i
ಅಂಬೇಡ್ಕರ್ರವರನ್ನು ಚುನಾವಣೆಯಲ್ಲಿ ಪ್ರತಿ ಬಾರಿ ಸೋಲಿಸಲಾಗಿದೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದಲಿತರ ಧೈರ್ಯ, ಸ್ವಾಭಿಮಾನ, ಶೌರ್ಯ ಕೇವಲ ಭೀಮಾ ಕೋರೆಗಾವ್ ವಿಜಯೋತ್ಸವದಲ್ಲಿ ಮಾತ್ರವಲ್ಲ ಸುಮಾರು ಕಡೆ ದಲಿತರ ಹೋರಾಟವಿದೆ ಎಂದು ಚಿಂತಕ ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಪ್ರೊ.ಸಿ.ಕೆ.ಮಹೇಶ್ ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ವಿಚಾರ ವೇದಿಕೆಯಿಂದ ಪತ್ರಕರ್ತರ ಭವನದಲ್ಲಿ ನಡೆದ ಭೀಮಾ ಕೋರೆಗಾವ್ ೨೦೫ ನೇ ವಿಜಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ಲಾಸಿ ಕದನದಲ್ಲಿ ಈಸ್ಟ್ ಇಂಡಿಯಾ ಕಂಪನಿ ವಿರುದ್ದವೂ ದಲಿತರು ಯುದ್ದ ಮಾಡಿದ್ದಾರೆ. ಹಾಗಾಗಿ ಭೀಮಾ ಕೋರೆಗಾವ್ಗಷ್ಟೆ ಏಕೆ ದಲಿತರು ಹೋರಾಟ ಮಾಡಿದ್ದಾರೆಂದು ಹೇಳಿಕೊಳ್ಳುವುದು ಸೂಕ್ತವಲ್ಲ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ರವರನ್ನು ಮಹಾರಾಷ್ಟ್ರ ಚುನಾವಣೆಯಲ್ಲಿ ಪ್ರತಿ ಬಾರಿ ಸೋಲಿಸಲಾಗಿದೆ. ಬುದ್ದನಿಗೆ ದೊಡ್ಡ ಶಕ್ತಿ ನೀಡಿದ್ದು, ದಲಿತರು. ಭಾರತದ ದಲಿತರು, ಹಿಂದುಳಿದವರು ಬ್ರಾಹ್ಮಣ್ಯಶಾಹಿಗಳ ಎದುರು ದಿಟ್ಟ ಹೋರಾಟ ಮಾಡಿದ್ದಾರೆ. ಪೇಶ್ವೆಗಳ ಆಳ್ವಿಕೆ ತುಂಬಾ ಕಡಿಮೆ ಪ್ರದೇಶದಲ್ಲಿತ್ತು. ಕರ್ನಾಟಕದ ಚಂದ್ರಗುತ್ತಿಯ ಹೋರಾಟ ಬೇರೆ ಯಾವುದೇ ಹೋರಾಟಕ್ಕೆ ಕಡಿಮೆಯೇನಲ್ಲ. ಆದರೆ ಅದರ ಬಗ್ಗೆ ಅಷ್ಟೊಂದು ಪ್ರಚಾರವಾಗುತ್ತಿಲ್ಲ. ದೇಶದ ಹಳ್ಳಿ ಹಳ್ಳಿಗಳಲ್ಲಿಯೂ ದಲಿತರು ಬ್ರಿಟೀಷರ ವಿರುದ್ದ ಹೋರಾಟ ಮಾಡಿದ್ದಾರೆಂದು ನೆನಪಿಸಿದರು.
ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕ ಎಂ.ವಿ.ನಾಗರಾಜ್ ಅಂಬೇಡ್ಕರ್ ಮತ್ತು ಬುದ್ದನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಸಮಾರಂಭ ಉದ್ಗಾಟಿಸಿ ಮಾತನಾಡಿ ಇತಿಹಾಸದಲ್ಲಿ ಕೆಲವು ಸಂಗತಿಗಳು ಮಣ್ಣಿನಲ್ಲಿ ಮಣ್ಣಾಗಿ ಹೋಗಿದೆ. ಯಾವುದೇ ರಾಜಕೀಯ ಪಕ್ಷಗಳು ತನ್ನ ಸ್ವಾರ್ಥ ಹಾಗೂ ಅಧಿಕಾರಕ್ಕಾಗಿಯಷ್ಟೆ, ಕೋರೆಗಾವ್ನಂತ ವಿಚಾರಗಳನ್ನು ಇಂದಿಗೂ ಕತ್ತಲೆ, ಅಜ್ಞಾನದಲ್ಲಿಟ್ಟಿವೆ. ಭೀಮಾ ಕೋರೆಗಾವ್ಗೂ ಡಾ.ಬಿ.ಆರ್.ಅಂಬೇಡ್ಕರ್ಗೂ ಹತ್ತಿರದ ಸಂಬಂಧವಿತ್ತು. ೧೮೧೮ ರಲ್ಲಿ ವಿಜಯೋತ್ಸವ ಸಿಕ್ಕಿತು ಎಂದು ಹೇಳಿದರು. ಶಿವಾಜಿ ರೆಜಿಮೆಂಟ್ನಲ್ಲಿಯೂ ಮಹಾಸ್ವಾತಂತ್ರ್ಯ ಸಂಗ್ರಾಮವೇ ಆಗಿರುವುದು. ಕೋರೆಗಾವ್ ವಿಜಯೋತ್ಸವವನ್ನು ಯಾರು ಮರೆಯಬಾರದು. ಮುಂದಿನ ಪೀಳಿಗೆಗೆ ತಿಳಿಸಬೇಕಿದೆ ಎಂದು ನುಡಿದರು.
ಸಹ ಶಿಕ್ಷಕ ಸಿದ್ದೇಶ್ ಕೆ.ಮಾತನಾಡಿ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿರುವ ಕೋರೆಗಾವ್ಗೂ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ಗೂ ನಂಟಿದೆ. ಇದರ ಮೇಲೆ ಬೆಳಕು ಚೆಲ್ಲಿದವರು ಅಂಬೇಡ್ಕರ್ ಎನ್ನುವುದನ್ನು ದಲಿತರು ಮರೆಯಬಾರದು. ಶಿವಾಜಿ ಮಹಾರಾಜರ ಆಡಳಿತದಲ್ಲಿ ಪೇಶ್ವೆಗಳ ಕಾಲ ಭಾರತದಲ್ಲಿ ಕರಾಳ ದಿನವಾಗಿತ್ತು. ಬ್ರಿಟೀಷರು ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುವುದಕ್ಕಾಗಿ ಯುದ್ದ ಮಾಡುತ್ತಿದ್ದರು ಎಂದರು. ಎಸ್.ಜೆ.ಎಂ.ಕಾನೂನು ಮಹಾವಿದ್ಯಾಲಯದ ಉಪನ್ಯಾಸಕ ರಮೇಶ್ ಎಂ.ಮಾತನಾಡಿ ಅಂಬೇಡ್ಕರ್ ಕೋರೆಗಾವ್ ವಿಜಯೋತ್ಸವಕ್ಕೆ ಭೇಟಿ ನೀಡಿದ್ದರು. ವೈಚಾರಿಕ ವಾಸ್ತವತೆ ಎಲ್ಲಿ ಇರುವುದಿಲ್ಲವೋ ಅಲ್ಲಿ ಅಲ್ಲಿ ದ್ವೇಷ, ಅಸೂಯೆ, ಹಿಂಸೆ ಇರುತ್ತದೆ. ೨೫೦ ಮಹಾರ್ ಸೈನಿಕರು ಪೇಶ್ವೆ ಮಹಾರಾಜರ ಆಳ್ವಿಕೆಯಲ್ಲಿದ್ದ ಸೈನಿಕರ ವಿರುದ್ದ ಹೋರಾಟ ಮಾಡಿದ್ದು, ಐತಿಹಾಸಿಕ ಘಟನೆ. ಹುತಾತ್ಮರಾದ ೨೨ ಯೋಧರ ಹೆಸರುಗಳನ್ನು ೬೫ ಅಡಿ ಎತ್ತರದ ಕಂಬದಲ್ಲಿ ಕೆತ್ತಿಸಲಾಗಿದೆ. ಕೋರೆಗಾವ್ ೧೨ ಗಂಟೆಗಳ ಕಾಲ ನಡೆದ ಯುದ್ದ ಎಂದು ಹೇಳಿದರು.
ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಸಂಜೀವಕುಮಾರ್ ಪೋತೆ ಮಾತನಾಡಿ ದಲಿತರಿಗೆ ಅಸ್ಮಿತೆಯನ್ನು ತಂದುಕೊಡುವಲ್ಲಿ ಕೋರೆಗಾವ್ ವಿಜಯೋತ್ಸವ ಪ್ರಮುಖ ಪಾತ್ರ ವಹಿಸಿದೆ.
ದಲಿತರ ಸ್ವಾಭಿಮಾನ ಹೆಚ್ಚಿಸಿ ಅಸ್ಪೃಶ್ಯತೆ ನಿವಾರಿಸುವುದಕ್ಕಾಗಿ ಕೋರೆಗಾವ್ ಯುದ್ದ ನಡೆಯಿತು. ೫೬ ಜಾತಿಯ ಸೈನಿಕರಿದ್ದರು. ಶಿವಾಜಿ ಮಹಾರಾಜರ ಆಸ್ಥಾನದಲ್ಲಿ ಸ್ವಾಭಿಮಾನ, ದಲಿತರ ವಿಮೋಚನೆಯಾಗಿ ಹಕ್ಕುಗಳು ಸಿಕ್ಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬರಹಗಾರ ಡಾ.ಎಂ.ವೇದಾಂತ ಏಳಂಜಿ ಮಾತನಾಡಿ ಸ್ವಾತಂತ್ರ್ಯ ಚಳುವಳಿಯಲ್ಲಿ ಬಹುಸಂಖ್ಯಾತರ ಹಕ್ಕುಗಳನ್ನು ಮುಚ್ಚಿ ಹಾಕಲಾಯಿತು.
೨೫೦ ಸೈನಿಕರು ಒಳಗೊಂಡಂತೆ ಶಿವಾಜಿ ಮಹಾರಾಜರ ವಿರುದ್ದ ನಡೆದ ಯುದ್ದದಲ್ಲಿನ ಜಯ ಕದನದ ರೂಪ ಮಹಾ ತಿರುವು ಪಡೆದುಕೊಂಡಿತು. ಬ್ರಿಟೀಷರ ವಿರುದ್ದ ಹೋರಾಡಿದ ಟಿಪ್ಪುಸುಲ್ತಾನನನ್ನು ರಾಜನನ್ನಾಗಿ ಮಾಡಿಲಾಯಿತು. ಅದೆ ಮರಾಠ ಸೈನಿವನ್ನು ಸೋಲಿಸಿದ ದಲಿತರನ್ನು ಯಾವ ರಾಜರನ್ನಾಗಿ ಮಾಡಿದರು. ಕೋರೆಗಾವ್ ಕದನಕ್ಕೆ ದೂರದೃಷ್ಠಿಯಿದೆ. ಹಾಗಾಗಿ ಕೋರೆಗಾವ್ ಕದನದ ಹಿನ್ನೆಲೆಯನ್ನು ಮುಚ್ಚಿ ಹಾಕಬಹುದೇನೋ ಎನ್ನುವ ಸಂದೇಹವೂ ಕಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅನಿಲ್ ಜಂಬೆ ಮತ್ತು ಸಂಗಡಿಗರು ಜಾಗೃತಿ ಗೀತೆಗಳನ್ನು ಹಾಡಿದರು. ವಿಶ್ವಾನಂದ ವದ್ದಿಕೆರೆ ದಿಕ್ಸೂಚಿ ನುಡಿಗಳನ್ನಾಡಿದರು. ಸಹಾಯಕ ಪ್ರಾಧ್ಯಾಪಕ ಡಾ.ಕುಮಾರ್ ಹೆಚ್.ನಿರೂಪಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕ ಹನುಮಂತಪ್ಪ ಸ್ವಾಗತಿಸಿದರು. ಶಿಕ್ಷಕ ಕಸವನಹಳ್ಳಿ ಶಿವಣ್ಣ, ದಲಿತ ಮುಖಂಡ ಬಿ.ರಾಜಪ್ಪ, ಲೇಖಕ ಹೆಚ್.ಆನಂದ್ಕುಮಾರ್, ಬೈಲಮ್ಮ, ಹನುಮಂತಪ್ಪ ಇನ್ನು ಮೊದಲಾದವರು ಭಾಗವಹಿಸಿದ್ದರು.