i
ಕುಂಚಿಟಿಗರಿಗೆ ಓಬಿಸಿ ಮೀಸಲಾತಿ ನೀಡಿ ಒಕ್ಕಲಿಗರಿಗೆ ಶೇ.12ರಷ್ಟು ಮೀಸಲಾತಿ ಹೆಚ್ಚಿಸಿ-ನಂಜಾವಧೂತ ಸ್ವಾಮಿ…
ಚಂದ್ರವಳ್ಳಿ ನ್ಯೂಸ್, ಶಿರಾ:
ಕುಂಚಿಟಿಗ ಜಾತಿ ಅತ್ಯಂತ ಹಿಂದುಳಿದಿದ್ದು ಕೂಡಲೇ ರಾಜ್ಯ ಸರ್ಕಾರ ಕೇಂದ್ರದ ಓಬಿಸಿ ಮೀಸಲಾತಿಯ ಪಟ್ಟಿಗೆ ಸೇರ್ಪಡೆಗೊಳಿಸಲು ತುರ್ತಾಗಿ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಸ್ಫಟಿಕಪುರಿ ಸಂಸ್ಥಾನದ ನಂಜಾವಧೂತ ಸ್ವಾಮೀಜಿ ಒತ್ತಾಯಿಸಿದರು.
ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಚಿಕ್ಕ ಹುಲಿಕುಂಟೆ ಗ್ರಾಮದ ಶ್ರೀರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಶ್ರೀರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ರಂಗನಾಥ ಸ್ವಾಮಿ ಹೂವಿನ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಆಶೀರ್ವಚನ ನೀಡಿ ನಂತರ ಮಾತನಾಡಿದ ಅವರು, ಕುಂಚಿಟಿಗ ಸಮುದಾಯಕ್ಕೆ ಕೇಂದ್ರ ಓಬಿಸಿ ಮೀಸಲಾತಿ ಕೊಡಿಸಲು ರಾಜಕೀಯ ಪಕ್ಷಗಳು ಬದ್ಧತೆ ತೋರಬೇಕು. ಕುಂಚಿಟಿಗರಿಗೆ ಕೇಂದ್ರ ಓಬಿಸಿ ಮೀಸಲಾತಿ ಕಲ್ಪಿಸುವ ಇಚ್ಛಾಶಕ್ತಿ ಹೊಂದಿರಬೇಕು ಎಂದು ಹೇಳಿದರು. ರಾಜ್ಯದಲ್ಲಿ ಮುಂದೆ ಯಾವುದೇ ಸರ್ಕಾರ ಬಂದರೂ ಒಕ್ಕಲಿಗ ಸಮುದಾಯಕ್ಕೆ ಶೇ. 4 ರಿಂದ 12ಕ್ಕೆ ಮೀಸಲಾತಿ ಪ್ರಮಾಣ ಏರಿಸಬೇಕು. ಇದು ನಮ್ಮ ಬಹಳ ದಿನಗಳ ಬೇಡಿಕೆಯಾಗಿದೆ. ಎಲ್ಲ ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಬೇಕು. ಕೃಷಿಯನ್ನೇ ನಂಬಿ ಬದುಕುವ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳು ರಾಜ್ಯ ಸರ್ಕಾರ ನೀಡುವ 3ಎ ಮೀಸಲಾತಿಯಡಿ ಶೇ. 4ರಷ್ಟುಮೀಸಲಾತಿ ಪಡೆಯುತ್ತಿದ್ದಾರೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಒಕ್ಕಲಿಗ ಸಮುದಾಯದ ಬಡ ಕುಟುಂಬಗಳಿದ್ದು ಈ ಮೀಸಲಾತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶಗಳು ಕೈತಪ್ಪಿದ್ದು ಮೀಸಲಾತಿ ಪ್ರಮಾಣವನ್ನು ಕನಿಷ್ಠ ಶೇಕಡ 12ಕ್ಕಾದರೂ ಏರಿಕೆ ಮಾಡಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಒಕ್ಕಲಿಗರಿಗೆ 2ಸಿ ಮೀಸಲಾತಿ ಕಲ್ಪಿಸಿ ಹೆಚ್ಚಳ ಮಾಡಿದ್ದೇವೆ ಎಂಬ ಭರವಸೆ ನೀಡಿತ್ತು, ಆದರೆ ಅದಕ್ಕೆ ಅಡೆತಡೆಗಳು ಬಂದಿದ್ದು ಸರ್ಕಾರ ತಕ್ಷಣ ಅಡೆತಡೆಗಳನ್ನು ತೆರುವು ಮಾಡಿ ಹೆಚ್ಚಳವಾದ ಮೀಸಲಾತಿ ಪ್ರಮಾಣವನ್ನು ಅಧಿಸೂಚನೆ ಮೂಲಕ ಘೋಷಿಸಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು.
ಸಮಾಜ ಸೇವಕ ಶ್ರೀರಾಮೇಗೌಡ, ಹುಲಿಕುಂಟೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಮ್ಮ, ಉಪಾಧ್ಯಕ್ಷ ರವಿಕುಮಾರ್, ಮಾಜಿ ಉಪಾಧ್ಯಕ್ಷ ಗಿರೀಶ್, ನಿವೃತ್ತ ಶಿಕ್ಷಕ ಶಿವರಾಮಯ್ಯ, ವಕೀಲ ಕುಮಾರ್, ಲಕ್ಷ್ಮಣಗೌಡ ಸೇರಿದಂತೆ ಹಲವಾರು ಭಕ್ತರು ಹಾಜರಿದ್ದರು.