i
ಸಂವಿಧಾನ ಕೆಳಗಿಳಿಸುವ ಹುನ್ನಾರ ನಡೆಯುತ್ತಿದೆ, ಭಾರತ ಬ್ರಾಹ್ಮಣ್ಯದ ದೇಶವಾಗಿದೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಇಡೀ ಜಗತ್ತೆ ಒಪ್ಪಿಕೊಂಡಿರುವ ನಮ್ಮ ದೇಶದ ಸಂವಿಧಾನವನ್ನು ಕೆಳಗಿಳಿಸುವ ಹುನ್ನಾರ ನಡೆಯುತ್ತಿರುವುದು ಆರೋಗ್ಯಕರವಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನಶಿಲ್ಪಿ ಅಲ್ಲವೇ ಅಲ್ಲ ಎಂದು ಮನುವಾದಿಗಳು ಪ್ರತಿಪಾದಿಸುತ್ತಿದ್ದಾರೆಂದು ಕವಿ ಮತು ವಿಮರ್ಶಕ ಪ್ರೊ.ಚಂದ್ರಶೇಖರ ತಾಳ್ಯ ಬೇಸರ ವ್ಯಕ್ತಪಡಿಸಿದರು.
ಬಂಡಾಯ ಸಾಹಿತ್ಯ ಸಂಘಟನೆಗೆ 44 ವರ್ಷಗಳಾಗಿರುವುದರಿಂದ ನಗರದ ಪತ್ರಕರ್ತರ ಭವನದಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯಿಂದ ಶನಿವಾರ ಏರ್ಪಡಿಸಲಾಗಿದ್ದ ವಿಚಾರ ಗೋಷ್ಠಿಯಲ್ಲಿ ಸಮಕಾಲೀನ ಸಾಹಿತ್ಯ ಮತ್ತು ಸಾಂಸ್ಕೃತಿಕ ತಲ್ಲಣಗಳು ಎಂಬ ವಿಷಯ ಕುರಿತು ಮಾತನಾಡಿದರು.
ಪಠ್ಯಪುಸ್ತಕ ತಿರುಚುವಿಕೆ ಸಾಹಿತ್ಯದ ಸಂವೇದನೆಯಿದ್ದಂತೆ. ಪಠ್ಯವನ್ನು ಹೇಗೆ ಪರಿಷ್ಕರಿಸಬೇಕು. ಯಾವ ಮಾನದಂಡ ಅನುಸರಿಸಬೇಕು ಎನ್ನುವುದು ಬಹಳ ಮುಖ್ಯ. ಡಾ.ಬರಗೂರು ರಾಮಚಂದ್ರಪ್ಪ ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷರಾಗಿದ್ದಾಗಲೂ ಪಠ್ಯವನ್ನು ಬದಲಾವಣೆ ಮಾಡಲಾಗಿತ್ತು. ಆದರೆ ರೋಹಿತ್ ಚಕ್ರವರ್ತಿ ಸಮಿತಿಯ ಅಧ್ಯಕ್ಷರಾಗಿದ್ದಾಗ ಪಠ್ಯ ಬದಲಾವಣೆಯಾಗಿದ್ದೆ ಬೇರೆ ರೀತಿ. ಆಗ ಸಾಹಿತಿಗಳು ಬರಹಗಾರರು ದೊಡ್ಡ ಪ್ರತಿಭಟನೆ ಮಾಡಬೇಕಾಯಿತು. ಬಸವಣ್ಣ, ಪುರಂದರದಾಸರು, ಕನಕದಾಸರು, ಶರಣ, ಸಂತರನ್ನು ಪಠ್ಯದಿಂದ ಕೈಬಿಟ್ಟು ಸಾರ್ವಕರ್ ದೇಶಭಕ್ತನೆಂದು ಬಿಂಬಿಸಿತು. ಪಠ್ಯಪುಸ್ತಕ ತಿರುಚುವಿಕೆಯಿಂದ ಮಕ್ಕಳಿಗೆ ಯಾವ ರೀತಿಯ ಸಂದೇಶ ನೀಡಲಾಗುತ್ತಿದೆ ಎನ್ನುವ ತಲ್ಲಣದಲ್ಲಿದ್ದೇವೆಂದು ಅಸಮಾಧಾನ ಹೊರ ಹಾಕಿದರು.
ಶಾಂತಿ, ಕೋಮುಸೌರ್ಹಾಧತೆಗೆ ಹೆಸರುವಾಸಿಯಾದ ನಾಡು ನಮ್ಮದು. ನಾರಾಯಣಗುರುರವರನ್ನು ಪಠ್ಯದಿಂದ ಕೈಬಿಡಲಾಗಿದೆ. ಆಹಾರ ರಾಜಕಾರಣ ಮಾಡುತ್ತಿರುವುದು ಸಮಾಜದ ಆರೋಗ್ಯಕ್ಕೆ ಹಾನಿಕಾರಕ. ಸಂವಿಧಾನ ಸಮಾನತೆ, ಜಾತ್ಯತೀತತೆಯನ್ನು ಸಾರಿದೆ ಎನ್ನುವುದು ಸುಳ್ಳೆ. ನೈತಿಕ ಪೊಲೀಸ್ಗಿರಿ ನಡೆಯುತ್ತಿದೆ. ಸಣ್ಣ ಗುಂಪು ಎಲ್ಲವನ್ನು ನಿಯಂತ್ರಿಸುತ್ತಿದೆ. ತಲ್ಲಣ ನಿವಾರಿಸಬೇಕು. ಮಾಧ್ಯಮಗಳು ಸಹ ನೈತಿಕತೆಯನ್ನು ಕಳೆದುಕೊಂಡಿದೆ. ಯಾವ ಧರ್ಮವು ಕೊಲ್ಲುವಂತೆ ಹೇಳಿಲ್ಲ. ದಯೆ ಇಲ್ಲದ ಧರ್ಮ ಯಾವುದಯ್ಯ, ದಯೆಯೇ ಧರ್ಮದ ಮೂಲ ಎನ್ನುವುದನ್ನು ಹನ್ನೆರಡನೆ ಶತಮಾನದಲ್ಲಿಯೇ ಬಸವಣ್ಣನವರು ಸಾರಿದ್ದಾರೆ. ಮಹಿಳೆಯರನ್ನು ನೋಡುವ ರೀತಿಯೇ ಬದಲಾವಣೆಯಾಗಿದೆ. ನಿರಂತರವಾಗಿ ದಲಿತ ಮಹಿಳೆ ಮೇಲೆ ಅತ್ಯಾಚಾರವಾಗುತ್ತಿದೆ. ಬ್ರಿಟೀಷರ ವಿರುದ್ದ ಹೋರಾಡಿದ ಮೈಸೂರು ಹುಲಿ ಟಿಪ್ಪುಸುಲ್ತಾನ್ ದೇಶದ್ರೋಹಿ ಅಲ್ಲ ಎನ್ನುವುದನ್ನು ಜನಪದರು ಲಾವಣಿ ಕಟ್ಟಿ ಹಾಡಿದ್ದಾರೆ. ಕೋಮುವಾದಿಗಳು ಟಿಪ್ಪು ಬಗ್ಗೆ ಅಪಪ್ರಚಾರದಲ್ಲಿ ತೊಡಗಿರುವುದು ದೊಡ್ಡ ಅನಾಹುತ. ಟಿಪ್ಪುವಿನಲ್ಲಿ ಉದಾರತೆ, ಉದಾತ್ತತೆಯಿತ್ತು. ರಾಜ ಮಹಾರಾಜರುಗಳು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳಲು ಯುದ್ದ ಮಾಡುತ್ತಿದ್ದರು. ಅದೇ ರೀತಿ ಟಿಪ್ಪು ಕೂಡ ಯುದ್ದ ಮಾಡಿದ್ದಾನೆ. ಪ್ರಮೋದ್ ಮುತಾಲಿಕ್ ಸಮುದಾಯದ ನಡುವೆ ಬೆಂಕಿ ಹಚ್ಚುವ ಮಾತುಗಳನ್ನಾಡುತ್ತಿದ್ದಾರೆ. ಸಾಂಸ್ಕೃತಿಕ ಸ್ಥಿತಿಗತಿ ಹದಗೆಟ್ಟಿದೆ. ನೂರಾರು ಲೇಖಕರುಗಳನ್ನು ಹುಟ್ಟು ಹಾಕಿರುವ ಬಂಡಾಯ ಸಾಹಿತ್ಯ ಸಂಘಟನೆ ಸಾಹಿತಿಗಳಿಗೆ ಸಹಜವಾದ ಧೈರ್ಯ ಕೊಟ್ಟಿದೆ ಎಂದು ಪ್ರಶಂಶಿಸಿದರು.
ಕವಿ ಡಾ.ಲೋಕೇಶ್ ಅಗಸನಕಟ್ಟೆ ಮಾತನಾಡಿ ದ್ವಂದ್ವಗಳ ಆಚೆಗೆ ಹೊರಡುವುದು ಹೇಗೆ ಎಂಬ ಸವಾಲನ್ನು ಲೇಖಕರು ಎದುರಿಸುತ್ತಿದ್ದಾರೆ. ರಸಋಷಿ ಕುವೆಂಪುರವನ್ನು ಮೊಟ್ಟ ಮೊದಲ ಬಾರಿಗೆ ಕಟುವಾಗಿ ವಿಮರ್ಶಿಸಿದ್ದು, ಬಿ.ಕೃಷ್ಣಪ್ಪ. ಲೇಖಕ ಎದುರಿಸುತ್ತಿರುವ ಬೆದರಿಕೆ ಸವಾಲು ಎಲ್ಲಾ ಕಾಲದಲ್ಲಿಯೂ ಇದೆ. ಬಸವಲಿಂಗಪ್ಪನವರ ಮೇಲೆ ವಿರೋಧಗಳು ನಡೆದವು. ಬಂಡಾಯ ಸಾಹಿತ್ಯ ಮೂಲಭೂತವಾಗಿ ಸಾಂಸ್ಕೃತಿಕ ಚಳುವಳಿ. ವಿರೋಧ ವ್ಯಕ್ತಪಡಿಸಿದಾಗ ತಾಳ್ಮೆಯಿಂದ ಎದುರಿಸುವ ಗುಣ ಎಪ್ಪತ್ತರ ದಶಕದಲ್ಲಿತ್ತು. ಸಹನೆ ಅಸಹನೆ ಕಡೆಗೆ ಹೋಗಿದೆ. ಸಾಂಸ್ಕೃತಿಕ ಯಜಮಾನ್ಯದ ಸುಳಿಯಲ್ಲಿ ಸಿಕ್ಕಿಕೊಂಡಿರುವುದರಿಂದ ಬ್ರಾಹ್ಮಣ್ಯದ ದೇಶವಾಗಿದೆ ಎಂದು ವಿಷಾದಿಸಿದರು.
ಯಾವ ಸಾಹಿತ್ಯ ಬೇಕು ಎನ್ನುವುದಕ್ಕಿಂತ ಯಾರ್ಯಾರಿಗೆ ಸಾಹಿತ್ಯದಲ್ಲಿ ಸ್ಥಾನ ಕೊಡಬೇಕೆಂಬ ಚಿಂತನೆ ನಡೆಯುತ್ತಿದೆ. ಮಹಿಳಾ ಲೇಖಕಿ ಸಾರ ಅಬೂಬಕರ್ಗೆ ಪಂಪ ಪ್ರಶಸ್ತಿ ನೀಡಬೇಕೆಂದು ಆಯ್ಕೆ ಸಮಿತಿ ಸದಸ್ಯನಾಗಿದ್ದಾಗ ಪ್ರಸ್ತಾಪಿಸಿದ್ದೆ. ಮುಸ್ಮಿಂ ಎನ್ನುವ ಕಾರಣಕ್ಕಾಗಿ ಕೊಡಲಿಲ್ಲ. ಸಾಂಸ್ಕೃತಿಕ ಸವಾಲುಗಳ ನಡುವೆ ಲೇಖಕ ಬಿಕ್ಕಟ್ಟಿನ ಕುರಿತು ಬರೆಯಬೇಕು ಎಂದರು.
ಬರೆಯುವವರ ಮುಂದೆ ಅನೇಕ ಸವಾಲುಗಳಿವೆ. ಸಾಂಸ್ಕೃತಿಕ, ರಾಜಕೀಯ ಅಂಶಗಳನ್ನಿಟ್ಟುಕೊಂಡು ಬಿಕ್ಕಟ್ಟುಗಳಿಗೆ ಉತ್ತರ ಕಂಡುಕೊಳ್ಳಬೇಕು. ಸಾಮಾಜಿಕ ಜವಾಬ್ದಾರಿ, ಬದ್ದತೆ ದೃಷ್ಠಿಕೋನ ಬರಹಗಾರನಿಗಿರಬೇಕು. ಪ್ರಭುತ್ವದ ಕ್ರೂರತನ ಮೀರಿ ನಿಜವಾದ ಸತ್ಯವನ್ನು ಸಾಹಿತ್ಯದಲ್ಲಿ ಮೂಡಿಸಬೇಕಿದೆ. ರಾಜಕೀಯ ಹುನ್ನಾರಗಳನ್ನು ಬರವಣಿಗೆಯಲ್ಲಿ ಅನಾವರಣಗೊಳಿಸುವ ಸವಾಲು ಇಂದಿನ ಲೇಖಕನ ಮೇಲಿದೆ ಎಂದು ಹೇಳಿದರು.
ರೈತ ಮುಖಂಡ ಧನಂಜಯ ಹಂಪಯ್ಯನಮಾಳಿಗೆ, ನ್ಯಾಯವಾದಿ ದಿಲ್ಶಾದ್ ಉನ್ನೀಸಾ ಮಾತನಾಡಿದರು.
ಬಂಡಾಯ ಸಾಹಿತ್ಯ ಸಂಘಟನೆ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಪ್ರಾಚಾರ್ಯರುಗಳಾದ ಜೆ.ಯಾದವರೆಡ್ಡಿ, ಅಶೋಕ್ ಸಂಗೇನಹಳ್ಳಿ, ಶಿವಲಿಂಗಪ್ಪ, ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಿಗೆ, ಪ್ರೊ.ಲಿಂಗಪ್ಪ, ಆರ್ಥಿಕ ಚಿಂತಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಜಿ.ಎಸ್.ಉಜ್ಜಿನಪ್ಪ, ರೈತ ಮುಖಂಡರುಗಳಾದ ಟಿ.ನುಲೇನೂರು ಶಂಕರಪ್ಪ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಡಿ.ಗೋಪಾಲಸ್ವಾಮಿ ನಾಯಕ ಇನ್ನು ಅನೇಕರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.