i
ಅನೈತಿಕ ಚಟುವಟಿಕೆಗಳ ತಾಣವಾದ ಚಿತ್ರದುರ್ಗ ಸರ್ಕಾರಿ ನೌಕರರ ಸಂಘ!?…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಚಿತ್ರದುರ್ಗದ ಕಚೇರಿ ಮೋಜುಮಸ್ತ್ ಮಾಡುವಂತ ಕುಡುಕರ ಮೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ಬಹಳ ದಿನಗಳಿಂದ ಕಚೇರಿ ಬಾಗಿಲು ತೆಗೆಯದೇ ಇರುವುದರಿಂದ ಅನೈತಕ ಚಟುವಟಿಕೆಗಳು ನಡೆಯುತ್ತಿರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಜಿಲ್ಲಾ ಸರ್ಕಾರಿ ನೌಕರರ ಕಚೇರಿ ಬಾಗಿಲು ಮುಚ್ಚಿ ಸರಿಸುಮಾರು ಆರೇಳು ತಿಂಗಳುಗಳು ಕಳಿದಿವೆ ಎನ್ನಲಾಗಿದೆ. ಇದಕ್ಕೆ ಇಂಬು ಕೊಡುವಂತೆ ಪ್ರತಿದಿನ ಸಂಜೆಯಾಗುತ್ತಲೆ ನೌಕರ ಸಂಘದ ಕಚೇರಿಯ ಮುಂಭಾಗವು ಕುಡುಕರಿಗೆ ನಿರೀಕ್ಷೆ ಮೀರಿದ ಮೆಚ್ಚಿನ ತಾಣವಾಗಿ ಪರಿಣಮಿಸಿದೆ.
ಪ್ರತಿದಿನ ಕುಡುಕರು ತಮ್ಮ ಈರ್ಶೆಗಳನ್ನು ಪೂರೈಸಿಕೊಂಡು ನೌಕರ ಸಂಘದ ಸ್ಥಳವನ್ನು ಅಪವಿತ್ರ ಮಾಡುವುದಲ್ಲದೇ, ಗಬ್ಬು ನಾರುವಂತೆ ಮಾಡಿರುವುದು ತುಂಬಾ ಬೇಸರದ ಸಂಗತಿಯಾಗಿದೆ. ಜಿಲ್ಲೆಯ ಸಮಸ್ತ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ಈ ಕಚೇರಿ ನೌಕರರಿಗೆ ಉಪಯೋಗವಾಗುತ್ತಿಲ್ಲ, ಬದಲಾಗಿ ಕುಡುಕರಿಗೆ ಅನುಕೂಲವಾಗಿರುವುದು ತಂಬಾ ವಿಪರ್ಯಾಸದ ಸಂಗತಿಯಾಗಿರುತ್ತದೆ ಎನ್ನುವ ದೂರುಗಳು ಕೇಳಿ ಬಂದಿದೆ.
ಕುಡುಕರು, ಕೆಲ ಪುಂಡರ ಹಾವಳಿಯಿಂದಾಗಿ ಭಯಪಡೆಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಚೇರಿಯ ವಾತಾವರಣ ಹಾಳಾಗುತ್ತಿದೆ. ಕುಡುಕರ ಮತ್ತು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿರುವ ಸರ್ಕಾರಿ ನೌಕರರ ಕಟ್ಟಡಕ್ಕೆ ಕಾಯಕಲ್ಪ ಮಾಡಬೇಕಿದೆ.
ಎಲ್ಲಿದೆ- ನಗರದ ಹೃದಯ ಭಾಗದಲ್ಲಿರುವ ಜಿಲ್ಲಾಸ್ಪತ್ರೆ ಎದುರಿನಲ್ಲೇ ಸರ್ಕಾರಿ ನೌಕರರ ಸಂಘ ಇದೆ. ಸರ್ಕಾರಿ ನೌಕರರ ಸಂಘ ಎಂದರೆ ಅತ್ಯಂತ ಗೌರವದ ಸ್ಥಾನ ಇದೆ. ಆದರೆ ಈಗ ಕುಡುಕರ ಹಾವಳಿಯಿಂದಾಗಿ ಮೂರ್ಕಾಸಿನ ಮರ್ಯಾದೆ ಮೂರಾಬಟ್ಟೆಯಾಗಿದೆ.
“ಕಾನೂನಿನ ಸಮಸ್ಯೆಯಿಂದಾಗಿ ಕಚೇರಿ ಬಾಗಿಲು ತೆರೆದಿಲ್ಲ, ಸರ್ಕಾರಿ ನೌಕರರ ಕಟ್ಟಡದ ಕಚೇರಿ ಆರಂಭಕ್ಕೂ ಮುನ್ನ ಪುನರುಜ್ಜೀವನಗೊಳಿಸಲಾಗುತ್ತದೆ.” ಕೆ.ಮಂಜುನಾಥ್, ಜಿಲ್ಲಾಧ್ಯಕ್ಷರು, ಸರ್ಕಾರಿ ನೌಕರರ ಸಂಘ, ಚಿತ್ರದುರ್ಗ.