i
ಕಾಂಗ್ರೆಸ್ ತೊರೆದ ನೂರಾರು ಮುಸ್ಲಿಂ ಯುವಕರು ಜೆಡಿಎಸ್ ಸೇರ್ಪಡೆ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಿರಿಯೂರು ನಗರದ ಹೊರ ವಲಯದ ನಂಜಯ್ಯನ ಕೊಟ್ಟಿಗೆ ಬಳಿಯ ಆಶ್ರಯ ಕಾಲೋನಿಯ ನೂರಾರು ಮುಸ್ಲಿಂ ಸಮುದಾಯದ ಯುವಕರು ಕಾಂಗ್ರೆಸ್ ಪಕ್ಷ ತೋರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಪಿಲಾಜನಹಳ್ಳಿ ಎಂ.ಜಯಣ್ಣ ಎಲ್ಲ ಮುಸ್ಲಿಂ ಯುವಕರಿಗೆ ಜೆಡಿಎಸ್ ಪಕ್ಷ ಶಾಲು ಹಾಕು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿ, ಜೆಡಿಎಸ್ ಪಕ್ಷದ ಎಚ್.ಡಿ.ದೇವೇಗೌಡರು ಮುಸ್ಲಿಂ ಸಮಾಜಕ್ಕೆ ಶೇ.4ರಷ್ಟು ವಿಶೇಷ ಮೀಸಲಾತಿ ಕಲ್ಪಿಸಿದ್ದರು. ಈಗ ಮುಸ್ಲಿಂ ಸಮಾಜದ ಸಿಎಂ ಇಬ್ರಾಹಿಂ ಇವರನ್ನು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಅಷ್ಟೇ ಅಲ್ಲ ಜೆಡಿಎಸ್ ಅಧಿಕಾರಕ್ಕೆ ಬರಲಿದ್ದು ಸಿಎಂ ಇಬ್ರಾಹಿಂ ಅವರು ನೂರಷ್ಟು ಉಪ ಮುಖ್ಯಮಂತ್ರಿ ಆಗಲಿದ್ದಾರೆಂದು ಹೇಳಿದರು.
ಕಾಂಗ್ರೆಸ್ ಪಕ್ಷ ಮುಸ್ಲಿಂರನ್ನು ವೋಟ್ ಬ್ಯಾಂಕ್ ಮಾಡಿಕೊಂಡಿದೆ. ಮುಸ್ಲಿಂ ಸಮಾಜಕ್ಕೆ ಆಪತ್ತು ಎದುರುದಾಗ ಕಾಂಗ್ರೆಸ್ ಧ್ವನಿ ಎತ್ತಲಿಲ್ಲ, ಆದರೆ ಜೆಡಿಎಸ್ ಕುಮಾರಸ್ವಾಮಿ ಮತ್ತು ದೇವೇಗೌಡರು ಕೃತ್ಯವನ್ನು ಖಂಡಿಸಿದರು ಎಂದು ತಿಳಿಸಿದರು.
ಜೆಡಿಎಸ್ ಕೇವಲ ಹಳೆ ಮೈಸೂರು ಭಾಗಕ್ಕೆ ಸೀಮಿತವಲ್ಲ, ಉತ್ತರ ಕರ್ನಾಟಕದಲ್ಲಿ ಹಲವು ಲಿಂಗಾಯಿತ ಮುಖಂಡರು, ಇತರೆ ಜಾತಿ ಜನಾಂಗಗಳ ಮುಖಂಡರು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದು ಜೆಡಿಎಸ್ ಪಕ್ಷವು ರಾಜ್ಯದಲ್ಲಿ ಅಧಿಕಾರ ಹಿಡಿಯುವುದರಲ್ಲಿ ಅನುಮಾನವಿಲ್ಲ ಎಂದು ತಿಳಿಸಿದರು.
ಹಿರಿಯೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಇಬ್ಬರು ಅಭ್ಯರ್ಥಿಗಳು ಹೊರಗಿನವರಾಗಿದ್ದು ಸ್ಥಳೀಯರಾದ ಜೆಡಿಎಸ್ ಅಭ್ಯರ್ಥಿ ಎಂ.ರವೀಂದ್ರಪ್ಪನವರನ್ನು ಗೆಲ್ಲಿಸಬೇಕೆಂದು ಜಯಣ್ಣ ಮನವಿ ಮಾಡಿದರು.
ಮುಸ್ಲಿಂ ಯುವಕರೇ ಜೆಡಿಎಸ್ ಮುಖಂಡರಿಗೆ ಸಿಹಿ ನೀಡಿ ಜೆಡಿಎಸ್ ಪಕ್ಷ ಗೆಲ್ಲಿಸಿಕೊಳ್ಳಲು ಹೋರಾಟ ಮಾಡುತ್ತೇವೆಂದು ಭರವಸೆ ನೀಡಿದರು.
ಹಿರಿಯೂರು ವಿಧಾನಸಭಾ ಕ್ಷೇತ್ರದ ಗಾಯತ್ರಿಪುರ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ರವೀಂದ್ರಪ್ಪನವರು ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಊರಿನ ಮುಖಂಡರಾದ ಚಂದ್ರಣ್ಣ, ಹನುಮಂತರಾಜು, ಶ್ರೀನಿವಾಸ್ ರವರು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಅಭೂತಪೂರ್ವ ಸ್ವಾಗತ ಕೋರಿ ಮುಂಬರುವ ಚುನಾವಣೆಯಲ್ಲಿ ರವೀಂದ್ರಪ್ಪನವರನ್ನು ಜಯಶೀಲರನ್ನಾಗಿ ಮಾಡುವುದಾಗಿ ಭರವಸೆ ನೀಡಿದರು.