i
ಬಾಳೆದಿಂಡಿನಿಂದ ಅಯ್ಯಪ್ಪಸ್ವಾಮಿಯ ಹದಿನೆಂಟು ಮೆಟ್ಟಿಲು ನಿರ್ಮಾಣ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಾಮುಂಡೇಶ್ವರಿ ಅಯ್ಯಪ್ಪ ಭಜನಾ ಮಂಡಳಿಯ ಹದಿನಾರನೆ ವರ್ಷದ ಪಡಿಪೂಜೆ ಮಹೋತ್ಸವ ಹಾಗೂ ಪಂಚಲೋಕ ವಿಗ್ರಹಕ್ಕೆ ಅಭಿಷೇಕ ಭಾನುವಾರ ಕೆ.ಎಸ್.ಆರ್.ಟಿ.ಸಿ. ಡಿಪೋ ರಸ್ತೆಯಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಶ್ರದ್ದಾಭಕ್ತಿಯಿಂದ ನಡೆಯಿತು.
ಅಯ್ಯಪ್ಪಸ್ವಾಮಿ ಪಂಚಲೋಹ ವಿಗ್ರಹಕ್ಕೆ ಅರಿಶಿಣ, ಭಸ್ಮ, ಕರ್ಪೂರ, ತುಪ್ಪ, ಜೇನುತುಪ್ಪ, ವಿವಿಧ ಬಗೆಯ ಹಣ್ಣು, ಪುಷ್ಪ, ಎಳನೀರು, ಪನ್ನೀರು, ದ್ರಾಕ್ಷಿ, ಗೋಡಂಬಿ, ಉತ್ತುತ್ತಿಯಿಂದ ಅಭಿಷೇಕ ಮಾಡಲಾಯಿತು. ಬಾಳೆದಿಂಡಿನಿಂದ ಹದಿನೆಂಟು ಮೆಟ್ಟಿಲುಗಳನ್ನು ನಿರ್ಮಿಸಿ ಅಯ್ಯಪ್ಪಸ್ವಾಮಿಯನ್ನು ಪೂಜಿಸಲಾಯಿತು.
ಚಾಮುಂಡೇಶ್ವರಿ ಅಯ್ಯಪ್ಪ ಭಜನಾ ಮಂಡಳಿ, ಬರಗೇರಿ ಆಂಜನೇಯ ಗ್ರೂಪ್ಸ್ ವತಿಯಿಂದ ಹಮ್ಮಿಕೊಂಡಿದ್ದ ಭಜನೆಯಲ್ಲಿ ರಮೇಶ್ ಗುರುಸ್ವಾಮಿ, ಉದಯ್ ಗುರುಸ್ವಾಮಿ, ಭದ್ರಾವತಿ ಶ್ರೀನಿವಾಸ್, ಬೆಂಗಳೂರಿನ ಕೆಂಪೆಗೌಡ, ರಾಜೀವ್ಸ್ವಾಮಿ, ಸೀನಣ್ಣಸ್ವಾಮಿ ಸೇರಿದಂತೆ ನೂರಾರು ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಭಜನೆಗಳನ್ನು ಹಾಡಿ ಭಕ್ತಿಭಾವದಲ್ಲಿ ಮಿಂದೆದ್ದರು.
ರಾಂದಾಸ್ಸ್ವಾಮಿ, ಕೆ.ಟಿ.ಗಂಗಾಧರ್ಸ್ವಾಮಿ ಇವರುಗಳನ್ನು ಸನ್ಮಾನಿಸಲಾಯಿತು. ಚಾಮುಂಡೇಶ್ವರಿ ಅಯ್ಯಪ್ಪ ಭಜನಾ ಮಂಡಳಿಯ ಅಧ್ಯಕ್ಷ ಕೆ.ಟಿ.ಶಿವಕುಮಾರ್ಸ್ವಾಮಿ ಪಡಿಪೂಜೆಯಲ್ಲಿ ಮಾತನಾಡಿ ಜ್ಞಾನದ ದೀಪ,
ಭಕ್ತಿಯ ಸಂಕೇತ ಶಬರಿ ಮಲೆಯಲ್ಲಿ ನೆಲೆಸಿರುವ ಶಬರಿ ಗಿರೀಶ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಪ್ರತಿ ವರ್ಷವೂ ತೆರಳುವ ಮುನ್ನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಪಡಿಪೂಜೆ ನಡೆಸಿಕೊಂಡು ಬರಲಾಗುತ್ತಿದೆ ಇದಕ್ಕೆ ಎಲ್ಲಾ ಮಾಲಾಧಾರಿಗಳ ಸಹಕಾರವಿದೆ ಎಂದು ಸ್ಮರಿಸಿದರು.