i
ವರದಿ:ಎಚ್.ಸಿ.ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು-ಪುಣೆ-ಮುಂಬೈ ಮಾರ್ಗದಲ್ಲಿ ಮತ್ತೊಂದು ಹೊಸ ಎಕ್ಸ್ ಪ್ರೆಸ್ ಹೈವೇ ಶೀಘ್ರ ಅನುಷ್ಠಾನವಾಗಲಿದೆ. ದೇಶದ ಪ್ರಮುಖ ನಗರಗಳ ನಡುವೆ ತ್ವರಿತವಾಗಿ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಈಗಾಗಲೇ ದೇಶಾದ್ಯಂತ ಹಲವು ಸೂಪರ್ ಎಕ್ಸ್ಪ್ರೆಸ್ ಹೆದ್ದಾರಿಗಳ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಈಗ ಪ್ರಸ್ತಾಪಿಸಲಾಗುತ್ತಿರುವ ಮತ್ತೊಂದು ಸೂಪರ್ ಎಕ್ಸ್ ಪ್ರೆಸ್ ಹೈವೇ ಎಂದರೆ ಬೆಂಗಳೂರು-ತುಮಕೂರು-ಚಿತ್ರದುರ್ಗ-ವಿಜಯನಗರ-ಕೊಪ್ಪಳ-ಗದಗ-ಬಾಗಲಕೋಟೆ-ಬೆಳಗಾವಿ-ಮಹಾರಾಷ್ಟ್ರದ- ಸಾಂಗ್ಲಿ- ಸತಾರಾ- ಪುಣೆ ಮಾರ್ಗವಾಗಿ ಮುಂಬೈ ನಗರ ಸೇರಿಕೊಳ್ಳುವ ಹೊಸ ಪ್ರತ್ಯೇಕ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಚಾಲನೆ ದೊರೆಯಲಿದೆ. ಪುಣೆ ಮೂಲಕ ಮುಂಬೈಗೆ ಬೆಂಗಳೂರಿಗೆ ವಿಶೇಷ ಎಕ್ಸ್ಪ್ರೆಸ್ ವೇ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು ಇದರಿಂದಾಗಿ 2 ನಗರಗಳ ನಡುವಿನ ಪ್ರಯಾಣದ ಸಮಯ ಮತ್ತು ದೂರ ಗಣನೀಯ ಪ್ರಮಾಣದಲ್ಲಿ ತಗ್ಗಲಿದೆ.
ಮಹಾರಾಷ್ಟ್ರದ ಪುಣೆಯ ಕಂಜಾಲೆ ಎನ್ನುವ ನಗರದಿಂದ ಆರಂಭವಾಗುವ ಈ ಹೊಸ ಯೋಜನೆ ಶುರುವಾಗಲಿದೆ. ಅಲ್ಲಿ ಮಹಾರಾಷ್ಟ್ರ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ರಿಂಗ್ ರಸ್ತೆ ನಿರ್ಮಾಣಕ್ಕೆ ಚಿಂತನೆ ನಡೆಸುತ್ತಿದೆ. ಮುಂಬೈ-ಪುಣೆ ಎಕ್ಸ್ಪ್ರೆಸ್ ವೇಯ ಕುರ್ಶೇ ಎಂಬಲ್ಲಿಂದ ಈ ರಿಂಗ್ ರಸ್ತೆ ಸಮಾನಾಂತರವಾಗಿ ಹೊಸ ಕಾಮಗಾರಿ ಶುರುವಾಗಲಿದ್ದು, ಕರ್ಜಾತ್ ಎಂಬಲ್ಲಿಯ ವರೆಗೆ ನಿರ್ಮಾಣವಾಗಲಿದೆ. ಅಲ್ಲಿಂದ ಬೆಂಗಳೂರಿನ ಮುತ್ತಗದ ಹಳ್ಳಿಯವರೆಗೆ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ ಎಚ್ಎಐ) ಕಾಮಗಾರಿ ಕೈಗೆತ್ತಿಕೊಳ್ಳಲಿದೆ. ಈ ಕುರಿತು ಚಂದ್ರವಳ್ಳಿ ದಿನ ಪತ್ರಿಕೆ ಮತ್ತು ಚಂದ್ರವಳ್ಳಿ ನ್ಯೂಸ್ ಆನ್ಲೈನ್ ಕಳೆದ 4 ತಿಂಗಳಿಂದೆಯೇ ಸಮಗ್ರವಾದ ಸುದ್ದಿ ಪ್ರಕಟಿಸಿತ್ತು ಎನ್ನುವುದನ್ನು ಸ್ಮರಿಸಬಹುದಾಗಿದೆ.
ಕೇವಲ ಪುಣೆ-ಬೆಂಗಳೂರು ನೇರ ಸೂಪರ್ ಹೈವೇ ಅಲ್ಲದೆ ಹೆದ್ದಾರಿ ಸಮೀಪದಲ್ಲಿ ಸಮಾನಾಂತರವಾಗಿ ತುರ್ತು ಸಂದರ್ಭಗಳಲ್ಲಿ ವಿಮಾನ ಇಳಿದಾಣಗಳ ನಿರ್ಮಾಣಕ್ಕೆ ಪ್ರಸ್ತಾಪ ಮಾಡಲಾಗಿದೆ. ಭವಿಷ್ಯದ ದೃಷ್ಠಿಯಿಂದಾಗಿ ಸೂಪರ್ ಹೈವೇ ಸಾಗುವ ಮಾರ್ಗದ ಜಮೀನುಗಳಲ್ಲಿ 100 ಮೀಟರ್ ಪ್ರದೇಶವನ್ನು ಹೆದ್ದಾರಿ ಪ್ರಾಧಿಕಾರ ವಶಪಡಿಸಿಕೊಳ್ಳಲು ಸಿದ್ಧತೆ ನಡೆಸಿದೆ.
ಆರು ರಿಂದ ಎಂಟು ಲೇನ್ಗಳ ರಸ್ತೆ ನಿರ್ಮಾಣ ಮಾಡುವ ಸಾಧ್ಯತೆ ಇದೆ. ದೊಡ್ಡ ದೊಡ್ಡ ನಗರಗಳ ಮಧ್ಯ ಸಂಚಾರ ದಟ್ಟಣೆ ತಗ್ಗುವುದರಿಂದ ವಾಣಿಜ್ಯಿಕ ಚಟುವಟಿಕೆ ಹೆಚ್ಚಳಕ್ಕೆ ಅನುಕೂಲದ ಜೊತೆಯಲ್ಲಿ ಸಮಯದ ಉಳಿತಾಯ ಆಗಲಿದೆ. ಉತ್ತರ ಭಾರತದ ಗುಜರಾತ್-ನಾಸಿಕ್- ಪುಣೆ- ಸತಾರಾ-ಕೊಲ್ಹಾಪುರ-ನವದೆಹಲಿ ಸೇರಿದಂತೆ ಮತ್ತಿರ ಆರ್ಥಿಕ ವಲಯಗಳಲ್ಲಿ ತೀವ್ರತರವಾದ ಬೆಳವಣಿಗೆ ನಿರೀಕ್ಷಿಸಲಾಗಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಸಾಕಷ್ಟು ಸಲ ಈ ಹೊಸ ಹೈವೇ ಕುರಿತು ಪ್ರಸ್ತಾಪ ಮಾಡಿದ್ದು ಈಗಾಗಲೇ ಮಹಾರಾಷ್ಟ್ರದಲ್ಲಿ ಯೋಜನೆಯ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸಲಾಗುತ್ತಿದೆ. ಡಿಸೆಂಬರ್ ತಿಂಗಳಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿ ಅಂತಿಮ ಒಪ್ಪಿಗೆ ಪಡುಯುವ ನಿರೀಕ್ಷೆ ಇದೆ.
ಕಾಮಗಾರಿ ಪೂರ್ಣಗೊಂಡರೆ ಬೆಂಗಳೂರು-ಮುಂಬೈ ನಡುವೆ ಸುಮಾರು 100 ಕಿಲೋ ಮೀಟರ್ ಅಂತರ ಕಡಿಮೆಯಾಗಲಿದೆ ಎನ್ನಲಾಗುತ್ತಿದೆ ಅಷ್ಟೇ ಅಲ್ಲ ಹೆದ್ದಾರಿ ಸಂಚಾರ ಆರಂಭವಾದರೆ 6-8 ಗಂಟೆ ಸಮಯದೊಳಗೆ ಬೆಂಗಳೂರಿಂದ ಬಾಂಬೆಗೆ ಹೋಗಬಹುದಾಗಿದೆ. ಒಟ್ಟು 699 ಕಿ.ಮೀ. ದೂರದ ಪುಣೆಯಿಂದ ಬೆಂಗಳೂರಿಗೆ ಎಕ್ಸ್ಪ್ರೆಸ್ ಹೈವೇ ನಿರ್ಮಾಣಕ್ಕೆ 50 ಸಾವಿರ ಕೋಟಿ ರೂ.ಅಂದಾಜು ವೆಚ್ಚ ನಿಗದಿ ಮಾಡಲಾಗಿದೆ. ಮುಂದಿನ 2024ನೇ ಸಾಲಿನಲ್ಲಿ ಸೂಪರ್ ಹೈವೇ ನಿರ್ಮಾಣ ಯೋಜನೆಗೆ ಟೆಂಡರ್ ಕರೆದು ವರ್ಕ್ ಆರ್ಡರ್ ನೀಡುಲು ಉದ್ದೇಶಿಸಲಾಗಿದೆ. 2028ರ ವೇಳೆಗೆ ಯೋಜನೆ ಪೂರ್ತಿಗೊಳ್ಳಲಿದ್ದು ಪ್ರತಿ ಗಂಟೆಗೆ 120 ಕಿ.ಮೀ.ವೇಗದಲ್ಲಿ ವಾಹನಗಳು ಸಂಚರಿಸಲಿವೆ.