i
ಕೆಎಸ್ಆರ್ ಟಿಸಿ ಬಸ್ ಜಫ್ತಿ ಮಾಡಿದ ನ್ಯಾಯಾಲಯ…
ಚಂದ್ರವಳ್ಳಿ ನ್ಯೂಸ್, ವಿಜಯನಗರ:
ಹೊಸಪೇಟೆಯ ಜೆಎಂಎಫ್ಸಿ ನ್ಯಾಯಾಲಯದ ಆವರಣಕ್ಕೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ (ಕೆಕೆಎಸ್ಆರ್ಟಿಸಿ ) ಬಸ್ ಬಂದು ನಿಂತುಕೊಂಡಿತ್ತು. ನ್ಯಾಯಾಲಯದ ಒಂದಷ್ಟು ಅಧಿಕಾರಿಗಳು, ಪೊಲೀಸರೂ ಜತೆಗಿದ್ದ ಕಾರಣ, ಆ ಬಸ್ ನಂತರ ಮುಂದಕ್ಕೆ ಚಲಿಸಲಿಲ್ಲ. ಅಪಘಾತ ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡಿಲ್ಲ ಎಂಬ ಕಾರಣಕ್ಕೆ ಆ ಬಸ್ ಅನ್ನು ಜಪ್ತಿ ಮಾಡಲಾಗಿತ್ತು.
ಹೌದು, ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿ ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿರುವ ಕಾರಣ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಅನ್ನು ಹೊಸಪೇಟೆ ಜೆಎಂಎಫ್ಸಿ ಕೋರ್ಟ್ ಶುಕ್ರವಾರ ಜಪ್ತಿ ಮಾಡಿದೆ. ನಾಲ್ಕು ವರ್ಷ ಹಿಂದಿನ ಅಪಘಾತ ಪ್ರಕರಣ ಇದು. ಕೇಸ್ ವಿಚಾರಣೆ ಬಳಿಕ ಮೃತರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಕೋರ್ಟ್ ಆದೇಶಿಸಿತ್ತು. ಆದರೆ ಅದನ್ನು ನಿಗಮ ಪಾಲಿಸಿರಲಿಲ್ಲ.
ಹೊಸಪೇಟೆ ವ್ಯಾಪ್ತಿಯಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ೨೦೨೦ರಲ್ಲಿ ಅಪಘಾತಕ್ಕೆ ಈಡಾಗಿತ್ತು. ಆ ಅಪಘಾತದಲ್ಲಿ ಟಿಬಿ ಡ್ಯಾಂ ನಿವಾಸಿಗಳಾದ ವಸಂತ ಕುಮಾರ್ ಮತ್ತು ವಿಜಯಾ ಎಂಬುವವರು ಮೃತಪಟ್ಟಿದ್ದರು. ಈ ಕುರಿತು ಕೇಸ್ ದಾಖಲಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ೨೦೨೩ರಲ್ಲಿ ಮೃತರ ಕುಟುಂಬದವರಿಗೆ ಅನುಕ್ರಮವಾಗಿ ೧೫ ಲಕ್ಷ ರೂಪಾಯಿ ಮತ್ತು ೨೧ ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ ಆದೇಶ ನೀಡಿತ್ತು. ಆದರೆ ಕೋರ್ಟ್ ಆದೇಶವನ್ನು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಪಾಲಿಸಲಿಲ್ಲ. ಈ ವಿಚಾರವಾಗಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಗಮನಸೆಳೆದರೂ ನಿರ್ಲಕ್ಷಿಸಿತ್ತು. ಈ ಹಿನ್ನೆಲೆಯಲ್ಲಿ ಬಸ್ ಜಫ್ತಿಗೆ ನ್ಯಾಯಾಲಯ ಆದೇಶಿಸಿತ್ತು.