i
ರೇಣುಕಾ ಯಲ್ಲಮ್ಮ ಕ್ಷೇತ್ರ ಅಭಿವೃದ್ಧಿ ಮಂಡಳಿ ರಚನೆ…
ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಕರ್ನಾಟಕ ವಿಧಾನಸಭೆಯಿಂದ ಅಂಗೀಕಾರರೂಪದಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ವಿಧೇಯಕ 2023ನ್ನು ಕಾನೂಯ, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ ಅವರು ವಿಧಾನ ಪರಿಷತ್ನಲ್ಲಿ ಮಂಡಿಸಿದರು.
ಈ ವಿಧೇಯಕದ ಕುರಿತು ಪರಿಷತ್ನಲ್ಲಿ ಪರ್ಯಾಯಲೋಚನೆ ನಡೆಯಿತು. ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್ ಮಾತನಾಡಿ, ಪ್ರಾಧಿಕಾರ ರಚುಸುತ್ತಿರುವುದು ಸ್ವಾಗತಾರ್ಹವಾಗಿದ್ದು, ಕನಿಷ್ಠ 500 ಕೋಟಿ ರೂ.ಮೀಸಲಿಟ್ಟು ಅಭಿವೃದ್ಧಿ ಕಾರ್ಯಕೈಗೊಳ್ಳಬೇಕು ಎಂದು ಸಲಹೆ ಮಾಡಿದರು.
ಸದಸ್ಯರಾದ ತೇಜಶ್ವಿನಿಗೌಡ ಅವರು ಮಾತನಾಡಿ, ಬಡವರು, ಬಲ್ಲಿದರೆನ್ನದೇ ಎಲ್ಲ ವರ್ಗಗಳ ಕೋಟ್ಯಂತರ ಭಕ್ತರು ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಬರುತ್ತಾರೆ. ಧಾರ್ಮಿಕ ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿಯಾಗಲಿ. ಮುಗ್ದ ಭಕ್ತರು ಭಕ್ತಿಯಿಂದ ಲೇಪಿಸುವ ಭಂಡಾರದಲ್ಲಿ ರಸಾಯನಿಕಗಳನ್ನು ಬೆರೆಸುವುದನ್ನು ತಡೆಯಬೇಕು. ಮಲಪ್ರಭೆ, ತುಂಗಭದ್ರೆ ಸೇರಿದಂತೆ ಎಲ್ಲ ನದಿ ಪಾತ್ರಗಳಲ್ಲಿ ಆರತಿ ಕಾರ್ಯಗಳು ನಡೆಯಲಿ ಎಂದರು.
ಸದಸ್ಯರಾದ ಕೇಶವಪ್ರಸಾದ್ ಅವರು ಮಾತನಾಡಿ, ದೇಶದ ನಾನಾ ಭಾಗಗಳಿಂದ ಕೋಟ್ಯಂತರ ಜನ ಭೇಟಿ ನೀಡುವ ಪವಿತ್ರ ಧಾರ್ಮಿಕ ಸ್ಥಳವನ್ನು ವಿಮಾನ ನಿಲ್ದಾಣ, ವಂದೇ ಭಾರತ್ ರೈಲು ಸಂಪರ್ಕದ ಸೌಕರ್ಯ ಬಳಸಿಕೊಂಡು ಅಭಿವೃದ್ಧಿಪಡಿಸಬೇಕು ಎಂದರು.
ಸದಸ್ಯರಾದ ನವೀನ್, ಟಿ.ಎ.ಶರವಣ, ಪ್ರತಾಪಸಿಂಹ ನಾಯಕ್, ನಾಗರಾಜ ಯಾದವ್, ಹೇಮಲತಾ ನಾಯಕ, ಭಾರತಿ ಶೆಟ್ಟಿ, ಚನ್ನರಾಜ ಹಟ್ಟಿಹೊಳಿ, ಕೋಟ ಶ್ರೀನಿವಾಸ ಪೂಜಾರಿ, ಬಿ.ಕೆ.ಹರಿಪ್ರಸಾದ, ಕೆ.ಎ.ತಿಪ್ಪೇಸ್ವಾಮಿ, ಉಮಾಶ್ರೀ, ಪಿ.ಹೆಚ್.ಪೂಜಾರ, ಹನುಮಂತ ನಿರಾಣಿ, ಸುನೀಲ್ ವಲ್ಯಾಪುರೆ ಮತ್ತಿತರರು ಮಾತನಾಡಿ, ನಾಡಿನ ಸವಾರ್ಂಗೀಣ ಅಭಿವೃದ್ಧಿಗೆ ಇಂತಹ ಧಾರ್ಮಿಕ ಪ್ರವಾಸೋದ್ಯಮ ಯೋಜನೆ ರೂಪಿಸುವುದು ಸ್ವಾಗತಾರ್ಹ ಎಂದರು.
ಇದೆ ವೇಳೆ ಸಚಿವರಾದ ಹೆಚ್.ಕೆ.ಪಾಟೀಲ ಪ್ರತಿಕ್ರಿಯಿಸಿ, ಪಕ್ಷಬೇಧವಿಲ್ಲದೇ ಎಲ್ಲಾ ಸದಸ್ಯರು ಒಕ್ಕೋರಲಿನಿಂದ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ಭಾರತ ಹುಣ್ಣಿಮೆಯ ದಿನದಂದು ಒಂದೇ ದಿನ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಜನ ಸೇರಿ ವಸತಿ ಮಾಡಿ, ಅಲ್ಲಿಯೇ ಸಿಹಿ ಹೋಳಿಗೆ ಮಾಡಿ, ನೈವೇದ್ಯ ಒಯ್ಯುವ ಕಟ್ಟುನಿಟ್ಟಿನ ಶ್ರದ್ಧೆ, ಭಕ್ತಿಯ ಆಚರಣೆಗಳು ಇಲ್ಲಿ ಸಾಂಗವಾಗಿ ನಡೆಯುತ್ತವೆ. ದೊಡ್ಡ ಪ್ರಮಾಣದ ಭಕ್ತರು ಆಗಮಿಸುವ ಈ ಪವಿತ್ರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಎಲ್ಲರ ಸಹಕಾರ ಬೇಕು. ಸರ್ಕಾರದ ಜೊತೆಗೆ ಖಾಸಗಿ ವ್ಯಕ್ತಿ, ಸಂಸ್ಥೆಗಳು ಕೈ ಜೋಡಿಸಬೇಕು. ಪ್ರಸಿದ್ಧ ಕ್ಷೇತ್ರಕ್ಕೆ ಈವರೆಗೆ ರೈಲು ಸಂಪರ್ಕ ಇಲ್ಲದಿರುವುದು ವಿಷಾದನೀಯ. ಗೋಕಾಕ್ ರೋಡ್ ರೈಲು ನಿಲ್ದಾಣ-ಸವದತ್ತಿ ಮಾರ್ಗವಾಗಿ ಧಾರವಾಡಕ್ಕೆ ಸಂಪರ್ಕ ಕಲ್ಪಿಸುವ ರೈಲು ಯೋಜನೆ ಮುಂಬರುವ ದಿನಗಳಲ್ಲಿ ಜಾರಿ ಬರಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ಸಭಾಪತಿ ಬಸವರಾಜ ಹೊರಟ್ಟಿ ಅವರು ವಿಧೇಯಕವನ್ನು ಧ್ವನಿ ಮತಕ್ಕೆ ಹಾಕಿದಾಗ ಸದಸ್ಯರು ಸರ್ವಾನುಮತದಿಂದ ಬೆಂಬಲ ವ್ಯಕ್ತಪಡಿಸಿದರು. ವಿಧೇಯಕವು ವಿಧಾನ ಪರಿಷತ್ನಲ್ಲಿ ಅಂಗೀಕಾರವಾಗಿದೆ ಎಂದು ಸಭಾಪತಿಯವರು ಪ್ರಕಟಿಸಿದರು.