i
ಇಂದಿನ ಯುವ ಜನರ ಅಶಾಂತಿಗೆ ಕಾರಣ ಮತ್ತು ಪರಿಹಾರೋಪಾಯ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಇಂದಿನ ಮಕ್ಕಳು ನಾಳಿನ ಯುವ ಜನರು ಇಂದಿನ ಯುವಜನರು ನಾಳಿನ ಪ್ರಜೆಗಳು ಕೇವಲ ಪ್ರಜೆಗಳಷ್ಟೇ ಅಲ್ಲ ನಮ್ಮ ಪ್ರಜಾಪ್ರಭುತ್ವದ ಎಲ್ಲಾ ಸ್ಥರಗಳಲ್ಲಿಯೂ ನಾಡಿನ ಜವಾಬ್ದಾರಿಯನ್ನು ಹೊತ್ತು ನಡೆಸಿ ಕೊಡಬೇಕಾದವರು. ಅವರು ಸುಶಿಕ್ಷಿತರು ,ಸುಸಂಸ್ಕೃತರು, ಪ್ರಜ್ಞಾವಂತರು ಆದರೆ ದೇಶದ ಹಿತವು ಎಲ್ಲಾ ವಿಧಗಳಲ್ಲಿಯೂ ಸುರಕ್ಷಿತವಾಗುತ್ತದೆ. ಯಾವುದೇ ಒಂದು ದೇಶದ ಪ್ರಗತಿಯು ಆದೇಶದ ಸಮಾಜದ ಮೇಲೆ ಅವಲಂಬಿತವಾಗಿರುತ್ತದೆ.ಒಂದು ವೇಳೆ ಸಮಾಜ ಪತನಶೀಲವಾಗಿದ್ದು ಸಮಾಜದ ಯುವಶಕ್ತಿಯು ದುರ್ಗುಣಗಳಿಂದ ತುಂಬಿದ್ದರೆ ಆ ದೇಶದ ಪ್ರಗತಿ ಅಧಃಪತನ ಕೀಡಾಗುತ್ತದೆ. ಇದರ ವಿರುದ್ಧವಾಗಿ ಸಮಾಜದ ಯುವಶಕ್ತಿ ಸದ್ಗುಣ, ಸದಭಿರುಚಿ ಹೊಂದಿದ್ದರೆ ದೇಶವು ಉನ್ನತಿಯ ಶಿಖರವನ್ನು ಏರತೊಡಗುವುದು.ಮೌಲ್ಯಯುತ ಮಾನವಸಂಪನ್ಮೂಲ ಪ್ರತಿಯೊಂದು ದೇಶದ ಆಸ್ತಿ. ಆ ದೇಶವನ್ನು ಯುವಕರು ರೂಪಿಸುತ್ತಾರೆ. ಭಾರತವು ಜಗತ್ತಿನಲ್ಲಿಯೇ ಅತಿ ಹೆಚ್ಚು (ಶೇ. 65) ಯುವಕರನ್ನು ಹೊಂದಿದ ದೇಶವಾಗಿದ್ದು , ಯುವಕರೇ ಭಾರತದ ಭದ್ರ ಬುನಾದಿಯಾಗಿದ್ದಾರೆ. ಹೀಗಿರುವಾಗ ಪ್ರಸ್ತುತ ನಮ್ಮ ಯುವಜನಾಂಗದ ಸಮಸ್ಯೆಗಳು ,ಅವರ ಅಶಾಂತಿಗೆ ಕಾರಣಗಳು ಹಾಗೂ ಸಮಸ್ಯೆಗಳಿಂದ ಹೊರಬರುವ ರೀತಿಯ ಕುರಿತಾಗಿ ಮಾತನಾಡುವುದಾದರೆ ,
ಶೈಕ್ಷಣಿಕ ಮತ್ತು ವೃತ್ತಿಪರ ಸಮಸ್ಯೆ : ಶಿಕ್ಷಣದ ಮುಖ್ಯ ಗುರಿ ಯುವಕರಿಗೆ ಅಗತ್ಯವಾದ ಕೌಶಲ್ಯ ಪಡೆಯಲು ಸಹಾಯ ಮಾಡುವುದು ಮತ್ತು ಅವರು ಆಯ್ಕೆ ಮಾಡಿದ ಹಾಗೂ ಅವರು ಆಸಕ್ತಿಹೊಂದಿರುವ ಕ್ಷೇತ್ರಗಳಲ್ಲಿ ಅಗತ್ಯ ಪರಿಣತಿಯನ್ನು ಅಭಿವೃದ್ಧಿಪಡಿಸುವುದು. ಪ್ರಸ್ತುತ ಯುವಕರು ತಾವು ಯಾವ ವೃತ್ತಿ ಶಿಕ್ಷಣ ಪಡೆಯಬೇಕು ? ಎ೦ದು ಯೋಚಿಸುವುದರಲ್ಲಿಯೂ ಮತ್ತು ಓದಿಗಾಗಿ ವ್ಯಯಿಸುವ ಹಣಕ್ಕಾಗಿಯೂ , ತಾವು ಓದಿದ ಓದಿಗೆ ಆದಷ್ಟು ಬೇಗ ಕೆಲಸ ಸಿಗುವುದೇ ಎಂದು, ತಾವು ಆರಿಸಿದ ಉದ್ಯೋಗದಿಂದ ತಮ್ಮ ಅಹ೯ತೆಗೆ ತಕ್ಕಂತೆ ವೇತನ ಸಿಗುತ್ತದೆಯೇ ಎಂಬ ಹಲವಾರು ಶೈಕ್ಷಣಿಕ ಮತ್ತು ವೃತ್ತಿಪರ ವಿಚಾರಗಳಿಂದಲೂ ಸಮಸ್ಯೆಗೆ ಸಿಲುಕಿ ಹಾಕಿಕೊಳ್ಳುತ್ತಾರೆ.ವಿಶ್ವವಿದ್ಯಾನಿಲಯಗಳು ಅಥವಾ ಸಂಸ್ಥೆಗಳಿಂದ ಪದವಿ ಪಡೆದ ನಂತರ ಹೆಚ್ಚಿನ ಯುವಜನರು ತಮ್ಮ ವಿಶೇಷತೆಯಲ್ಲಿ ಉದ್ಯೋಗವನ್ನು ಹುಡುಕುವ ದೊಡ್ಡ ಸಮಸ್ಯೆಯನ್ನು ಎದುರಿಸುತ್ತಾರೆ.
ಆರೋಗ್ಯ ಮತ್ತು ಜೀವನಶೈಲಿ ಸಮಸ್ಯೆ: ಉತ್ತಮ ಪೋಷಣೆ, ದೈನಂದಿನ ವ್ಯಾಯಾಮ ಮತ್ತು ಸಾಕಷ್ಟು ನಿದ್ರೆ ಆರೋಗ್ಯಕರ ಜೀವನಶೈಲಿಯ ಅಡಿಪಾಯವಾಗಿದೆ.ಆರೋಗ್ಯಕರ ಜೀವನಶೈಲಿಯು ಸದೃಡಶಕ್ತಿಯನ್ನು ಹೆಚ್ಚಿಸಿ, ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.ಫಾಸ್ಟ್ ಫುಡ್ ಮೋಜಿಗೆ ಬಿದ್ದ ಅನೇಕರು ಹೋಟೆಲ್ ಊಟಕ್ಕೆ ಮುಗಿಬಿದ್ದು ಮತ್ತು ಕುಡಿತದ ಚಟಕ್ಕೆ ದಾಸರಾಗಿ ಮನೆ ಊಟದ ಶುದ್ಧ ರುಚಿ ಅಲ್ಲಗಳೆದು ಚಾರ್ಟ್ಸ್ ಗಳಿಗೆ ಮಾರುಹೋಗಿದ್ದಾರೆ. ಫಾಸ್ಟ್ ಫುಡ್ ಜೀರ್ಣಕ್ರಿಯೆ, ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಾದಕ ವ್ಯಸನವು ಯುವಜನರ ಸಮಸ್ಯೆಯಾಗಿರುವುದರಿಂದ ಸಾಮಾಜಿಕ ಪರಿಣಾಮಗಳ ತೀವ್ರತೆಯು ಉಲ್ಬಣಗೊಳ್ಳುತ್ತಲೇ ಇದೆ. ಸರಿಯಾದ ಜೀವನ ಶೈಲಿ ರೂಢಿಸಿಕೊಳ್ಳದೆ ವ್ಯಾಯಾಮ , ಯೋಗದಿಂದ ವಂಚಿತರಾಗಿ , ಅನಾರೋಗ್ಯಕರ ಚರ್ಚೆಯಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನಗುರುತಿಸಿಕೊಳ್ಳದೆ ದಿನದೂಡುವ ಸಮಸ್ಯೆಗೆ ಸಿಲುಕಿ ಕೊಂಡಿದ್ದಾರೆ.ಆರೋಗ್ಯಕರ ಜೀವನವು ಜೀವನದ ಹೆಚ್ಚಿನ ಅಂಶಗಳನ್ನು ಆನಂದಿಸಲು ಸಹಾಯ ಮಾಡುವ ಜೀವನ ವಿಧಾನವಾಗಿದೆ. ಹಾಗಾಗಿ ಜೀವನ ಶೈಲಿ ರೂಪಿಸಿಕೊಂಡವರು ಆರೋಗ್ಯಯುತರಾಗಿ ಸಮಸ್ಯೆಗೆ ಸಿಲುಕದೆ ಕರ್ತವ್ಯ ನಿರತರಾಗಲು ಸಹಾಯಕವಾಗುತ್ತದೆ.
ಸಂಬಂಧಗಳ ಸಂಭಾಳಿಸುವ ಸಮಸ್ಯೆ: ಮನುಷ್ಯನು ಸಂಘ ಜೀವಿ ಅವನು ಹುಟ್ಟಿನಿಂದ ಸಾಯುವವರೆಗೂ ಅವನು ಸುತ್ತಲಿನ ಎಲ್ಲರೊಂದಿಗೆ ಸಂವಹನ ನಡೆಸುತ್ತಾನೆ ಮತ್ತು ಅವನ ವ್ಯಕ್ತಿತ್ವ ಮತ್ತು ಅವನ ಪಥವನ್ನು ರೂಪಿಸುವ ಸಂಬಂಧಗಳ ಜಾಲದಲ್ಲಿ ವಾಸಿಸುತ್ತಿದ್ದಾನೆ. ಸಂಬಂಧಗಳು ಭಾವನಾತ್ಮಕ ಮತ್ತು ಮಾನಸಿಕ ಯೋಗಕ್ಷೇಮದ ಅಡಿಪಾಯಗಳಾಗಿವೆ. ಆದರೆ ಯುವಕರು ತಮ್ಮ ಹೆತ್ತವರು ನೀಡುವ ಉಪದೇಶಗಳನ್ನು ಧಿಕ್ಕರಿಸಿ ತಮ್ಮದೇ ಧಾಟಿಯಲ್ಲಿ ಮಾತಾಡುವ ಪ್ರವೃತ್ತಿ ಮೈಗೂಡಿಸಿಕೊಳ್ಳುತ್ತಿದ್ದಾರೆ. ಅದೇ ಸಿಟ್ಟಿನಲ್ಲಿ ಮತ್ತೊಬ್ಬರ ಮೇಲೆ ತಮ್ಮ ಕೋಪ ತೋರಿಸಿಕೊಳ್ಳುತ್ತಾ , ಗೆಳೆಯರನ್ನು ದೂರಮಾಡಿಕೊಂಡು ಏಕಾಂಗಿಯಾದೆ ಎಂದು ಕೊರಗುವುದರಲ್ಲಿಯೇ ಸಮಯ ಕಳೆಯುತ್ತಾರೆ . ಇತ್ತ ಸಮಯವೂ ಹಾಳು ಹಾಗೂ ಭವಿಷ್ಯದ ಆಲೋಚನೆಗಳ ಚಿಗುರು ಮೊಳಕೆ ಹೊಡೆಯದೆ ಕೊಳೆಯುವ ಪರಿಸ್ಥಿತಿಯನ್ನು ಪ್ರಸ್ತುತ ಯುವಕರೇ ಎದುರಿಸುತ್ತಿದ್ದಾರೆ.
ವ್ಯಕ್ತಿತ್ವ ಬೆಳವಣಿಗೆಯ ಸಮಸ್ಯೆ:ಆಂತರಿಕ ಮತ್ತು ಬಾಹ್ಯ ಸಾಂದರ್ಭಿಕ ಬೇಡಿಕೆಗಳಿಂದಾಗಿ ವ್ಯಕ್ತಿತ್ವದ ಲಕ್ಷಣಗಳು ಬದಲಾಗಬಹುದು. ಆದ್ದರಿಂದ, ವ್ಯಕ್ತಿತ್ವವು ಸನ್ನಿವೇಶಗಳಿಗೆ ಹೊಂದಿಕೊಳ್ಳುತ್ತದೆ. ತಮ್ಮನ್ನು ತಾವು ಅರಿಯದೆ ಇನ್ನೊಬ್ಬರು ನಿರೀಕ್ಷಿಸಿದಂತೆ ನಡೆದುಕೊಳ್ಳುತ್ತಾ ಹೋದರೆ ಸ್ವಂತಿಕೆ ಇರಲಾರದೆಯೇ ಕೀ ಗೊಂಬೆ ಆಗುತ್ತೇವೆ. ತಾನು ಹೇಗೆ ನಡೆದುಕೊಳ್ಳಬೇಕು? ಹೀಗೆ ನಡೆದುಕೊಂಡರೆ ಎದುರಿಗೆ ಇರುವವರಿಗೆ ಏನು ಅನಿಸುತ್ತೆ ? ಅವರು ತಪ್ಪು ತಿಳಿದುಕೊಂಡರೆ ? ನನ್ನನ್ನು ನಾನು ಹೇಗೆ ರೂಪಿಸಿಕೊಳ್ಳಬೇಕು ? ಯಾರ ಆದರ್ಶನಗಳನ್ನು ಪಾಲಿಸಲಿ? ನನ್ನ ಒಳ್ಳೆಯ ಕಾರ್ಯ ಬೇರೆಯವರು ನೋಡದೆ ಇದ್ದರೆ ನಾನು ಮಾಡಿದ ಕೆಲಸ ವ್ಯರ್ಥವಲ್ಲವೆ ? ಎಂಬಂತಹ ಗೊಂದಲಗಳು ಸಹ ಅನೇಕರಲ್ಲಿ ಇರುವುದನ್ನು ನಾವು ಕಾಣಬಹುದು.ಆಧುನಿಕ ಯುವಕರು ನೈತಿಕತೆಯ ಕೊರತೆಯಿಂದ ಭ್ರಷ್ಟರಾಗಿದ್ದಾರೆ. ನೈತಿಕ ಭಾವನೆಗಳು ವ್ಯಕ್ತಿಯ ಅಳಿವು ಮತ್ತು ಉಳಿವಿಗೆ ಕಾರಣವಾಗಿದೆ.ಜನರ ನೈತಿಕ ಪರಿಪೂರ್ಣತೆ ಮಾತ್ರ ಸಾಮಾಜಿಕ ಜೀವನದ ರಚನೆಯನ್ನು ಸುಧಾರಿಸುತ್ತದೆ” .
ಲಿಂಗ ಮತ್ತು ಲೈಂಗಿಕತೆ ಸಮಸ್ಯೆ:ಲಿಂಗ ಮತ್ತು ಲೈಂಗಿಕತೆಯು ಯುವಜನರು ಅಥವಾ ಇತರರು ಮಾತನಾಡಲು ಹಿಂಜರಿಯುವಂತಹ ವಿಷಯವಾಗಿದೆ. ವಿಶೇಷವಾಗಿ ಯೌವನದ ವಯಸ್ಸಿನಲ್ಲಿ ತಿಳಿಸಬೇಕಾದ ಬಹಳ ಮುಖ್ಯವಾದ ವಿಷಯ, ಇದರಿಂದ ಯುವಕರು ಲಿಂಗ ಮತ್ತು ಲೈಂಗಿಕತೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸಿಲುಕುವುದಿಲ್ಲ. ಪ್ರಸ್ತುತ ಸಮಾಜದಲ್ಲಿ ಲಿಂಗದ ಪಾತ್ರಗಳು ಬದಲಾಗಿವೆ. ಗಂಡು ಮತ್ತು ಹೆಣ್ಣಿನ ಕಾರ್ಯಗಳು ಅದಲು ಬದಲಾಗುತ್ತಲೇ ಇರುವುದನ್ನು ನಾವಿಂದು ನೋಡಬಹುದು. ಹೆಣ್ಣು ತಾನು ಹೆಣ್ಣು ಎಂದು ಭಾವಿಸಿಕೊಳ್ಳುವಾಗ ತೋರುವ ಮುಜುಗರ. ಉದಾಹರಣೆಗೆ ರಾತ್ರಿಯ ವೇಳೆ ಓಡಾಡುವುದು ತಪ್ಪು ಎಂದು ಭಾವಿಸುವ ಯುವತಿಯ ಸಮಸ್ಯೆ. ಇನ್ನೂ ಗಂಡು ಹೆಣ್ಣಿನ ಕೆಲಸ ನಾನು ಮಾಡ್ತಾ ಇದ್ದೇನೆ ಎಂದು ಭಾವಿಸಿಕೊಳ್ಳುವ ಸಂದರ್ಭದಲ್ಲಿ ತೋರುವ ಭಾವನೆಗಳು [ ಉದಾಹರಣೆಗೆ, ತನ್ನದೆ ಮನೆಯಲ್ಲಿ ಮನೆ ಸ್ವಚ್ಛ ಮಾಡುತ್ತಿರುವುದನ್ನು ಯಾರಾದ್ರೂ ನೋಡಿದ್ರೆ ಎನ್ನುವ ಭಾವನೆಗಳು, ಮಾನಸಿಕ ಹಿಂಸೆಯನ್ನು ನೀಡುವುದಲ್ಲದೆ ಆತ್ಮವಿಶ್ವಾಸ ಕುಗ್ಗಿಸುತ್ತವೆ. ಹಾಗೂ ಸಾಮಾನ್ಯವಾಗಿ ಸಹಜವಾಗಿ ಉದ್ಭವವಾಗುವ ಲೈಂಗಿಕ ವಿಚಾರಗಳನ್ನು ಮುಕ್ತವಾಗಿ ಮಾತನಾಡಲು ಸಾಧ್ಯವಾಗದೆ ಇರುವ ಪರಿಸ್ಥಿತಿಗಳು ಅನೇಕರ ಸಮಸ್ಯೆಗಳಾಗಿವೆ.
ಸುರಕ್ಷತೆಯ ಸಮಸ್ಯೆ : ಪ್ರತಿಯೊಬ್ಬರ ಜೀವನದಲ್ಲೂ ಸುರಕ್ಷತೆ ಪ್ರಮುಖವಾದ ಅಂಶವಾಗಿರುತ್ತದೆ. ಅಪಾಯಕಾರಿ ನಡವಳಿಕೆಗಳಲ್ಲಿ ಯುವ ಜನರು ಹೆಚ್ಚು ತೊಡಗಿಸಿಕೊಳ್ಳುತ್ತಾರೆ. ದೇಶದ ಯುವ ಜನರಲ್ಲಿ ಅಪಾಯಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಮರಣ ಮತ್ತು ಆಸ್ಪತ್ರೆಗಳ ದಾಖಲಾತಿ ಪ್ರಮಾಣ ಹೆಚ್ಚಾಗುತ್ತಿದೆ.ದೇಶದಲ್ಲಿ ಹೆಚ್ಚಿದ ಸಾವುಗಳು, ಆಸ್ಪತ್ರೆಗಳು, ಅಂಗವೈಕಲ್ಯಗಳು ಸಾಮಾಜಿಕ–ಆರ್ಥಿಕ ನಷ್ಟಗಳಿಗೆ ಕಾರಣವಾಗುವ ಗಾಯಗಳ ಸಂಖ್ಯೆಯು ಯುವಕರಲ್ಲಿ ಹೆಚ್ಚುತ್ತಿದೆ. ಸುರಕ್ಷಾ ಭಾವನೆಯೆ ಯಶಸ್ಸಿನ ಮೊದಲ ಹೆಜ್ಜೆ. ಹಾಗಾಗಿ ಸುರಕ್ಷಿತರಾಗಿ , ಸಮಸ್ಯಾ ಮುಕ್ತರಾಗಿ.
ಆಧುನಿಕ ಯುವಕರ ಸಮಸ್ಯೆಗಳು ಅದೇ ವಯಸ್ಸಿನಲ್ಲಿ ಅವರ ಪೋಷಕರು ಹೊಂದಿದ್ದ ಸಮಸ್ಯೆಗಳಿಗಿಂತ ನೈತಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಹಳ ಭಿನ್ನವಾಗಿದ್ದು ಸೋಮಾರಿತನ ಮತ್ತು ಉದ್ದೇಶದ ಕೊರತೆಯಿಂದ ಅಶಾಂತಿಗೀಡಾಗಿದ್ದಾರೆ. ಸಾಮಾನ್ಯವಾಗಿ ಅನೇಕ ಯುವಜನರ ಮುಖ್ಯ ಗುರಿ ಮನರಂಜನೆಯಾಗಿದೆ.ಈ ಮನರಂಜನೆಗಳಲ್ಲಿ ಹೆಚ್ಚಿನವು ಆಲೋಚನೆಯಿಲ್ಲದ ಮತ್ತು ಯಾವುದೇ ಅರ್ಥವನ್ನು ಹೊಂದಿರದ ಘಟನೆಗಳಾಗಿರುತ್ತವೆ.ಪ್ರಪಂಚದಾದ್ಯಂತದ ಯುವಕರು ತಮ್ಮ ಆದ್ಯತೆಗಳನ್ನು ಬದಲಾಯಿಸುತ್ತಿದ್ದಾರೆ.ಸಮಾಜದ ಬಗ್ಗೆ ನಕಾರಾತ್ಮಕ ಮನೋಭಾವವನ್ನು ಹೊಂದಿದ್ದಾರೆ. ಆದ್ದರಿಂದ, ಸಮಾಜದಲ್ಲಿನ ಘರ್ಷಣೆಗಳನ್ನು ತಪ್ಪಿಸಲು ಹದಿಹರೆಯದವರಲ್ಲಿ ಸಕಾರಾತ್ಮಕ ಪಾಲನೆಯ ಅಡಿಪಾಯವನ್ನು ತುಂಬುವ ಮುಖ್ಯ ಕಾರ್ಯವನ್ನು ವಯಸ್ಕರು ಎದುರಿಸುತ್ತಿದ್ದಾರೆ.
ಮದ್ಯಪಾನ ಮಾಡುವುದು , ನಡವಳಿಕೆಯಲ್ಲಿ ಅನೈತಿಕತೆ ತೋರುವುದು , ವ್ಯಸನಕ್ಕೆ ಒಳಗಾಗುವುದು, ತಂಬಾಕು ಸೇವನೆ, ಆತ್ಮಹತ್ಯೆಯ ಯೋಚನೆಗಳು , ಅಪರಾಧಗಳಲ್ಲಿ ಭಾಗಿಯಾಗುವುದು , ತಲೆಮಾರುಗಳ ತಪ್ಪು ತಿಳುವಳಿಕೆ, ಜೀವನ ಮೌಲ್ಯಗಳಲ್ಲಿ ಬದಲಾವಣೆಗೊಳಗಾವುದು ಇಂತಹ ಹತ್ತಾರು ಸಮಸ್ಯೆಗಳಿಂದ ಯುವಜನಾಂಗ ಬಳಲುತ್ತಿದೆ.ಇಂದು ಭಾರತೀಯ ಸಮಾಜದಲ್ಲಿ ಸ್ವಾರ್ಥ ಭ್ರಷ್ಟಾಚಾರಗಳು ತಲೆದೂರಿ ನಿಂತಿವೆ.ನಾವು ಒಬ್ಬರಿಗೊಬ್ಬರು ಕಚ್ಚಾಡುತ್ತಲಿದ್ದೇವೆ. ನಮ್ಮಲ್ಲಿರುವ ಸ್ವಾರ್ಥತೆಯನ್ನು ಹೊಡೆದೋಡಿಸಿ ಪರರ ಸುಖ ತನ್ನ ಸುಖ ತನ್ನಂತೆ ಪರರು ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು.ಯುವಜನರು ಅಧಿಕಾರ ಹಾಗೂ ಪಟ್ಟಭದ್ರ ಹಿತಾಸಕ್ತಿಯ ಮೋಹದಲ್ಲಿ ಸಿಲುಕದೆ ಜನತಾ ಸೇವೆಯೇ ಜನಾರ್ದನ ಸೇವೆ ಎಂದು ತಿಳಿದುಕೊಳ್ಳಬೇಕು.ಮಾನವ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು.ಸಮಸ್ಯೆಗಳನ್ನು ನೋಡುವ ದೃಷ್ಟಿಕೋನ ಬದಲಾದರೆ ನಮ್ಮ ಸಮಸ್ಯೆ ಅರ್ಧ ಮುಗಿದಂತೆಯೇ ಅಲ್ಲವೆ ?
ಯುವಕರ ಮತ್ತೊಂದು ತುರ್ತು ಸಮಸ್ಯೆಯೆಂದರೆ ವೀಕ್ಷಣೆಗಳ ಸಂಕುಚಿತತೆ. ಬುದ್ಧಿವಂತನು ಇತರರ ತಪ್ಪುಗಳಿಂದ ಕಲಿಯುತ್ತಾನೆ, ಮತ್ತು ಮೂರ್ಖನು ತನ್ನ ಸ್ವಂತದಿಂದ ಕಲಿಯುತ್ತಾನೆ.” ಮತ್ತು ಬಹಳಷ್ಟು ಜನರು ಮಾನಸಿಕ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ ಈ ಅಂಶವೂ ಸಹ ಯುವ ಜನರ ಅಶಾಂತಿಗೆ ಕಾರಣವಾಗಿದೆ.. ಮತ್ತು ಐಶ್ವರ್ಯ ಹಾಗೂ ಸುಖಭೋಗಗಳೆಂಬ ಪಂಜರಗಳಲ್ಲಿ ಸಿಲುಕಿರುವುದರಿಂದ ಮನುಷ್ಯನು ಅಶಾಂತಿಯಿಂದ ಬಳಲುತ್ತಿದ್ದಾನೆ.
ಸಾಮಾಜಿಕ ಜಾಲಗಳು ಸುಳ್ಳು ಪ್ರದರ್ಶನವಾಗಿದ್ದು, ಅಲ್ಲಿ ಯುವಕರು ತಮ್ಮ ದಾರಿ ಹುಡುಕುತ್ತಾರೆ. ಇದೊಂದು ಗುಭೀರ ಸಮಸ್ಯೆಯಾಗಿದ್ದು ಸಾಮಾಜಿಕ ಜಾಲತಾಣಗಳಿಗೆ ಅಂಟಿಕೊಂಡಿರುವುದು ವಿಪಯಾ೯ಸವೆ ಆಗಿದೆ.ಯುವಕರಲ್ಲಿ ಆಧ್ಯಾತ್ಮಿಕತೆಯ ಒಲವು ಕಡಿಮೆಯಾಗಿದ್ದು ಬಾಹ್ಯ ಸೌಂದಯ೯ತೆಗೆ ಮರುಳಾಗುವ ಪರಿ ನೋಡಿದರೆ ಆಂತರಿಕ ಸೌಂದರ್ಯದ ಕ್ಷೀಣತೆಯ ಬಗ್ಗೆ ಬೇಸರ ವ್ಯಕ್ತ ಪಡಿಸಬಹುದಾಗಿದೆ.ಇಂದು ಪಾಶ್ಚಾತ್ಯ ರಾಷ್ಟ್ರಗಳ ಪ್ರಭಾವಕ್ಕೆ ಒಳಗಾಗಿ ಎಲ್ಲಾ ವಿಧಗಳಲ್ಲಿಯೂ ಅವುಗಳನ್ನು ಅನುಕರಿಸಲು ಪ್ರಯತ್ನಿಸುತ್ತಿದ್ದೇವೆ. ಅದರಂತೆಯೇ ತಿನ್ನಲು, ಉಡಲು ,ಕುಣಿಯಲು, ಕುಡಿಯಲು, ಹಾಡಲು, ನಡೆಯಲು ಬಯಸುತ್ತಿದ್ದೇವೆ. ಪಾಶ್ಚತ್ಯರನ್ನು ಎಲ್ಲಾ ವಿಧದಲ್ಲೂ ಅನುಕರಿಸುವ ಪ್ರವೃತ್ತಿ ಯುವಜನರಲ್ಲಿ ವಿಶೇಷವಾಗಿ ಬೇರೂರಿ ಬಿಟ್ಟಿದೆ. ಅನುಕರಿಸುವ ಪ್ರವೃತ್ತಿ ಮಾನವನಿಗೆ ಸಹಜವಾಗಿಯೇ ಬಂದದ್ದು. ನಾವು ಯಾರನ್ನು ಮೆಚ್ಚಿಕೊಳ್ಳುತ್ತೇವೆ ಅವರನ್ನು ಅನುಕರಿಸುತ್ತೇವೆ .ಆದರೆ ಆ ಅನುಕರಣೆಯು ಅಂಧಾನುಕರಣೆಯಾದರೆ ಹಿತಕರವಲ್ಲ. ನಮ್ಮ ವ್ಯಕ್ತಿತ್ವ ವೈಶಿಷ್ಟ್ಯಗಳನ್ನು ಬಿಡದೆ ಇತರರಲ್ಲಿ ಉತ್ತಮವಾದದನ್ನು ಬುದ್ಧಿವಂತಿಕೆಯಿಂದ ಅಳವಡಿಸಿಕೊಳ್ಳುವ ಗುಣವನ್ನು ಯುವಜನರು ಬೆಳೆಸಿಕೊಳ್ಳಬೇಕು.
ಈ ಜಗತ್ತಿನಲ್ಲಿ ಸಮಸ್ಯೆಗಳೇ ಇಲ್ಲದ ಜೀವಿಯೇ ಇಲ್ಲ . ಸಮಸ್ಯೆಗಳನ್ನು ಗುರುತಿಸಿ, ಅವನು ವಿಶ್ಲೇಷಿಸುವುದು ನಮ್ಮ ಪ್ರಥಮ ಕರ್ತವ್ಯವಾಗಬೇಕು.ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿನ ಸಮಸ್ಯೆಗಳೇ ಅತ್ಯಂತ ಪ್ರಬಲವಾದವು.ಶಿಕ್ಷಣವು ಒಬ್ಬ ವ್ಯಕ್ತಿಗೆ ತನ್ನ ಜೀವನೋಪಾಯಕ್ಕಾಗಿ ಅವಶ್ಯಕವಾದ ನೈಪುಣ್ಯವನ್ನು ,ಶಕ್ತಿಯನ್ನು ಕೊಟ್ಟು ತಯಾರು ಮಾಡುತ್ತದೆ .ಹಾಗೂ ಸಮಾಜದಲ್ಲಿ ಗೌರವದಿಂದ ಬಾಳಲು ಅವಕಾಶ ಮಾಡಿಕೊಡುತ್ತದೆ.
ನಮ್ಮ ಯುವಜನರು ಇಂತಹ ಸಮಸ್ಯೆಗಳನ್ನು ಎದುರಿಸಲು, ಪರಿಹರಿಸಲು ಅಥವಾ ಅವುಗಳ ತೀವ್ರತೆಯನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು. ಉದ್ಯೋಗ ಸಿಗಲಿಲ್ಲವೆಂದು ಕಳುವು ಮಾಡುವುದು, ಸುಳ್ಳು ಹೇಳುವುದು ,ಅಪಹರಿಸುವ, ಕೊಲೆಪಾತಕ ಕೆಲಸಗಳನ್ನು ಬಿಟ್ಟು ಮನಸ್ಸನ್ನು ಶುದ್ಧವಾಗಿರಿಸಿಕೊಂಡು ಮೈ ಬಗ್ಗಿಸಿ ಕಷ್ಟಪಟ್ಟು ಸ್ವಉದ್ಯೋಗಗಳನ್ನು ಮಾಡಲು ಕಲಿಯಬೇಕು. ಈ ದೇಶದಲ್ಲಿ ಕೆಲಸಕ್ಕೇನೂ ಅಭಾವವಿಲ್ಲ.ನಿಜವಾಗಿ ಧನಾರ್ಜನೆಗಾಗಿ ಅನಂತ ಅವಕಾಶಗಳಿರುತ್ತವೆ. ಉದಾಹರಣೆಗೆ ಬಡಗಿಗಳು , ಆಭರಣ ತಯಾರಕರು , ಗಾರೆ ಕೆಲಸದವರು ಮೊದಲಾದ ಕುಶಲಶಿಲ್ಪಿಗಳಿಗಾಗಿ ತುಂಬಾ ಬೇಡಿಕೆಯಿರುತ್ತದೆ.ಹಾಗೆಯೇ ಕೃಷಿ ಕ್ಷೇತ್ರ , ಹೈನುಗಾರಿಕೆ ,ಕೋಳಿ ಸಾಕಾಣಿಕೆ ಮತ್ತು ವಿವಿಧ ಲಘು ಕೈಗಾರಿಕೆಗಳು ಇತ್ಯಾದಿ ಕ್ಷೇತ್ರಗಳಲ್ಲೂ ಸಾಕಷ್ಟು ಅವಕಾಶಗಳಿರುತ್ತವೆ.ಇಂತಹ ಕಾಯಕಗಳನ್ನು ಮಾಡುವುದು ತಮ್ಮ ಅಂತಸ್ತಿಗೆ ,ಪ್ರತಿಷ್ಠೆಗೆ ಕುಂದೆಂದು ಯಾರು ಭಾವಿಸಬಾರದು.ರಸ್ತೆಗಳಲ್ಲಿ ಅಲೆದಾಡಿ ಅಥವಾ ಸಿನಿಮಾ ಥಿಯೇಟರ್ ಗಳಲ್ಲಿ ಕಾಲ ಹರಣ ಮಾಡುವುದಕ್ಕಿಂತ ಈ ಕಸುಬುಗಳಲ್ಲಿ ಯಾವುದನ್ನಾದರೂ ಕಡೆಗೆ ಹವ್ಯಾಸಕ್ಕಾಗಿ ಆದರೂ ಕಲಿಯುವುದು ಒಳಿತು.ದುರ್ಗುಣಗಳನ್ನು ,ಮೂಢನಂಬಿಕೆಗಳನ್ನು ಹೋಗಲಾಡಿಸಿಕೊಂಡು ನಮ್ಮಲ್ಲಿಯ ಪ್ರತಿಯೊಬ್ಬರು ಪ್ರಗತಿಶೀಲ, ಅಭಿವೃದ್ಧಿಶೀಲ ಹಾಗೂ ಉನ್ನತ ಶೀಲ ಸಮಾಜದ ಸ್ಥಾಪನೆಗೋಸ್ಕರ ಪ್ರಾಣವನ್ನು ಪಣವಾಗಿಡಬೇಕು. ಮಾತೃಭೂಮಿಯ ಋಣವನ್ನು ಈ ಮೂಲಕ ನಾವು ಒಂದಿನಿತಾದರೂ ತೀರಿಸಬೇಕು. ಸೂಕ್ಷ್ಮ, ಪ್ರಾವೀಣ್ಯ ಮತ್ತು ಪ್ರಬುದ್ಧತೆಯಿಂದ ಯುವಕರು ತಮ್ಮ ಸಮಸ್ಯೆಗಳಿಗೆ ತಾವೇ ಪರಿಹಾರ ಕಂಡುಕೊಳ್ಳಬೇಕು.ಆಧುನಿಕ ಯುಗದಲ್ಲಿ ತಂತ್ರಜ್ಞಾನವೇ ಎಲ್ಲ ಆಗಿದ್ದು, ಯುವ ಜನಾಂಗವಂತೂ ಟೆಕ್ನಾಲಜಿಯಿಲ್ಲದೇ ಜೀವಿಸಲು ಆಗಲ್ಲ ಎಂಬಂತಾಗಿದ್ದಾರೆ. ಭಾವನೆಗಳನ್ನು ವಾಟ್ಸಪ್ ಸ್ಟೇಟಸ್ ಗಳಲ್ಲಿ ಹಾಕಿಕೊಂಡರೆ ಏನು ಪ್ರಯೋಜನವಿಲ್ಲ !ನಿಮ್ಮ ಭಾವನೆಗಳೊಂದಿಗೆ ನೀವೇ ಮಾತನಾಡಬೇಕು,ನಮಗೆ ನಾವೇ ಮಿತ್ರರಾಗಬೇಕು,ಪ್ರತಿದಿನ ನಾವು ನಮ್ಮೊಂದಿಗೆ ಒಂದೆರಡು ನಿಮಿಷಗಳ ಕಾಲ ಮಾತನಾಡಬೇಕು,ನಮ್ಮಲ್ಲಿ ಬದಲಾವಣೆ ಆಗದ ಹೊರತು ಬೇರೆಯವರಿಂದ ಬದಲಾವಣೆ ನಿರೀಕ್ಷಿಸಿಕೊಡದು, ಹಾಗೂ ಶಿಕ್ಷಣ ಅನ್ನುವುದು ಕೇವಲ ಹೆಸರಿಗೆ ಮಾತ್ರ ಸೀಮಿತವಾಗದೆ, ವಿದ್ಯಾವಂತರು ಮಾನವೀಯತೆಯನ್ನೂ ಹೊಂದಿರಬೇಕು.ಯುವಕರಿಗೆ ಮಾರ್ಗರ್ದಶನ ನೀಡಲು ಯಾವಾಗಲೂ ಹಿರಿಯರು ಸಿದ್ಧರಾಗಿರಬೇಕು. ಭಾರತ ಇಂದು ಮುಂದುವರಿಯುತ್ತಿರುವ ರಾಷ್ಟ್ರವಾಗಿದೆ. ಆದರೆ ಹಿರಿಯರ ಮಾರ್ಗದರ್ಶನ ಮತ್ತು ಯುವಕರ ಅಪರಿಮಿತ ಪ್ರಯತ್ನದಿಂದ ಭಾರತ ಬಲಶಾಲಿ ರಾಷ್ಟ್ರವಾಗಬಹುದು. ಯುವಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡಬೇಕು ಮತ್ತು ಜಗತ್ತಿಗೆ ಭಾರತದ ಶಕ್ತಿ, ಸಾಮರ್ಥ್ಯವನ್ನು ತೋರಿಸಬೇಕು. ಇದರ ಜತೆಗೆ ಈಗಾಗಲೇ ಎದುರಿಸುತ್ತಿರುವ ನಿರುದ್ಯೋಗ, ಬಡತನ, ನೈಸರ್ಗಿಕ ವಿಕೋಪಗಳಂತಹ ಅನೇಕ ತೊಂದರೆಗಳಿಗೆ ಪರಿಹಾರ ಹುಡುಕುವುದು ಯುವಕರ ಕರ್ತವ್ಯವಾಗಿದೆ.ಭಾರತದ ಪ್ರಗತಿಗಾಗಿ ನಾವು ಶ್ರಮಿಸಿ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ಕಲ್ಪಿಸಿ ಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನಾವು ಮಾಡುವ ಕೆಲಸಗಳು ನಾಳಿನ ಪ್ರಜೆಗಳಿಗೆ ಉತ್ತಮ ಉದಾಹರಣೆಯಾಗಬೇಕೆಂಬುದು ನನ್ನು ಕನಸು ಮತ್ತು ಆಶಯವಾಗಿದೆ.
ಲೇಖನ-ಶಿಕ್ಷಕಿ ಹೇಮಲತ, ಹಿರಿಯೂರು