i
ಗೂಳಿಹಟ್ಟಿ ಶೇಖರ್- ಗೋವಿಂದಪ್ಪ ಇಬ್ಬರು ಬೇಡ, ಹೊಸ ಮುಖ ಆಯ್ಕೆಗೆ ಸಿದ್ಧತೆ…
ಚಂದ್ರವಳ್ಳಿನ್ಯೂಸ್, ಹೊಸದುರ್ಗ:
ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಜನತೆ ಬದಲಾವಣೆ ತರಲು ನಿರ್ಧರಿಸಿದ್ದಾರೆ. ಗೂಳಿಹಟ್ಟಿ ಶೇಖರ್-ಬಿ.ಜಿ.ಗೋವಿಂದಪ್ಪ ಇಬ್ಬರು ಬೇಡ, ಯುವ ನಾಯಕಯತ್ತ ಕಣ್ಣು ನೆಟ್ಟಿದ್ದು ಹೊಸ ಮುಖ ಆಯ್ಕೆಗೆ ಹೊಸದುರ್ಗದ ಜನತೆ ಸಿದ್ಧರಾದಂತೆ ಕಾಣುತ್ತಿದ್ದಾರೆ.
ತಾಲ್ಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಜನರು ಈ ಬಾರಿ ಹೊಸ ಜನಪ್ರತಿನಿಧಿಯನ್ನು ಬಯಸುತ್ತಿದ್ದಾರೆ. ಜನರ ಒತ್ತಾಸೆಯ ಮೇರೆಗೆ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದೇನೆ ಎಂದು ಟಿಕೆಟ್ ಆಕಾಂಕ್ಷಿ ಟಿ.ಮಂಜುನಾಥ್ ಹೇಳಿದರು.
ಹೊಸದುರ್ಗ ಪಟ್ಟಣದ ಟಿ.ಬಿ. ವೃತ್ತದಲ್ಲಿರುವ ಜನಸಂಪರ್ಕ ಕಚೇರಿಯಲ್ಲಿ ಬೆಲಗೂರು, ತಂಡಗ, ದೇವಿಗೆರೆ, ಮಧುರೆ, ಮತ್ತೋಡು ಗ್ರಾ.ಪಂ ವ್ಯಾಪ್ತಿಯ ಮುಖಂಡರುಗಳ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನ ಪ್ರತಿಯೊಂದು ಹಳ್ಳಿಗಳ ಜನರ ನಾಡಿ ಮಿಡಿತ ಅರಿತಿದ್ದೇನೆ ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಊರೂರು ಸುತ್ತುತ್ತಿದ್ದೇನೆ. ಆದರೆ ಪ್ರತಿಯೊಬ್ಬರಲ್ಲಿಯೂ ಕೇಳಿ ಬಂದ ವಿಷಯ ಹೊಸದುರ್ಗಕ್ಕೆ ಹೊಸಮುಖ ಬಯಸುತ್ತಿರುವುದು. ಹಾಗಾಗಿ ಜನರ ಇಚ್ಛೆಯ ಮೇರೆಗೆ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ಸಹ ಬಹಳ ಹುಮ್ಮಸ್ಸಿನಿಂದ ಚುನಾವಣೆಗೆ ನಿಲ್ಲಲು ಹುರುಪು ನೀಡಿದ್ದಾರೆ ಎಂದು ತಿಳಿಸಿದರು.
ನಾನು ಸ್ಥಳೀಯ ಅಭ್ಯರ್ಥಿ:
ಬಡತನ ಕುಟುಂಬದಿಂದ ಬೆಳೆದು ಬಂದಿರುವ ನನಗೆ ಬಡವರ ಕಷ್ಟ ಅರಿತಿದ್ದೇನೆ. ಈಗಲೂ ಸಹ ನನ್ನ ಕೆಂಪಂಚಿನ ಮನೆ ಪಟ್ಟಣದ ಕೋಟೆ ಬಡಾವಣೆಯಲ್ಲಿ ಇದೆ. ಭಗವಂತನ ಆಶೀರ್ವಾದದಿಂದ ನನ್ನ ವೃತ್ತಿ ಕೈಹಿಡಿದು ಆರ್ಥಿಕವಾಗಿ ಸಬಲನಾಗಿದ್ದೇನೆ. ರಾಜಕೀಯದಿಂದ ಹಣ ಮಾಡುವ ಉದ್ದೇಶವಿಲ್ಲ. ನಾಡಿನ ಹೆಮ್ಮೆಯ ಮಗ ದಿವಂಗತ ಡಾ.ಪುನೀತ್ ರಾಜ್ ಕುಮಾರ್ ರವರ ನಿಸ್ವಾರ್ಥ ಸಮಾಜ ಸೇವೆಯಿಂದ ಪ್ರೇರೇಪಣೆಯಾಗಿ, ಅವರಂತೆ ನಾನೂ ಸಹ ನನ್ನ ತಾಲ್ಲೂಕಿಗೆ ಏನಾದರೂ ಸೇವೆ ನೀಡಬೇಕು ಎಂದು ನಿರ್ಧರಿಸಿ ಚುನಾವಣೆ ಅಖಾಡಕ್ಕೆ ಇಳಿದಿದ್ದೇನೆ ಎಂದು ಹೇಳಿದರು.
ಕಳೆದ ೨೦ ವರ್ಷಗಳಿಂದ ರಾಜಕೀಯ ತೊಳಲಾಟ ಕಂಡಿದ್ದೇನೆ. ಅಧಿಕಾರ ದಾಹ ಹೇಗಿರುತ್ತೆ ಎಂಬುದನ್ನು ಹತ್ತಿರದಿಂದ ನೋಡಿದ್ದೇನೆ. ಕಾರ್ಯಕರ್ತರ ನಾಡಿಮಿಡಿತ ಅರಿತಿದ್ದೇನೆ. ಈಗಿನ ಕಾಲದಲ್ಲಿ ನಾಯಕನಿಗಾಗಿ ದುಡಿದ ಕಾರ್ಯಕರ್ತರ ಕೈಗಳು ಬರಿದಾಗಿವೆ. ಆದರೆ ನನಗೆ ನನ್ನ ಕಾರ್ಯಕರ್ತರೇ ಜೀವಾಳ. ನನಗಾಗಿ ದುಡಿದವನಿಗೆ ನಾನು ಏನು ಮಾಡದಿದ್ದರೆ ದೇವರು ಕ್ಷಮಿಸಲ್ಲ. ಮೊದಲು ಕಾರ್ಯಕರ್ತರು ಸಬಲರಾಗಬೇಕು. ಕಾರ್ಯಕರ್ತ ಸಬಲನಾದರೇ ತನ್ನ ಕೈಯಿಂದಲೇ ಖರ್ಚು ಮಾಡಿ ನನ್ನ ಜಾಗದಲ್ಲಿ ನಿಂತು ನನ್ನ ಗೆಲ್ಲಿಸುತ್ತಾರೆ ಎಂಬ ಆತ್ಮವಿಶ್ವಾಸ ನನ್ನಲ್ಲಿದೆ. ಹಾಗಾಗಿ ಯಾವತ್ತಿಗೂ ಕಾರ್ಯಕರ್ತನಿಗೆ ದ್ರೋಹ ಬಗೆಯದೇ ಕಾರ್ಯಕರ್ತರ ಉಸಿರಾಗಿರುವೆ ಎಂದರು.
ದುಡಿಯುವ ಕೈಗಳಿಗೆ ಉದ್ಯೋಗ ಕೊಡುವ ದೃಷ್ಟಿಯಿಂದ ಹಾಗೂ ದುಡಿಮೆಗಾಗಿ ವಲಸೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ತಾಲ್ಲೂಕಿನಲ್ಲಿ ಗಾಮೆಂಟ್ಸ್ ಫ್ಯಾಕ್ಟರಿ ತೆರೆಯಲು ತೀರ್ಮಾನಿಸಿದ್ದೇವೆ. ಈಗಾಗಲೇ ಇದರ ಪ್ರಾರಂಭಕ್ಕೆ ರೂಪುರೇಷ ಸಿದ್ಧತೆಯಾಗಿದೆ. ತಾಲ್ಲೂಕಿನ ೧೦ಸಾವಿರ ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಚುನಾವಣೆ ಇರುವುದರಿಂದ ಕೆಲಸ ಸ್ಥಗಿತವಾಗಿದೆ. ಚುನಾವಣೆ ಮುಗಿದ ನಂತರ ನಿರುದ್ಯೋಗಿ ಜನರ ಕನಸು ನನಸಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಮಾಜಿ ಉಪಾಧ್ಯಕ್ಷ ನರಸಪ್ಪ ತಾಲೂಕಿನ ಐದು ಗ್ರಾಮ ಪಂಚಾಯಿತಿ ಮುಖಂಡರು, ಗ್ರಾಮಸ್ಥರು, ಮಹಿಳೆಯರು, ಯುವಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.