i
ನೇಮಕಾತಿಯಲ್ಲಿನ ಭ್ರಷ್ಟಾಚಾರ ಹಾಗೂ ಅನುಚಿತ ವಿಧಾನಗಳ ಪ್ರತಿಬಂಧಕ ಕಾಯ್ದೆ ಅಂಗೀಕಾರ…
ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿನ ಭ್ರಷ್ಟಾಚಾರ ಹಾಗೂ ಅನುಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ವಿಧೇಯಕ 2023ನ್ನು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಅವರು ವಿಧಾನ ಪರಿಷತ್ ಸದನದಲ್ಲಿ ಮಂಡಿಸಿದರು.
ಇದೆ ವೇಳೆ ಮಾತನಾಡಿದ ಅವರು, ಕರ್ನಾಟಕದ ಸಾರ್ವಜನಿಕ ಪರೀಕ್ಷೆಗಳ ಅಕ್ರಮಗಳು ಹಾಗೂ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಬಳಕೆಯು ಮಿತಿ ಮೀರುತ್ತಿದೆ. ಈ ವಿಷಯವು ನೀಚ ವ್ಯಕ್ತಿಗಳಿಗೆ ಹಾಗೂ ನಿಹಿತವಾದ ಹಿತಾಸಕ್ತಿಗಳಿಗೆ ಅಗಾದ ಪ್ರಮಾಣದ ಹಣಕಾಸಿನ ಅನುಕೂಲಗಳನ್ನು ಒಳಗೊಂಡಿರುವುದು ಮಾತ್ರವಲ್ಲದೇ ಕರ್ನಾಟಕದ ಯುವ ಜನತೆಯ ಪ್ರಗತಿಯ ಅವಕಾಶಗಳನ್ನು ಸಹ ಕುಂಠಿತಗೊಳಿಸುತ್ತಿದೆ. ಈ ಅಕ್ರಮ ಜಾಲವು ನ್ಯಾಯ ಸಮ್ಮತ ರೀತಿಯಲ್ಲಿ ಸಾರ್ವಜನಿಕ ಪರೀಕ್ಷೆಗಳನ್ನು ನಡೆಸುವುದನ್ನು ವಿಫಲಗೊಳಿಸಲು ಹೊಸ ಹೊಸ ಭ್ರಷ್ಟ ಮತ್ತು ಅನುಚಿತ ವಿಧಾನಗಳನ್ನು ಬಳಸುವ ಮೂಲಕ ಲಕ್ಷಾಂತರ ಪ್ರತಿಭಾನ್ವಿತ ಮತ್ತು ಕಠಿಣ ಪರಿಶ್ರಮಪಡುವ ಯುವಜನರಿಗೆ ಅವಕಾಶಗಳಿಂದ ವಂಚಿತಗೊಳಿಸುತ್ತಿವೆ.
ರಾಜ್ಯ ಸರ್ಕಾರದ ಅಡಿಯಲ್ಲಿನ ಹುದ್ದೆಗಳ ನೇಮಕಾತಿಯ ವಿಷಯದಲ್ಲಿ ಪ್ರಶ್ನೆಪತ್ರಿಕೆಗಳ ಸೋರಿಕೆಯು ಕೇವಲ ಜನಸಾಮಾನ್ಯರ ನಂಬಿಕೆಗೆ ದ್ರೋಹವಾಗುವುದು ಮಾತ್ರವಲ್ಲದೇ ರಾಜ್ಯವು ಗಣನೀಯವಾದ ಆಡಳಿತಾತ್ಮಕ ವೆಚ್ಚವನ್ನೂ ಸಹ ಅನುಭವಿಸುತ್ತಿದೆ ಮತ್ತು ಪರೀಕ್ಷೆ ನಡೆಸುವಿಕೆಯು ಪ್ರಶ್ನಾರ್ಹವಾದಾಗ ರಾಜ್ಯದ ಗೌರವಕ್ಕೂ ಕೂಡ ಚ್ಯುತಿಯಾಗುತ್ತಿದೆ. ಭಾರತ ಸಂವಿಧಾನದ ಅನುಚ್ಛೇದ 16 (1) ರಂತೆ ಸಮಾನ ಅವಕಾಶಗಳ ನಿಯಮಾವಳಿಗಳಿಗೆ ಒಳಪಟ್ಟು ನ್ಯಾಯ ಸಮ್ಮತ ಹಾಗೂ ನ್ಯಾಯಯುತ ಕಾರ್ಯವಿಧಾನದ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡುವುದು ಸಂವಿಧಾನದ ಅಗತ್ಯತೆಯಾಗಿದೆ. ಪ್ರಶ್ನೆಪತ್ರಿಕೆಗಳ ಸೋರಿಕೆ ಅಪರಾಧವನ್ನು ಮತ್ತು ಸ್ನಾಯತ್ತ ಸಂಸ್ಥೆಗಳು, ಪ್ರಾಧಿಕಾರಗಳು, ಮಂಡಳಿಗಳು ಅಥವಾ ನಿಗಮಗಳನ್ನು ಒಳಗೊಂಡಂತೆ ರಾಜ್ಯ ಸರ್ಕಾರದಡಿಯಲ್ಲಿನ ಯಾವುದೇ ಹುದ್ದೆಗೆ ನೇಮಕಾತಿ ಉದ್ದೇಶಕ್ಕಾಗಿ ಸಾರ್ವಜನಿಕ ಪರೀಕ್ಷೆಗಳಲ್ಲಿ ಅನುಚಿತ ವಿಧಾನವನ್ನು ಬಳಸುವುದನ್ನು ಪ್ರತಿಬಂಧಿಸಲು ಮತ್ತು ತಡೆಗಟ್ಟಲು ಪರಿಣಾಮಕಾರಿ ಕ್ರಮಗಳನ್ನು ಉಪಬಂಧಿಸಲು ಈ ವಿಧೇಯಕವನ್ನು ಪ್ರಸ್ತಾವಿಸಲಾಗಿದೆ.
ಈ ಹೊಸ ಕಾನೂನು ಸಾರ್ವಜನಿಕ ಪರೀಕ್ಷೆಯಲ್ಲಿ ಅನುಚಿತ ವಿಧಾನಗಳ ಹೆಚ್ಚಳ ಮತ್ತು ಪ್ರವೃತ್ತಿಯ ವಿರುದ್ಧ ಪ್ರತಿಬಂಧಕ ಕೆಲಸ ಮಾಡುವುದು ಮತ್ತು ಅಂತಹ ತಂತ್ರಗಳನ್ನು ಅವಲಂಬಿಸುವ ಪರೀಕ್ಷಾರ್ಥಿಗಳು ಮತ್ತು ಅಪರಾಧಿಕ ಸೂತ್ರದಾರರನ್ನೂ ಸಹ ಪ್ರತಿಬಂಧಿಸುವ ಕೆಲಸ ಮಾಡುವುದು. ಹೊಸ ಕಾನೂನು ಹತ್ತು ವಷರ್Àಗಳವರೆಗೆ ದಂಡನೆಯ ಮತ್ತು ಜುಲ್ಮಾನೆಯ ರೂಪದಲ್ಲಿ ಹತ್ತು ಕೋಟಿಗಳವರೆಗಿನ ದಂಡವನ್ನು ಹಾಗೂ ಸ್ವತ್ತುಗಳ ಜಪ್ತಿ ಮತ್ತು ಮುಟ್ಟುಗೋಲು ಹಾಕಿಕೊಳ್ಳುವಂಥ ಕಠಿಣ ಉಪಬಂಧಗಳನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು.
ಸದಸ್ಯರಾದ ಅಡಗೂರು ಹೆಚ್.ವಿಶ್ವನಾಥ, ನವೀನ್, ಎನ್.ರವಿಕುಮಾರ್, ಡಿ.ಎಸ್.ಅರುಣ್, ಎಸ್.ವಿ.ಸಂಕನೂರ, ತೇಜಸ್ವಿನಿಗೌಡ, ಮರಿತಿಬ್ಬೇಗೌಡ, ಕೇಶವಪ್ರಸಾದ್, ಕೆ.ಎ.ತಿಪ್ಪೇಸ್ವಾಮಿ, ಎಂ.ಆರ್.ಸೀತಾರಾಮ್, ಭಾರತಿ ಶೆಟ್ಟಿ, ವೈ.ಎ.ನಾರಾಯಣಸ್ವಾಮಿ, ನಾಗರಾಜ ಯಾದವ್, ಹಣಮಂತ ನಿರಾಣಿ, ಡಾ.ಸಾಬಣ್ಣ ತಳವಾರ ಅವರು ವಿಧೇಯಕದ ಕುರಿತು ಸಲಹೆ ಸೂಚನೆಗಳನ್ನು ನೀಡಿದರು.
ಸದಸ್ಯರ ಅಭಿಪ್ರಾಯದಂತೆ ನಿರ್ದಿಷ್ಟ ಪಡಿಸಲಾದ ಸ್ವಾಯತ್ತ ಸಂಸ್ಥೆಗಳು, ಪ್ರಾಧಿಕಾರಗಳು, ಮಂಡಳಿಗಳು ಅಥವಾ ನಿಗಮಗಳೂ ಸೇರಿದಂತೆ ರಾಜ್ಯ ಸರ್ಕಾರದ ಅಡಿಯಲ್ಲಿನ ಯಾವುದೇ ಹುದ್ದೆಗಳ ನೇಮಕಾತಿ ಪರೀಕ್ಷೆಗಳನ್ನು ಸರ್ಕಾರಿ ಸಂಸ್ಥೆಗಳಲ್ಲಿ ನಡೆಸಲು ಸಿದ್ದವಿದ್ದು, ಈ ಅಧಿನಿಯಮದಡಿ ಅಪರಾಧ ಎದುರಿಸುವ ಆಡಳಿತ ಮಂಡಳಿ ಅಥವಾ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡುವ, ಮಾನ್ಯತೆಯನ್ನು ರದ್ದುಪಡಿಸುವ ಬಗ್ಗೆ ಕಾನೂನಿನಲ್ಲಿ ಸೇರ್ಪಡೆ ಮಾಡಲಾಗುವುದು ಎಂದರು. ಪರ್ಯಾಯಲೋಚನೆ ಬಳಿಕ ವಿಧೇಯಕವು ವಿಧಾನ ಪರಿಷತ್ತಿನಲ್ಲಿ ಸರ್ವಾನುಮತದಿಂದ ಅಂಗೀಕಾರ ಪಡೆಯಿತು.