಗೂ ಇನ್ನೂ ಹಲವು ಪ್ರಮುಖ ಸಮಸ್ಯೆಗಳ ಬಗ್ಗೆ ಜನರು ಒಟ್ಟಾಗಿ ಮಾತನಾಡಬೇಕು, ಅಲ್ಲದೆ ಈ ಬಗ್ಗೆ ಜನರಲ್ಲಿ ಸ್ವಯಂ ಜಾಗೃತಿ ಮೂಡಬೇಕು ಎಂಬುದು ಈ ದಿನದ ಮಹತ್ವವಾಗಿದೆ. ನಗರದಲ್ಲಿ ಮರ ಕಡಿಯುವವರ ಮೇಲೆ ಎಫ್ ಐ ಆರ್ ದಾಖಲಿಸಲಾಗುತ್ತದೆ ಎಂದರು. ಚುನಾವಣಾ ಹಿನ್ನೆಲೆಯಲ್ಲಿ ಯುವ ಮತದಾರರು ಕಡ್ಡಾಯವಾಗಿ ಮತ ಹಾಕಿ ಮತ್ತು ಮತದಾನದಿಂದ ದೂರ ಉಳಿಯುವುದನ್ನು ತಪ್ಪಿಸಿ ಗ್ರಾಮೀಣ ಮತ್ತು ನಗರದಲ್ಲಿ ಮತ ಪ್ರಮಾಣ ಹೆಚ್ಚಬೇಕು ಎಂದು ಆಯುಕ್ತರು ಉದಾಹರಣೆ ಸಮೇತ ಮಾಹಿತಿಯನ್ನು ಹಂಚಿಕೊಂಡರು. ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೀತಾ ಭರಮಸಾಗರ ಭೂಮಿ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಉಪನ್ಯಾಸ ನೀಡುತ್ತಾ, ಜೀವಿಗಳು ವಾಸಿಸಲು ಯೋಗ್ಯವಾದ ಒಂದೇ ಒಂದು ಸ್ಥಳ ಭೂಮಿ. ಹಾಗಾಗಿ ಭೂಮಿಗೆ ತಾಯಿ ಸ್ಥಾನ ನೀಡಲಾಗಿದೆ. ಆದರೆ, ಈಗ ಆ ಮಾತಿನ ಅರ್ಥ ಕಳೆದು ಕೊಳ್ಳುತ್ತಿದೆ. ನೀರು, ವಾಯು ಮಾಲಿನ್ಯವಾಗುತ್ತಿವೆ. ಪ್ರಾಣಿಗಳು ಅಳಿವಿನಂಚಿಗೆ ತಲುಪಿವೆ. ಇದೆಲ್ಲ ಆಗಿದ್ದು ಮನುಷ್ಯ ತನ್ನ ಶ್ರೀಮಂತಿಕೆಯ ದಾಹದಿಂದ. ಭೂಮಿ ಎಚ್ಚರಿಕೆಕೊಡುತ್ತಿದೆ. ವಿದ್ಯಾರ್ಥಿಗಳು ಪರಿಸರ ಉಳಿಸುವ ಕಾಯಕ ಮಾಡೋಣ ಎಂದರು.ಪ್ರಾಸ್ತಾವಿಕ ಮಾತನಾಡಿದ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲತೇಶ್ ಅರಸ್, ಪರಿಸರವನ್ನು ರಕ್ಷಿಸುವ ತೀವ್ರ ಅಗತ್ಯತೆ ನಮ್ಮಮೇಲಿದೆ. ಮಿತಿಮೀರಿದ ಜನಸಂಖ್ಯೆ, ಜೀವವೈವಿಧ್ಯತೆಯ ನಷ್ಟ, ಓಝೋನ್ ಪದರದ ಸವಕಳಿ ಮತ್ತು ಹೆಚ್ಚುತ್ತಿರುವ ಮಾಲಿನ್ಯ, ಜಾಗತಿಕ ತಾಪಮಾನ ಏರಿಕೆ, ಇವೇ ಮುಂತಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮತ್ತು ಸಮಕಾಲೀನ ಹಾಗೂ ಹೊಸ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಈ ದಿನ ಒಳಗೊಂಡಿದೆ ಎಲ್ಲರೂ ಮಾತೃಭೂಮಿಯ ಮಕ್ಕಳಾಗಿ ಪರಿಸರ ವೃದ್ದಿಸೋಣ. ಋಷಿಸಂಸ್ಕೃತಿ ಗುರುಕುಲ ಮಹಾ ಸಂಸ್ಥಾನದಿಂದ ರಾಜ್ಯಾದ್ಯಂತ ಗ್ರೀನ್ ಕರ್ನಾಟಕ ಟೀಮ್ ರಚನೆ ಮಾಡಿದ್ದು ಹಸಿರು ಸಮೃದ್ಧವಾಗಲು ಎಲ್ಲರೂ ಕೈ ಜೋಡಿಸಿ ಎಂದರು.ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರೀನ್ ಕರ್ನಾಟಕ ಟೀಮ್ ಕಮಿಷನರ್ ಡಾ.ಎಂ.ಸಿ.ನರಹರಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಚನ್ನಕೇಶವ, ಡಾ.ಮಧು, ಶಿವಣ್ಣ, ಕುಮಾರಸ್ವಾಮಿ, ಶಕುಂತಲಾ ಮತ್ತು ವಿವಿಧ ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.