i
ದಾವಣಗೆರೆ ಜಿಲ್ಲಾ ನೂತನ ಎಸ್ಸಿ ಉಮಾ ಪ್ರಶಾಂತ್…
ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಉಮಾ ಪ್ರಶಾಂತ್ ಅವರನ್ನು ನಿಯೋಜಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಜಿಲ್ಲೆಗೆ ಎಸ್ಪಿಯಾಗಿ ಬಂದಿದ್ದ ಕೆ. ಅರುಣ್ ಅವರು 4 ತಿಂಗಳಲ್ಲೇ ವರ್ಗಾವಣೆಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ.ಎಸ್ಪಿ ಡಾ. ಕೆ. ಅರುಣ್ ಅವರ ವರ್ಗಾವಣೆಗೆ ಕಾಂಗ್ರೆಸ್ ಶಾಸಕರುಗಳಿಂದಲೇ ಒತ್ತಡವಿತ್ತು ಎನ್ನುವ ಮಾತುಗಳು ಕೇಳಿಬಂದಿದ್ದವು.ಕಳೆದ ತಿಂಗಳು ಹೊನ್ನಾಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಅವರು ಎಸ್ಪಿ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ತುಂಬಿದ ಸಭೆಯಲ್ಲಿಯೇ ಆಡಿದ್ದ ಮಾತುಗಳು ಈ ಆರೋಪವನ್ನು ಪುಷ್ಠಿಕರಿಸಿತ್ತು.ಅಲ್ಲದೇ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಕೂಡ ಶಾಂತನಗೌಡ ಅವರು ಮಾತ್ರವಲ್ಲದೇ ಮತ್ತೆ ಕೆಲವು ಶಾಸಕರು ಕೂಡ ಎಸ್ಪಿ ಅರುಣ್ ಅವರಿಂದ ಸಣ್ಣಪುಟ್ಟ ಮನೆಯ ಕಾಮಗಾರಿಗೆ ಮರಳು ಸಿಗದೆ ಪರದಾಡುವಂತಾಗಿರುವುದರಿಂದ ಅವರನ್ನು ವರ್ಗಾವಣೆ ಮಾಡಿರಿ ಎಂದು ಒತ್ತಾಯಿಸುತ್ತಿದ್ದಾರೆ ಎಂದು ಅದೇ ಕಾರ್ಯಕ್ರಮದಲ್ಲಿ ಹೇಳಿದ್ದರು. ಜತೆಗೆ ಎಸ್ಪಿ ಅರುಣ್ ಅವರು ಉತ್ತಮ ಅಧಿಕಾರಿಯಾಗಿದ್ದು, ಅವರಂತಹವರು ನಮ್ಮ ಜಿಲ್ಲೆಗೆ ಬೇಕು ಎಂದು ಸಹ ಹೇಳಿದ್ದರು.ಹೊನ್ನಾಳಿ ಕಾರ್ಯಕ್ರಮ ಮುಗಿದು ಸ್ವಲ್ಪ ದಿನಗಳಲ್ಲಿಯೇ ಕಾಕತಾಳೀಯ ಎಂಬಂತೆ ಎಸ್ಪಿ ವರ್ಗಾವಣೆ ಆದೇಶ ಅವರ ಕೈಸೇರಿತ್ತು. ಆದರೆ, ಜಿಲ್ಲೆಗೆ ಯಾವ ಪೊಲೀಸ್ ಅಧಿಕಾರಿಯನ್ನು ನಿಯುಕ್ತಿಗೊಳಿಸದೇ ಕೇವಲ ಎಸ್ಪಿ ಅರುಣ್ ಅವರನ್ನು ಕಲ್ಬುರ್ಗಿಗೆ ವರ್ಗಾಯಿಸಿತ್ತು. ಇಲ್ಲಿ ನೂತನ ಎಸ್ಪಿ ಬರುವವರೆಗೂ ಅರುಣ್ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.ಇದೀಗ ಜಿಲ್ಲೆಯ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಉಮಾ ಪ್ರಶಾಂತ್ ನಿಯೋಜನೆಗೊಂಡಿದ್ದಾರೆ. ಈ ಹಿಂದೆ ಕುಣಿಗಲ್, ಕಾರವಾರ, ಮಂಗಳೂರಿನಲ್ಲಿ ಕಾರ್ಯನಿರ್ವಹಿಸಿದ್ದ ಇವರು, ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲಸ ಮಾಡಿ ಅಲ್ಲಿಂದ ದಾವಣಗೆರೆ ಜಿಲ್ಲೆಗೆ ವರ್ಗಾವಣೆಗೊಂಡು ಆಗಮಿಸಿದ್ದಾರೆ.