i
ಪೊಲೀಸ್ ಪತ್ನಿಯರ ಸಂಭ್ರಮದ ದೀಪೋತ್ಸವ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಕೃತ್ತಿಕಾ ಮಾಸದಿಂದ ಕೂಡಿದ ಹುಣ್ಣಿಮೆಯ ಮಾಸವನ್ನು ಕಾರ್ತಿಕ ಮಾಸ ಎನ್ನುವರು. ಕೃತ್ತಿಕಾ ಮತ್ತು ರೋಹಿಣಿ ನಕ್ಷತ್ರಗಳು ಚಂದ್ರನಿಗೆ ಸಮೀಪವಾಗಿರುವ ಸಂದರ್ಭವಿದು.ಆಷಾಢ ಮಾಸ ಶುಕ್ಲ ಪಕ್ಷದ ಹುಣ್ಣಿಮೆಯಿಂದ ಕಾರ್ತಿಕ ಮಾಸದ ಹುಣ್ಣಿಮೆಯವರೆಗೆ ಚಾತುರ್ಮಾಸ್ಯ ವೃತಕ್ಕಾಗಿ ಮೀಸಲಾಗಿ ಇರಿಸಲಾಗಿದೆ. ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಭಗವಾನ್ ಮಹಾವಿಷ್ಣವು ಶಯನವನ್ನು ಪ್ರಾರಂಭಿಸುತ್ತಾನೆ. ನಂತರ ಕಾರ್ತಿಕ ಮಾಸದ ಏಕಾದಶಿಯಂದು ನಿದ್ದೆಯಿಂದ ಏಳುತ್ತಾನೆ. ಈ ದಿನವನ್ನು ಪ್ರಬೋಧಿನೀ ಏಕಾದಶಿ ಎನ್ನುವರು. ಕಾರ್ತಿಕ ಮಾಸದಲ್ಲಿ ಮಹಾವಿಷ್ಣವು ಪ್ರಸನ್ನಾವಸ್ಥೆಗೆ ಬರುವುದರಿಂದ ದೇವರ ಪ್ರಾತಃಕಾಲವಾದುದರಿಂದ ದೀಪಗಳನ್ನು ಬೆಳಗಿ ಸಂಭ್ರಮಿಸುವುದು ಉದ್ದೀಪನದ ಸಂಕೇತವಾಗಿದೆ.ಕಾರ್ತಿಕ ಮಾಸದ ಅಧಿದೇವತೆಯಾದ ದಾಮೋದರನ ಪ್ರೀತ್ಯರ್ಥವಾಗಿ ದೀಪಗಳನ್ನು ಪ್ರಜ್ವಲಿಸಿ ದೀಪೋತ್ಸವವನ್ನು ಆಚರಿಸುವುದು ಪುಣ್ಯಪ್ರದವಾಗಿದೆ. ಇದನ್ನು ದೀಪ ದಾನವೆಂದು ಹೇಳಲಾಗುತ್ತದೆ. ದೇವರ ಮುಂದೆ ದೀಪ ಉರಿಸುವುದನ್ನು ದೀಪದಾನ ಎನ್ನುತ್ತಾರೆ. ದೀಪವನ್ನು ಉರಿಸಿ ಭಕ್ತಿಯಿಂದ ಭಗವಂತನಿಗೆ ಸಮರ್ಪಿಸುವುದು ಎಂದರ್ಥ. ಆರಾಧನೆಗಳ ಸಂಬಂಧಿಸಿದ ವೃತಾದಿಗಳ ಸಂದರ್ಭದಲ್ಲಿ ಹೇಳಲಾಗಿರುವ ಯಮ ದೀಪದಾನ, ಆಕಾಶ ದೀಪದಾನ ಮೊದಲಾದ ಸಂದರ್ಭದಲ್ಲಿ ಆಯಾ ದೇವತೆಯನ್ನುದ್ದೇಶಿಸಿ ದೀಪ ಬೆಳಗುವುದು ಎಂದರ್ಥ.ಇಂತಹ ಮಹತ್ವದ ಕಾರ್ತಿಕ ದೀಪೋತ್ಸವವು ಶಿವಮೊಗ್ಗದ ಸಶಸ್ತ್ರ ಮೀಸಲು ಪಡೆ (ಡಿಎಆರ್) ಮೈದಾನದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಯಶಸ್ವಿಯಾಗಿ ಸಂಪನ್ನಗೊಂಡಿತು. ಪೊಲೀಸರು ಸದಾ ಕರ್ತವ್ಯದ ಒತ್ತಡದಲ್ಲಿರುತ್ತಾರೆ. ಅನೇಕ ಸಲ ಹಬ್ಬ, ಧಾರ್ಮಿಕ ಆಚರಣೆಗಳು. ಸಂಬಂಧಿಗಳು, ಸ್ನೇಹಿತರ ಸಭೆ- ಸಮಾರಂಭಗಳಲ್ಲೂ ಸಹ ಪಾಲ್ಗೊಳ್ಳಲು ಇವರಿಗೆ ಸಾಧ್ಯವಾಗುವುದಿಲ್ಲ.ಪೊಲೀಸರ ಪತ್ನಿ ಇದನ್ನೆಲ್ಲಾ ಸಹಿಸಿಕೊಂಡು ಸಹನೆ, ಸಮನ್ವಯತೆ ಮತ್ತು ಸಹಬಾಳ್ವೆಯಿಂದ ಸಂಸಾರ ನಿಭಾಯಿಸುತ್ತಾರೆ. ಪೊಲೀಸ್ ಪತಿ ಮತ್ತು ಕುಟುಂಬದ ಆರೋಗ್ಯ, ಆಯುಷ್ಯು, ಶ್ರೇಯಸ್ಸನ್ನು ಕೋರಿ ಮನೆ ಮತ್ತು ದೇವಸ್ಥಾನಗಳಲ್ಲಿ ಪೂಜೆ, ಹೋಮ ಮತ್ತಿತರೆ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಾರೆ.ಅಂತೆಯೇ ಪ್ರತಿವರ್ಷದಂತೆ ಈ ವರ್ಷವೂ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವವು ಸಡಗರ- ಸಂಭ್ರಮದಿಂದ ನಡೆಯಿತು. ಸುಮಾರು ೪೦ ವರ್ಷಗಳ ಹಿಂದೆ ಸ್ಥಾಪಿತವಾಗಿರುವ ಈ ದೇವಸ್ಥಾನದಲ್ಲಿರುವ ಮೂರ್ತಿಗೆ ಪೊಲೀಸ್ ಪತ್ನಿಯರು ದೀಪ ಬೆಳಗಿಸಿ ಸಂಭ್ರಮಿಸಿದರು. ಅಲ್ಲದೆ ದೇವಿಗೆ ಈ ಬಾರಿ ಹೊಸ ಬೆಳ್ಳಿ ಮುಖವಾಡ ತೊಡಿಸಿ ಪೂಜಿಸಲಾಯಿತು.ಪ್ರತಿ ವರ್ಷ ಕಾರ್ತಿಕ ದೀಪೋತ್ಸವದೊಂದಿಗೆ ಪ್ರತಿ ಹುಣ್ಣಿಮೆಯಂದು ಸತ್ಯ ನಾರಾಯಣ ಪೂಜೆ, ಪ್ರತಿ ಶುಕ್ರವಾರದಂದು ವಿಶೇಷ ಪೂಜೆ ಹಾಗೂ ಪ್ರಸಾದ ವಿನಿಯೋಗ ಕೂಡ ಇಲ್ಲಿ ನಡೆಯುತ್ತಿದೆ.ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿಎಆರ್ ಡಿಎಸ್ಪಿ ಟಿ.ಪಿ. ಕೃಷ್ಣಮೂರ್ತಿ, ಇನ್ಸ್ಪೆಕ್ಟರ್ ಕೆ.ಎಸ್. ಪ್ರಶಾಂತ್ ಮತ್ತಿತರರು ಕಾರ್ತಿಕ ದೀಪೋತ್ಸವದಲ್ಲಿ ಭಕ್ತಿ- ಭಾವದ ಸಂಭ್ರಮದಲ್ಲಿ ಪಾಲ್ಗೊಂಡರು.