ಚಂದ್ರವಳ್ಳಿ ನ್ಯೂಸ್, ಕೆ.ಆರ್.ಪೇಟೆ:
"ಇಂದಿನ ರಾಜಕೀಯ ಕ್ಷೇತ್ರ ಸಾಕಷ್ಟು ಕಲುಷಿತಗೊಂಡಿದ್ದು, ಪ್ರಾಮಾಣಿಕ ರಾಜಕಾರಣಕ್ಕೆ ಉಳಿಗಾಲವಿಲ್ಲದಂತಾಗಿದೆ. ಹೀಗಾಗಿ 2028ರ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ," ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಆಯೋಜಿಸಲಾಗಿದ್ದ ಖಾಸಗಿ ಸಮಾರಂಭವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಮ್ಮ ರಾಜಕೀಯ ಭವಿಷ್ಯ ಹಾಗೂ ಚುನಾವಣಾ ಸ್ಪರ್ಧೆಯ ಕುರಿತು ಮಹತ್ವದ ನಿರ್ಧಾರವನ್ನು ಹಂಚಿಕೊಂಡರು.
ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಂಡಿಲ್ಲ:
"1978ರಲ್ಲಿ ತಾಲೂಕು ಮಂಡಳಿ ಸದಸ್ಯನಾಗಿ ನನ್ನ ರಾಜಕೀಯ ಪಯಣ ಆರಂಭವಾಯಿತು. 2028ರ ವೇಳೆಗೆ ನಾನು ಸಕ್ರಿಯ ರಾಜಕಾರಣದಲ್ಲಿ 50 ವರ್ಷಗಳನ್ನು ಪೂರ್ಣಗೊಳಿಸುತ್ತೇನೆ. ಈ ಸುದೀರ್ಘ ಅವಧಿಯಲ್ಲಿ ಸೋಲು-ಗೆಲುವು ಎರಡನ್ನೂ ಕಂಡಿದ್ದೇನೆ. ಆದರೆ, ಯಾವತ್ತೂ ನಂಬಿದ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದಿಲ್ಲ ಮತ್ತು ಆತ್ಮಸಾಕ್ಷಿಗೆ ದ್ರೋಹ ಬಗೆದಿಲ್ಲ ಎನ್ನುವ ಸಂತೃಪ್ತಿ ನನಗಿದೆ," ಎಂದು ತಮ್ಮ ನೆನಪುಗಳನ್ನು ಮೆಲಕು ಹಾಕಿದರು.
ಚುನಾವಣಾ ಸ್ಪರ್ಧೆ ಬೇಡವೆನ್ನಲು ಪ್ರಮುಖ ಕಾರಣಗಳು:
ಕಲುಷಿತ ರಾಜಕಾರಣ: ಹಿಂದೆ ಜನರು ತಮಗಾಗಿ ಹಣ ಹಾಕಿ ಗೆಲ್ಲಿಸಿಕೊಂಡು ಬರುತ್ತಿದ್ದರು, ಆದರೆ ಇಂದು ಚುನಾವಣೆಯಲ್ಲಿ ಗೆಲ್ಲಲು ಜನರಿಗೇ ದುಡ್ಡು ಕೊಡುವ ಪರಿಸ್ಥಿತಿ ಬಂದಿದೆ.
ವಯಸ್ಸು ಹಾಗೂ ಆರೋಗ್ಯ: ಪ್ರಸ್ತುತ ನನಗೆ 79 ವರ್ಷ ವಯಸ್ಸಾಗಿದೆ. ಈ ಸರ್ಕಾರದ ಅವಧಿ ಮುಗಿಯುವ ಹೊತ್ತಿಗೆ 81-82 ವರ್ಷವಾಗುತ್ತದೆ. ಆ ಸಂದರ್ಭದಲ್ಲಿ ಹಿಂದಿನಂತೆ ಉತ್ಸಾಹ ಹಾಗೂ ಸಾಗುವಷ್ಟು ಆರೋಗ್ಯ ಸದೃಢವಾಗಿರಲು ಸಾಧ್ಯವಿಲ್ಲ.
ಕ್ಷೇತ್ರದ ಜನರ ಒತ್ತಡ: ವರುಣ ಕ್ಷೇತ್ರದ ಜನತೆ ಮತ್ತೊಮ್ಮೆ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದರೂ, ಇನ್ನು ಮುಂದೆ ಯಾವುದೇ ಚುನಾವಣಾ ಅಖಾಡಕ್ಕೆ ಇಳಿಯಬಾರದು ಎಂಬ ಗಟ್ಟಿ ತೀರ್ಮಾನಕ್ಕೆ ಬಂದಿದ್ದೇನೆ.
ಜನಸೇವೆಗೆ ಮುಡಿಪು:
"ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದ ಮಾತ್ರಕ್ಕೆ ರಾಜಕೀಯದಿಂದ ದೂರ ಸರಿಯುವುದಿಲ್ಲ. ಸಕ್ರಿಯ ರಾಜಕಾರಣದಲ್ಲಿದ್ದುಕೊಂಡು ಜನರ ಕಷ್ಟ-ಸುಖಗಳಿಗೆ ಸದಾ ಧ್ವನಿಯಾಗುತ್ತೇನೆ. ಕಳೆದ ಐದು ದಶಕಗಳಿಂದ ರಾಜ್ಯದ ಜನತೆ ತೋರಿಸಿದ ಪ್ರೀತಿ ಮತ್ತು ಋಣಭಾರ ತೀರಿಸಲು ನನ್ನ ಮುಂದಿನ ಜೀವನವನ್ನು ಸಂಪೂರ್ಣವಾಗಿ ಜನಸೇವೆಗೆ ಮುಡಿಪಾಗಿಡುತ್ತೇನೆ," ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.



