i
ಸಿಪಿ ಮೂಡಲಗಿರಿಯಪ್ಪ ಅವರ ಅಂತ್ಯ ಸಂಸ್ಕಾರಕ್ಕೆ ಜನ ಸಾಗರ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಸಿ.ಪಿ. ಮೂಡಲಗಿರಿಯಪ್ಪ ಅವರ ಅಂತ್ಯ ಸಂಸ್ಕಾರ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿರತಹಳ್ಳಿಯ ಸ್ವಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಜರುಗಿತು.
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ಶಿರಾ ಶಾಸಕ ಟಿ.ಬಿ.ಜಯಚಂದ್ರ ಇವರ ಸಮ್ಮುಖದಲ್ಲಿ ಸಿ ಪಿ ಮೂಡಲಗಿರಿಯಪ್ಪ ಇವರ ಏಕೈಕ ಪುತ್ರ ಡಾ.ಸಿ.ಎಂ.ರಾಜೇಶ್ ಗೌಡರು ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ಕುಂಚಿಟಿಗ ಜಾತಿಯ ಆಚಾರದಂತೆ ಪೂರ್ಣಗೊಳಿಸಿದರು.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸಿ.ಪಿ.ಮೂಡಲಗಿರಿಯಪ್ಪ ಇವರನ್ನು ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಧ್ಯಾಹ್ನ ನಿಧನರಾಗಿದ್ದರು.
ಸಿಪಿಎಂ ಅವರ ಹುಟ್ಟೂರು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿರತಹಳ್ಳಿ ಗ್ರಾಮದ ಗಣೇಶಗುಡಿ ಎಸ್ಟೇಟ್ ನಲ್ಲಿ ಅಂತ್ಯ ಕ್ರಿಯೆಯನ್ನು ಭಾನುವಾರ ನಡೆಸಲಾಯಿತು.
ಮೃತ ಮೂಡಲಗಿರಿಯಪ್ಪನವರು ಪತ್ನಿ ಲಕ್ಷ್ಮಿದೇವಿ, ಪುತ್ರ ಹಾಗೂ ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ, ಪುತ್ರಿ ಡಾ.ಕವಿತಾ ಸೇರಿದಂತೆ ಅಪಾರ ಬಂಧು ಮಿತ್ರರು ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಿದ್ದರು.
ಅಂತ್ಯ ಸಂಸ್ಕಾರಕ್ಕೆ ಜನ ಸಾಗರ-
ಸರಳ ಸಜ್ಜನಿಕೆಯುಳ್ಳ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ಇವರ ಅಂತ್ಯ ಸಂಸ್ಕಾರಕ್ಕೆ ಚಿತ್ರದುರ್ಗ, ತುಮಕೂರು ಜಿಲ್ಲೆಗಳು ಸೇರಿದಂತೆ ರಾಜಧಾನಿ ಬೆಂಗಳೂರಿನಿಂದಲೂ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.
1985ರಲ್ಲಿ ಶಿರಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿದ್ದ ಅವರು ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಬರೊಬ್ಬರಿ ಮೂರು ಬಾರಿ, ಅಂದರೆ 1989, 1991 ಮತ್ತು 1998 ರಲ್ಲಿ ವಿಜಯಶಾಲಿಯಾಗಿ ಸಂಸದರಾಗಿದ್ದರು. ರಾಜಕೀಯದಲ್ಲಿ ಅಜಾತಶತ್ರು ಆಗಿದ್ದ ಮೂಡಲಗಿರಿಯಪ್ಪ ಇವರು ಸರಳ, ಸಜ್ಜನಿಕೆಯ ಸ್ನೇಹ ಜೀವಿಯಾಗಿದ್ದರು. ಹಾಗಾಗಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎನ್ನದೆ ಪಕ್ಷತೀತವಾಗಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿ ಕಂಬನಿ ಮಿಡಿದರು.
ಗಣ್ಯರ ದಂಡು-ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ಶಾಸಕ ಟಿ.ಬಿ.ಜಯಚಂದ್ರ, ಗೋಪಿಕುಂಟೆ ಈಶ್ವರಯ್ಯ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ವಿಧಾನ ಪರಿಷತ್ ನಾಯಕ ರವಿಕುಮಾರ್, ಆಂದ್ರ ಪ್ರದೇಶದ ಮಾಜಿ ಸಚಿವ ರಘುವೀರ್ ರೆಡ್ಡಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಪಿಲಾಜನಹಳ್ಳಿ ಎಂ.ಜಯಣ್ಣ, ಎಸ್.ಆರ್.ಎಸ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಮಾಜಿ ಜಿಪಂ ಅಧ್ಯಕ್ಷ ಮೀಸೆ ಮಹಲಿಂಗಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಕೆ.ದ್ಯಾಮಣ್ಣ, ಕೆ.ಟಿ.ರುದ್ರಮುನಿ, ಜೆಡಿಎಸ್ ಮುಖಂಡ ಹೆಚ್.ನಾಗರಾಜ್, ಚಿದಾನಂದ ಸೇರಿದಂತೆ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಹಲವಾರು ಮುಖಂಡರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಅಂತಿಮ ನಮನ ಸಲ್ಲಿಸಿದ್ದಾರೆ.